`ಅನಂತಕುಮಾರ ಹೆಗಡೆ ಅವರು ಎಂದಿಗೂ ಬಿಜೆಪಿ ಬಿಟ್ಟು ಹೋಗಿಲ್ಲ. ಅವರು ನಮ್ಮ ಜೊತೆಗೆ ಇದ್ದಾರೆ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. ಒಂದೆರಡು ಬಾರಿ ಅನಂತಕುಮಾರ ಹೆಗಡೆ ಅವರ ವಿರುದ್ಧ ಪರೋಕ್ಷ ಅಸಮಧಾನವ್ಯಕ್ತಪಡಿಸಿದ್ದ ಕಾಗೇರಿ ಅವರು ಇದೀಗ ಅವರ ಬಗ್ಗೆ ಶಾಂತವಾಗಿ ಮಾತನಾಡಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ `ಅನಂತಕುಮಾರ ಹೆಗಡೆ ಅವರು ಸದಾ ಬಿಜೆಪಿಯಲ್ಲಿಯೇ ಇದ್ದಾರೆ. ಅವರು ಎಂದಿಗೂ ಪಕ್ಷದಿಂದ ದೂರವಾಗಿಲ್ಲ. ಪಕ್ಷದ ಒಳಗೆ ಯಾವುದೇ ಗೊಂದಲಗಳಿಲ್ಲ’ ಎಂದು ಸ್ಪಷ್ಠಪಡಿಸಿದ್ದಾರೆ. ಅದಾದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವೇಶ್ವರ ಹೆಗಡೆ ಕಾಗೇರಿ `ನಾವು ರಾಜ್ಯಬಾರ ನಡೆಸಲು ಸಿದ್ಧ’ ಎಂಬ ಸಂದೇಶ ರವಾನಿಸಿದ್ದಾರೆ.
`ರಾಜ್ಯದ ಜನರು ಐದು ವರ್ಷಗಳ ಆಡಳಿತಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ್ದರು. ಆದರೆ ಕೇವಲ ಎರಡುವರೆ ವರ್ಷಗಳಲ್ಲೇ ಜನರ ವಿಶ್ವಾಸ ಗಳಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಅವರು ಹೇಳಿದ್ದಾರೆ. `ರಾಜ್ಯದ ಅಭಿವೃದ್ಧಿಗಾಗಿ ವಿವಿಧ ಯೋಜನೆ ರೂಪಿಸುವ ಬದಲೂ ಅಧಿಕಾರದ ಖುರ್ಚಿಗಾಗಿ ಕಚ್ಚಾಟ ನಡೆದಿದೆ. ಇದರಿಂದ ರಾಜ್ಯದ ಆಡಳಿತಯಂತ್ರ ಕುಸಿದು ಹೋಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಅಲ್ಪಸಂಖ್ಯಾತರ ಓಲೈಕೆ ಮಿತಿಮೀರಿದೆ’ ಎಂದು ಹೇಳಿದ್ದಾರೆ. `ರಾಜ್ಯ ಸರ್ಕಾರ ಐದು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸುವ ನಂಬಿಕೆ ಇಲ್ಲ. ಪ್ರಬಲ ಪ್ರತಿಪಕ್ಷವಾಗಿ ಮುಂದಿನ ಎಲ್ಲಾ ವಿದ್ಯಮಾನಗಳನ್ನು ನಿಭಾಯಿಸಲು ಬಿಜೆಪಿ ಸಜ್ಜಾಗಿದೆ’ ಎಂದವರು ಹೇಳಿದ್ದಾರೆ.