ನಾಲ್ಕು ದಶಕದ ಹಿಂದೆ ಕರಾವಳಿ ಭಾಗದಲ್ಲಿ ಬೆಳೆದ ಗೇರು ಗಿಡಗಳಿಗೆ ಸಿಂಪಡಿಸಿದ ಕ್ರಿಮಿನಾಶಕದ ದುಷ್ಪರಿಣಾಮ ಈಗಲೂ ಪ್ರಭಾವ ಬೀರುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಚೆಗೆ ನಡೆಸಿದ ಅಧ್ಯಯನದಲ್ಲಿ ಹೊಸದಾಗಿ 680 ಎಂಡೋಸಲ್ಪಾನ್ ರೋಗಿಗಳು ಪತ್ತೆಯಾಗಿದ್ದಾರೆ. 228 ಮಕ್ಕಳಲ್ಲಿಯೂ ಹೊಸದಾಗಿ ಈ ರೋಗ ಕಾಣಿಸಿಕೊಂಡಿದೆ.
Advertisement. Scroll to continue reading.
ಅoಗವೈಕಲ್ಯ, ಬುದ್ಧಿ ಮಾಂದ್ಯತೆ, ಬಹು ಅಂಗಾoಗ ವೈಫಲ್ಯ ಈ ರೋಗದ ಪ್ರಮುಖ ಲಕ್ಷಣ. 1986ರಿಂದ 2011ರ ಅವಧಿಯಲ್ಲಿ ಗೇರು ಬೀಜದ ಇಳುವರಿಗೆ ಅಡ್ಡಿಯಾಗಿದ್ದ ಸೊಳ್ಳೆಗಳ ನಾಶಕ್ಕೆ ಗೇರು ಬೆಳೆದ ಭೂಮಿಗೆ ಎಂಡೋಸಲ್ಪಾನ್ ವಿಷ ದ್ರಾವಣ ಸಿಂಪಡಿಸಲಾಗಿತ್ತು. ಅದರ ದುಷ್ಪರಿಣಾಮ ಸ್ಥಳೀಯ ನಿವಾಸಿಗಳ ಮೇಲಾಗಿದ್ದು, ಗರ್ಭಿಣಿಯರು, ಬಾಣಂತಿಯರ ಜೊತೆ ಹಸುಗೂಸುಗಳಲ್ಲಿಯೂ ಸಮಸ್ಯೆ ಕಾಣಿಸಿತು. ಪುರುಷರು ಸಹ ಉಸಿರಾಟ ಸಮಸ್ಯೆ, ಪಾರ್ಶ್ವವಾಯು, ನರದೌರ್ಭಲ್ಯಕ್ಕೆ ಒಳಗಾದರು. ಅದರ ದುಷ್ಪರಿಣಾಮ ಮೂರನೇ ತಲೆಮಾರಿಗೂ ಮುಂದುವರೆದಿರುವುದು ಈಚೆಗೆ ಬೆಳಕಿಗೆ ಬಂದಿದೆ.
ಶಿರಸಿಯ ಸ್ಕೋಡ್ವೆಸ್ ಸಂಸ್ಥೆ ಎಂಡೋಸಲ್ಪಾನ್ ಸಂತ್ರಸ್ತರ ಪರವಾಗಿ ಹೋರಾಡುತ್ತಿದೆ. ಅದೇ ಸಂಸ್ಥೆ ಸಮಗ್ರ ಅಧ್ಯಯನ ನಡೆಸಿದ್ದು, ಆ ಅಧ್ಯಯನದಲ್ಲಿ ಹೊಸದಾಗಿ ಎಂಡೋಸಲ್ಪಾನ್ ರೋಗಿಗಳಿರುವುದು ಪತ್ತೆಯಾಗಿದೆ. 40 ವರ್ಷಗಳಿಂದ ಎಂಡೋಸಲ್ಫಾನ್ ಬಾಧೆಗೆ ಒಳಪಟ್ಟು ನರಕ ಯಾತನೆ ಅನುಭವಿಸುತ್ತಿರುವ ಕುಟುಂಬಗಳಿಗಾಗಿ ಸ್ಕೊಡ್ವೆಸ್ ಸಂಸ್ಥೆ `ಆಶಾಕಿರಣ’ ಎಂಬ ಯೋಜನೆ ರೂಪಿಸಿದೆ. ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಆದೇಶದಂತೆ ಆರೋಗ್ಯ ಇಲಾಖೆ ನಡೆಸಿದ ಪುನರ್ ಸಮೀಕ್ಷೆಯಲ್ಲಿ ಸುಮಾರು 680ಕ್ಕೂ ಹೆಚ್ಚು ಹೊಸ ಎಂಡೋ ಬಾಧಿತರನ್ನು ಸ್ಕೋಡ್ವೆಸ್ ಸಂಸ್ಥೆ ಗುರುತಿಸಿದೆ. ಆ ರೋಗಿಗಳಲ್ಲಿ 228 ಪುಠಾಣಿ ಮಕ್ಕಳು ಸಮಸ್ಯೆಗೆ ಸಿಲುಕಿದವರಾಗಿದ್ದಾರೆ.
18 ವರ್ಷದೊಳಗಿನ ಮಕ್ಕಳು ಹಾಗೂ ಅವರ ಪಾಲಕರ ಪುನರ್ವಸತಿಗಾಗಿ `ಆಶಾಕಿರಣ’ ಯೋಜನೆ ರೂಪಿಸಲಾಗಿದ್ದು, ತಾಲೂಕು ಕೇಂದ್ರದಲ್ಲಿ ಫಿಸಿಯೋಥೆರಪಿ ಘಟಕ, ಚಿಕಿತ್ಸೆಯಿಂದ ಗುಣಮುಖರಾದವರಿಗೆ ಸ್ವ ಉದ್ಯೋಗ ತರಬೇತಿ, ವಿಶೇಷ ಚೇತನರ ಪರಿಕರಗಳ ವಿತರಣೆ ಹಾಗೂ ಪೂರಕ ಕಾರ್ಯಕ್ರಮಗಳೂ ಹಾಗೂ ಎಂಡೋಬಾಧಿತರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಪ್ರಯತ್ನವನ್ನು ಸ್ಕೋಡ್ವೆಸ್ ಸಂಸ್ಥೆಯೂ ಆಶಾಕಿರಣ ಎಂಬ ಯೋಜನೆಯ ಮೂಲಕ ಮಾಡಲು ಮುಂದಾಗಿದೆ.
ಭಟ್ಕಳದ ಬೆಳಕೆಯಲ್ಲಿ ಜಾರಿಗೆ ತರುತ್ತಿರುವ ಈ ನೂತನ ಯೋಜನೆಯನ್ನು ಫೆ 18ರಂದು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ಅವರು ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ ಸಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶಂಕರ ರಾವ್, ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ನಿರ್ದೇಶಕ ಎನ್ ಕೆ ಶರ್ಮ, ನಯನ ಜ್ಯೋತಿ ಟ್ರಸ್ಟ್ ಅಧ್ಯಕ್ಷ ಎಸ್ ಜಯರಾಮನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ನಾಯ್ಕ ಅಧ್ಯಕ್ಷತೆವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಫಿಸಿಯೋಥೆರಪಿ ಚಿಕಿತ್ಸೆ ಪಡೆದ ಎಂಡೋ ಬಾಧಿತರಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಗುತ್ತದೆ ಎಂದು ಸ್ಕೊಡ್ವೆಸ್ ಸಂಸ್ಥೆಯ ಆಡಳಿತ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಹೇಳಿದ್ದಾರೆ.