ಭಟ್ಕಳದ ಮೊಹಿದ್ಧೀನ್ ಮುಲ್ಲಾ ಅವರು ಅಬ್ದುಲ್ ಸೆಮಿ ಮುಕ್ತೇಸರ್ ಅವರಿಗೆ 13 ಲಕ್ಷ ರೂ ಹಣ ನೀಡಿದ್ದು, ಆ ಹಣ ಮರಳಿಸದ ಕಾರಣ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇದೀಗ `ಜೈಲಿಗೆ ಹೋಗಿ ಬಂದ ಕಾರಣ ಹಣ ಕೊಡುವುದಿಲ್ಲ’ ಎಂದು ಅಬ್ದುಲ್ ಸೆಮಿ ಮುಕ್ತೇಸರ್ ಅವರು ಹೇಳುತ್ತಿದ್ದಾರೆ!
ಭಟ್ಕಳದ ಮೂಸಾ ನಗರದಲ್ಲಿ ಮೊಹಿದ್ಧೀನ್ ಈರ್ಷಾದ್ ಮುಲ್ಲಾ ಅವರು ವಾಸವಾಗಿದ್ದಾರೆ. ಖಾಸಗಿ ಉದ್ಯೋಗಿಯಾಗಿರುವ ಅವರು ಮುಗ್ದಂ ಕಾಲೋನಿಯ ಅಬ್ದುಲ್ ಸೆಮಿ ಮುಕ್ತೇಸರ್ ಅವರಿಗೆ 13 ಲಕ್ಷ ರೂ ಆರ್ಥಿಕ ನೆರವು ನೀಡಿದ್ದರು. ಆ ಪೈಕಿ 2 ಲಕ್ಷ ರೂ ಹಣವನ್ನು ಅಬ್ದುಲ್ ಸೆಮಿ ಮುಕ್ತೇಸರ್ ಅವರು ಮೊಹಿದ್ಧೀನ್ ಮುಲ್ಲಾ ಅವರಿಗೆ ಮರಳಿಸಿದ್ದರು. ಜೊತೆಗೆ ಉಳಿದ ಹಣದ ಭದ್ರತೆಗಾಗಿ ಚೆಕ್’ನ್ನು ನೀಡಿದ್ದರು.
ಸಾಕಷ್ಟು ಸಮಯ ಕಳೆದರೂ ನೀಡಿದ ಹಣ ಬಾರದ ಕಾರಣ ಮೊಹಿದ್ಧೀನ್ ಮುಲ್ಲಾ ಅವರು ಚೆಕನ್ನು ಬ್ಯಾಂಕಿಗೆ ಹಾಕಿದ್ದರು. ಆದರೆ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ಬೌನ್ಸ್ ಆಗಿತ್ತು. ಈ ಬಗ್ಗೆ ಮೊಹಿದ್ಧೀನ್ ಮುಲ್ಲಾ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಅಬ್ದುಲ್ ಸೆಮಿ ಮುಕ್ತೇಸರ್ ಅವರಿಗೆ ಶಿಕ್ಷೆ ವಿಧಿಸಿತು. ಕೊಡಬೇಕಾದ ಹಣ ಕೊಡಲು ಕೈಯಲ್ಲಿ ಕಾಸಿಲ್ಲದ ಕಾರಣ ಅಬ್ದುಲ್ ಸೆಮಿ ಮುಕ್ತೇಸರ್ ಅವರು ಜೈಲು ಶಿಕ್ಷೆ ಅನುಭವಿಸಿದರು.
ಅಬ್ದುಲ್ ಸೆಮಿ ಮುಕ್ತೇಸರ್ ಅವರು ಜೈಲಿನಿಂದ ಬಂದ ನಂತರ ಮೊಹಿದ್ಧೀನ್ ಮುಲ್ಲಾ ಅವರು ತಮ್ಮ ಹಣಕ್ಕಾಗಿ ಬೆನ್ನು ಬಿದ್ದರು. ಆಗ, ಅಬ್ದುಲ್ ಸೆಮಿ ಮುಕ್ತೇಸರ್ ಅವರು ಹಣ ಕೊಡುವುದಿಲ್ಲ ಎಂಬ ವಿಷಯ ತಿಳಿಸಿದರು. ಶಿಕ್ಷೆ ಅನುಭವಿಸಿದ ಕಾರಣ ಉಳಿದ ಹಣ ಕೊಡುವುದಿಲ್ಲ ಎಂದು ಫೋನ್ ಮಾಡಿಯೂ ಹೇಳಿದರು. ತಮಗೆ ಬರಬೇಕಾದ ಹಣ ಬಾರದ ಬಗ್ಗೆ ಮೊಹಿದ್ಧೀನ್ ಮುಲ್ಲಾ ಅವರು ಇದೀಗ ಪೊಲೀಸ್ ದೂರು ದಾಖಲಿಸಿದ್ದಾರೆ. ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.