`ಅರಣ್ಯ ಹಕ್ಕು ಸ್ಥಳ ಮಹಜರು ಪ್ರಕ್ರಿಯೆಯೂ ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಕೂಡಲೇ ಜಿಲ್ಲಾಡಳಿತ ಈ ಲೋಪದೋಷಗಳನ್ನು ಸರಿಪಡಿಸಬೇಕು’ ಎಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ.
ಭಟ್ಕಳದಲ್ಲಿ ಅರಣ್ಯ ಭೂಮಿ ಅತೀಕ್ರಮಣದಾರರ ಸಭೆ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಸತತ ಪ್ರಯತ್ನ ಮತ್ತು ಸಚಿವ ಮಂಕಾಳ ವೈದ್ಯ ಹಾಗೂ ವಿವಿಧ ಶಾಸಕರ ಸಹಕಾರದಿಂದ ತಿರಸ್ಕರಿಸಿದ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಮರುಪರಿಶೀಲನೆ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ಅರಣ್ಯವಾಸಿಗಳಿಗೆ ಅವರ ಸಾಗುವಳಿ ಬಗೆಗಿನ ಪುರಾವೆ ಒದಗಿಸುವ ಉದ್ದೇಶದಿಂದ ರಾಜ್ಯ ಅರಣ್ಯ ಹಕ್ಕು ಮೇಲುಸ್ತುವಾರಿ ಸಮಿತಿಯ ಜಂಟಿ ಮಹಜರು ಪ್ರಕ್ರಿಯೆ ನಡೆಸಲು ಆದೇಶಿಸಿದೆ. ಜಿಲ್ಲಾಧಿಕಾರಿಗಳು ನೀಡಿದ ಆದೇಶದಂತೆ ಕಳೆದ ಒಂದು ವಾರದಿಂದ ಜಿಲ್ಲೆಯ ವಿವಧ ಕಡೆ ಸ್ಥಳ ಮಹಜರು ಪ್ರಕ್ರಿಯೆ ನಡೆದಿದ್ದು, ಮಹಜರು ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಸದೇ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಮಾಡಲಾಗುತ್ತಿದೆ’ ಎಂದು ದೂರಿದರು.
`ಒಂದೆರಡು ಗುಂಟೆ ಮಾಲ್ಕಿ ಹಿಡುವಳಿ ಹೊಂದಿದ್ದರೂ ಸಹ ಅಂತಹ ಪ್ರಕರಣಗಳಲ್ಲಿ ಸ್ಥಳ ಮಹಜರು ನಡೆಸದಂತೆ ಜಂಟಿ ಸ್ಥಳ ತನಿಖಾ ಸಮಿತಿಗೆ ಜಿಲ್ಲಾಮಟ್ಟದಿಂದ ಮೌಖಿಕ ಆದೇಶವಿರುವ ಬಗ್ಗೆ ಮಾಹಿತಿಯಿದೆ. ಇದು ಅರಣ್ಯವಾಸಿಗಳ ಆತಂಕಕ್ಕೆ ಕಾರಣವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 67226 ಅರಣ್ಯ ಹಕ್ಕು ತಿರಸ್ಕ್ರತ ಅರ್ಜಿಗಳು ಮತ್ತು ಪರಿಶೀಲನೆಯಾಗದೇ ಬಾಕಿ ಇರುವ 16093 ಅರ್ಜಿಗಳು ಸೇರಿ ಒಟ್ಟೂ 83319 ಪುನರ್ ಪರಿಶೀಲನೆ ಆಗಬೇಕಿದೆ. ಪುನರ್ ಪರಿಶಿಲನೆಯ ಕಾರ್ಯಕ್ಕೆ ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಕನಿಷ್ಠ ಆರು ತಿಂಗಳ ಗಡುವಿನ ಅವಧಿಯೂ ಸಹ ಕಡಿಮೆ’ ಎಂದು ವಿವರಿಸಿದರು. `ಮರುಪರಿಶೀಲನಾ ಕಾರ್ಯಕ್ಕೆ ಕನಿಷ್ಠ ಆರು ತಿಂಗಳವರೆಗೆ ಅವಧಿ ವಿಸ್ತರಿಸಬೇಕು. ಅರ್ಹ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು ಭೂಮಿಯ ಹಕ್ಕಿನಿಂದ ವಂಚಿತರಾಗದAತೆ ಮರುಪರಿಶೀಲನೆ ಕಾರ್ಯ ಸಮರ್ಪಕವಾಗಿ ನಡೆಸಲು ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲ್ವಿಚಾರಣಾ ಸಮಿತಿಯು ಜಿಲ್ಲಾಡಳಿತಕ್ಕೆ ಈಗಾಗಲೇ ಅಗತ್ಯ ನಿರ್ದೇಶನ ನೀಡಿದ್ದು, ಅದನ್ನು ಸರಿಯಾಗಿ ಪಾಲಿಸಬೇಕು’ ಎಂದು ಆಗ್ರಹಿಸಿದರು.
`ಹಕ್ಕು ಅರಣ್ಯ ಹಕ್ಕು ನಿಯಮ 13ರಲ್ಲಿ ಸೂಚಿಸಿರುವ ಪುರಾವೆಯನ್ನು ಗುರುತಿಸಿ ಸಮರ್ಪಕವಾಗಿ ಸ್ಥಳ ಮಹಜರು ವರದಿಸಲ್ಲಿಸಲು ಸ್ಥಳೀಯ ಅಧಿಕಾರಿಗಳ ಜಂಟಿ ಸಮಿತಿಗೆ ಜಿಲ್ಲಾಧಿಕಾರಿಗಳು ಸೂಚಿಸುವಂತಾಗಬೇಕು’ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾAತ ಕೊಚರೇಕರ ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು. `ಅರಣ್ಯ ಹಕ್ಕು ಕ್ಲೇಮುಗಳ ಸ್ಥಳ ಮಹಜರು ಪ್ರಕ್ರಿಯೆ ಕೇವಲ ಕಾಟಾಚಾರದ ಕ್ರಮ ಆಗಬಾರದು. ಪ್ರತಿ ಕ್ಲೇಮಿನ ಸ್ಥಳದ ಸರ್ವೆ ಕಾರ್ಯ ನಡೆಸಿ ನೈಜ ಸಾಗುವಳಿ ಕ್ಷೇತ್ರವನ್ನು ಹಾಗೂ ನಿಯಮ 13ರಲ್ಲಿ ಹೇಳಿರುವ ಸಾಂದರ್ಭಿಕ ಸಾಕ್ಷ್ಯವನ್ನು ಗುರುತಿಸಿ ಅರಣ್ಯಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡುವ ಕೆಲಸ ಆಗಬೇಕು’ ಎಂದರು. ಜಿಲ್ಲಾ ಜನಪರ ವೇದಿಕೆಯ ಅಧ್ಯಕ್ಷ ನಾಗೇಶ ನಾಯ್ಕ ಅವರು ಮಾತನಾಡಿ `ತಿರಸ್ಕರಿಸಿದ ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆ ನಡೆಸಲು ಮತ್ತು ಪುರಾವೆ ಒದಗಿಸಲು ಮಹಜರು ಪ್ರಕ್ರಿಯೆ ನಡೆಸಲು ಆದೇಶ ಆಗಿರುವದು ಜಿಲ್ಲೆಯ ಮಟ್ಟಿಗೆ ಒಂದು ಮಹತ್ವದ ಬೆಳವಣಿಗೆಯಾಗಿದೆ. ಈ ಕಾರ್ಯದಲ್ಲಿ ಪ್ರಯತ್ನ ನಡೆಸಿದ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನು ಅಭಿನಂದಿಸುವೆ’ ಎಂದರು. `ಅಧಿಕಾರಿಗಳು ನೀಡುವ ಮಹಜರು ದೃಢೀಕರಣವು ಅರಣ್ಯವಾಸಿಗಳ ಬದುಕಿಗೆ ಬದ್ರತೆ ನೀಡುವ ರೀತಿಯಲ್ಲಿ ಅದರ ಮಾದರಿ ಇರಬೇಕು’ ಎಂದು ಆಶಿಸಿದರು. ಹೋರಾಟ ಸಮಿತಿಯ ತಾಲೂಕಾ ಅಧ್ಯಕ್ಷ ರಾಮಾ ಮೊಗೇರ, ತಂಜೀಮ ಅಧ್ಯಕ್ಷ ಇನಾಯತುಲ್ ಶಾಬಂದ್ರಿ, ಹೋರಾಟ ಸಮಿತಿಯ ಎಂ ಡಿನಾಯ್ಕ, ಗಣಪತಿ ನಾಯ್ಕ ಜಾಲೀ, ಎ ಎಂ ಮುಲ್ಲಾ, ಈಶ್ವರ ನಾಯ್ಕ, ಖಯೂಮ ಸಾಬ, ಶ್ರೀಧರ ಶೆಟ್ಟಿ ಮತ್ತಿತರ ಪ್ರಮುಖರು ಇದ್ದರು.