ನಗರ ನಿವಾಸಿಗಳಿಗೆ ಕಾಡಿನ ಬದುಕು ಪರಿಚಯಿಸುವ `ವನ್ಯಾ’ ಚಲನಚಿತ್ರದಲ್ಲಿ ಯಲ್ಲಾಪುರದ ಧಾತ್ರಿ ಭಟ್ಟ ಅವರು ಅಭಿನಯಿಸಿದ್ದಾರೆ. ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರ ಸಮ್ಮೇಳನದಲ್ಲಿ ಈ ಚಿತ್ರ ಪ್ರದರ್ಶನವಾಗಿದ್ದು, ಧಾತ್ರಿ ಭಟ್ಟ ಅವರ ಅಭಿನಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಇನ್ನೂ ಎರಡು ಚಿತ್ರಗಳಿಗೆ ಧಾತ್ರಿ ಭಟ್ಟ ಅವರು ಬಾಲ ಕಲಾವಿದರಾಗಿ ಆಯ್ಕೆ ಆಗಿದ್ದಾರೆ.
ಧಾತ್ರಿ ಭಟ್ಟ ಅವರು ಸದ್ಯ ಮೈಸೂರು ಇಂಟರ್ ನ್ಯಾಶನಲ್ ಸ್ಕೂಲಿನಲ್ಲಿ 5ನೇ ತರಗತಿ ಓದುತ್ತಿದ್ದಾರೆ. ಶಾಲಾ ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿರುವ ಧಾತ್ರಿ ಭಟ್ಟ ಅವರು ಬಾಲ್ಯದಿಂದಲೂ ಅಭಿನಯದಲ್ಲಿ ಅಪಾರ ಆಸಕ್ತಿಹೊಂದಿದ್ದಾರೆ. ಧಾತ್ರಿ ಭಟ್ಟ ಅವರು ಉದ್ದಿಮೆಯ ಜೊತೆ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯಲ್ಲಿಯೂ ಚಾಪು ಮೂಡಿಸಿರುವ ಯಲ್ಲಾಪುರದ ಶ್ರೀನಿವಾಸ ಭಟ್ಟ ಅವರ ಪುತ್ರಿ. ಮಗಳ ಅಭಿನಯ ಆಸಕ್ತಿಯನ್ನು ಗುರುತಿಸಿದ ಶ್ರೀನಿವಾಸ ಭಟ್ಟ ಹಾಗೂ ಚೈತ್ರಾ ಭಟ್ಟ ಅವರು ಮಗಳ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ.
ಇದಕ್ಕೆ ಪೂರಕವಾಗಿ `ವನ್ಯಾ’ ಚಿತ್ರದಲ್ಲಿ ಧಾತ್ರಿ ಭಟ್ಟ ಅವರಿಗೆ ಮೊದಲ ಅವಕಾಶ ಸಿಕ್ಕಿದೆ. ಆ ಮೊದಲ ಅವಕಾಶದಲ್ಲಿಯೇ ಧಾತ್ರಿ ಭಟ್ಟ ಅವರು ಅಂತರಾಷ್ಟ್ರೀಯ ಚಿತ್ರೋತ್ಸವದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅರಣ್ಯವಾಸಿಗಳಾದ ಆದಿವಾಸಿ ಜನರನ್ನು ಒಕ್ಕಲೆಬ್ಬಿಸುವ ಕುರಿತಾಗಿ ಈ ಚಿತ್ರ ಕಥೆ ಹೇಳುತ್ತಿದ್ದು, ಮೂರು ತಲೆಮಾರಿಗೆ ಸಂಬoಧಿಸಿದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಕಾಡು ಹಾಗೂ ನಗರದ ನಡುವಿನ ಸಂಘರ್ಷದ ಬಗ್ಗೆ ಚಿತ್ರದಲ್ಲಿ ವಿಷಯ ಕಟ್ಟಿಕೊಡಲಾಗಿದೆ. ಹಾಸ್ಯನಟರಾಗಿದ್ದ ವೈಜನಾಥ ಬೀರಾದರ್ ಅವರು ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮಗಳಾಗಿ ಮೇಘನಾ ಬೆಳವಾಡಿ ಅವರು ಪಾತ್ರ ನಿಭಾಯಿಸಿದ್ದು, ಮೂರನೇ ತಲೆಮಾರಿನ ಹುಡುಗಿಯಾಗಿ ಧಾತ್ರಿ ಭಟ್ಟ ಅಭಿನಯಿಸಿದ್ದಾರೆ. ಧಾತ್ರಿ ಭಟ್ಟ ಅವರ ಅಭಿನಯ ನೋಡಿದ ಇನ್ನೆರಡು ಚಿತ್ರ ತಂಡದವರು ಅವರನ್ನು ತಮ್ಮ ಚಿತ್ರಕ್ಕೂ ಆಯ್ಕೆ ಮಾಡಿಕೊಂಡಿದ್ದಾರೆ.