ಕಳೆದ 13 ವರ್ಷಗಳಿಂದ ಮಂಗಗಳನ್ನು ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಶಿರಸಿಯ ಮಳಲಗಾವಿನ ಸೂರಕ್ಕ ಶೆಟ್ಟಿ ಅವರು ಕೃಷಿ ಹೊಂಡಕ್ಕೆ ಬಿದ್ದು ಸಾವನಪ್ಪಿದ್ದಾರೆ.
ಸೂರಕ್ಕ ಸೀನ ಶೆಟ್ಟಿ (77) ಅವರು 15 ವರ್ಷಗಳ ಹಿಂದೆ ಬಿಣಗಿ ತುಯಲುಕೊಪ್ಪದ ನಾಗೇಶ ರಾಮಾ ಗಾಣಿಗ ಅವರಿಗೆ ಪರಿಚಯವಾಗಿದ್ದರು. ಮೀನು ವ್ಯಾಪಾರಿಯಾಗಿರುವ ನಾಗೇಶ ಗಾಣಿಗ ಅವರನ್ನು ಸೂರಕ್ಕ ಅವರು `ಮಗ ಮಗ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಹೀಗಾಗಿ ನಾಗೇಶ ಗಾಣಿಗ ಅವರು ಸೂರಕ್ಕ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದ್ದರು. 13 ವರ್ಷಗಳಿಂದ ಸೂರಕ್ಕ ಶೆಟ್ಟಿ ಅವರು ನಾಗೇಶ ಗಾಣಿಗ ಅವರ ಮನೆಯಲ್ಲಿ ವಾಸವಾಗಿದ್ದರು.
ತೋಟಕ್ಕೆ ಬರುವ ಮಂಗಗಳನ್ನು ಓಡಿಸುವುದು ಸೂರಕ್ಕ ಶೆಟ್ಟಿ ಅವರ ನಿತ್ಯದ ಕಾಯಕವಾಗಿತ್ತು. ತೋಟಕ್ಕೆ ಬರುವ ಕಾಡು ಪ್ರಾಣಿಗಳನ್ನು ಓಡಿಸಿಯೇ ಅವರು ಅಲ್ಲಿ ಬದುಕು ಕಟ್ಟಿಕೊಂಡಿದ್ದರು. ಈ ನಡುವೆ ಸೂರಕ್ಕ ಶೆಟ್ಟಿ ಅವರು ಸರಾಯಿ ಸೇವನೆ ಶುರು ಮಾಡಿದ್ದು, ನಾಗೇಶ ಗಾಣಿಗ ಅವರು ದುಶ್ಚಟ ಬಿಡುವಂತೆ ಸೂಚಿಸಿದ್ದರು. ಆದರೆ, `ಸರಾಯಿ ಸೇವಿಸದೇ ಇದ್ದರೆ ಓಡಾಡಲು ಆಗುವುದಿಲ್ಲ’ ಎಂದು ಸೂರಕ್ಕ ಹೇಳಿದ್ದರು.
ಹೀಗಿರುವಾಗ ಫೆಬ್ರವರಿ 12ರಂದು ನಾಗೇಶ ಗಾಣಿಗ ಅವರು ಸೂರಕ್ಕನ್ನು ಭೇಟಿಯಾಗಿ ಮಾತನಾಡಿದ್ದರು. 13ರಂದು ಹೊನ್ನೇಶ್ವರಿ ಎಂಬಾತರು ಫೋನ್ ಮಾಡಿ `ಸೂರಕ್ಕ ಕಾಣುತ್ತಿಲ್ಲ. ಮನೆಯೂ ಬಾಗಿಲು ಹಾಕಿದೆ’ ಎಂಬ ವಿಷಯ ಮುಟ್ಟಿಸಿದರು. ನಾಗೇಶ ಗಾಣಿಗ ಅವರು ಮಳಗಿಯಿಂದ ತುಯಲುಕೊಪ್ಪಕ್ಕೆ ಬಂದು ಹುಡುಕಾಟ ನಡೆಸಿದರು. ಆಗ, ಮನೆ ಬಳಿಯಿರುವ ಕೃಷಿ ಹೊಂಡದಲ್ಲಿ ಸೂರಕ್ಕ ಅವರ ಶವ ಕಾಣಿಸಿತು.
ಸರಾಯಿ ನಶೆ ಅಥವಾ ಕಾಲು ಜಾರಿ ಬಿದ್ದು ಸೂರಕ್ಕ ಸಾವನಪ್ಪಿರುವ ಬಗ್ಗೆ ನಾಗೇಶ ಗಾಣಿಗ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.