ಅರಣ್ಯ ಹಕ್ಕು ವಿಚಾರವಾಗಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಉತ್ತರಕನ್ನಡ ಜಿಲ್ಲಾ ಅರಣ್ಯಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ನಿಯೋಗ ಮತ್ತೊಮ್ಮೆ ಧ್ವನಿ ಎತ್ತಿದೆ. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ನಿಯೋಗದವರು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
`ತಿರಸ್ಕ್ರತವಾಗಿರುವ ಎಲ್ಲಾ ಅರಣ್ಯ ಹಕ್ಕು ಅರ್ಜಿಗಳ ಪುನರ್ ಪರಿಶೀಲನೆ ಕಾರ್ಯಗಳು ಜನರಿಗೆ ನ್ಯಾಯ ಒದಗಿಸುವ ಮಾದರಿಯಲ್ಲಿ ನಡೆಯಬೇಕು’ ಎಂದು ಹೋರಾಟಗಾರ ಚಂದ್ರಕಾoತ ಕೋಚ್ರೇಕರ್ ಅವರು ಆಗ್ರಹಿಸಿದ್ದಾರೆ. `ಸ್ಥಳ ಮಹಜರು ಪ್ರಕ್ರಿಯೆಗಳು ಭೂಮಿಯ ಹಕ್ಕು ಸಿಗಲು ಜನರಿಗೆ ಅಗತ್ಯ ಪುರಾವೆಯಾಗಬೇಕು.ಆ ದಿಶೆಯಲ್ಲಿ ಅಗತ್ಯ ಬದಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕು. ಆ ಮೂಲಕ ವಸತಿ ಮತ್ತು ಜೀವನೋಪಾಯಕ್ಕೆ 2005ರ ಪೂರ್ವದಿಂದ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಜಿಲ್ಲೆಯ ಜನರಿಗೆ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆಯಡಿ ಭೂಮಿಯ ಹಕ್ಕು ನೀಡಲು ಕ್ರಮ ಆಗಬೇಕು’ ಎಂದು ಅವರು ಜಿಲ್ಲಾಧಿಕಾರಿಗಳ ಮುಂದೆ ನಿಂತು ಮಾತನಾಡಿದ್ದಾರೆ.
ವಿವಿಧ ಸಂಘಟನೆಗಳ ಹೋರಾಟ ಪ್ರಮುಖರ ನಿಯೋಗದ ಜೊತೆ ಅವರು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಎಲ್ಲರೂ ಸೇರಿ ಅರಣ್ಯ ಹಕ್ಕು ಅನುಷ್ಠಾನ ಪ್ರಕ್ರಿಯೆಯಲ್ಲಿನ ಗೊಂದಲ ಬಗೆಹರಿಸುವಂತೆ ಚರ್ಚೆ ನಡೆಸಿದ್ದಾರೆ. `2005ರ ಪೂರ್ವದ ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ನೈಜ ಪ್ರಕರಣಗಳಲ್ಲಿ ಹಿರಿಯರ ಹೇಳಿಕೆ ಹೊರತುಪಡಿಸಿದ ಒಂದೇ ಒಂದು ನೈಜ ಸಾಂದರ್ಭಿಕ ಪುರಾವೆ ಇದ್ದರೂ ಸಹ ಭೂಮಿಯ ಹಕ್ಕು ನೀಡಲು ಪರಿಶೀಲಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಈ ವೇಳೆ ಭರವಸೆ ನೀಡಿದ್ದಾರೆ. ಈ ವಿಷಯವನ್ನು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷರೂ ಆಗಿರುವ ಚಂದ್ರಕಾoತ ಕೊಚರೇಕರ ಅವರು ಸುದ್ದಿಗಾರರ ಜೊತೆ ಹಂಚಿಕೊoಡಿದ್ದಾರೆ.
`ಅನುಸೂಚಿತ ಬುಡಕಟ್ಟು ಮತ್ತು ಇತರೇ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ 2006ರ ಮತ್ತು ನಿಯಮ 2008 ಮತ್ತು 2012ರ ತಿದ್ದುಪಡಿ ನಿಯಮಗಳ ಅನೇಕ ಅಂಶಗಳು ಜಿಲ್ಲೆಯ ಅರಣ್ಯವಾಸಿಗಳ ಪರವಾಗಿದೆ. ಆದರೆ, ಈ ಕಾಯ್ದೆಯ ಅನುಷ್ಠಾನ ಪ್ರಕ್ರೀಯೆಯಲ್ಲಿ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯ ಭೂಮಿಯ ಅಧಿಭೋಗದ ಹಕ್ಕು ನೀಡುವಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಈಗಲೂ ಕೆಲವು ಗೊಂದಲಗಳಿವೆ’ ಎಂಬ ವಿಷಯವನ್ನು ನಿಯೋಗದಲ್ಲಿದ್ದವರು ಹಂಚಿಕೊAಡರು,. `ಅರಣ್ಯ ಭೂಮಿಯ ಸಾಗುವಳಿ, ಅರಣ್ಯ ಉತ್ಪನ್ನಗಳ ಸಂಗ್ರಹ, ಬಳಕೆ ಜಿಲ್ಲೆಯ ಜನರ ಅದರಲ್ಲೂ ರೈತರ ಜೀವನ ಕ್ರಮವಾಗಿದೆ. ಬರಗಾಲದ ಸಂದರ್ಭಗಳಲ್ಲಿ ಜನರ ನೆರವಿಗೆ ಬಂದದ್ದು ನಮ್ಮ ಅರಣ್ಯ.ಅರಣ್ಯದ ತಾಳೆಹಿಟ್ಟು, ಬಿದುರು ಅಕ್ಕಿ,ಬರಗಾಲಗಡ್ಡೆ ಹಲವು ಗ್ರಾಮೀಣ ತಲೆಮಾರಿನ ಜನರ ಆಹಾರವಾಗಿತ್ತು. ಕ್ರಮೇಣ ರಾಗಿ ಕುಂಬ್ರಿ, ಶೇಂಗಾ ಕುಂಬ್ರಿಗಳ ಮೂಲಕ ಅರಣ್ಯ ಭೂಮಿಯ ಬಳಕೆ ಹೆಚ್ಚಾಯಿತು. ಈ ಇತಿಹಾಸ ಜಿಲ್ಲೆಯ ಗೆಜೆಟಿಯರಿನಲ್ಲಿ ಸಹ ಉಲ್ಲೇಖವಿದೆ’ ಎಂಬ ವಿಷಯವನ್ನು ಪ್ರಸ್ತಾಪಿಸಿದರು. ಇದರೊಂದಿಗೆ ವಿವಿಧ ನ್ಯಾಯಾಲಯಗಳ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾಗಿರವ ಜಿ ಎಂ ಶೆಟ್ಟಿ ಅಚವೆ, ಪ್ರಮುಖರಾದ ಪಿ ಟಿ ನಾಯ್ಕ ಮೂಡ್ಕಣಿ, ನಾಗೇಶ ನಾಯ್ಕ ಶಿರಸಿ. ನವೀನ ಸಿದ್ಧಿ, ಶಾಮನಾಥ ನಾಯ್ಕ, ಮಂಜುನಾಥ ಶಾಸ್ತ್ರೀ ಯಲ್ಲಾಪುರ, ನಾಗರಾಜ ಕಟ್ಟಿಮನಿ ಮುಂಡಗೋಡ, ಶ್ರೀಧರ ಶೆಟ್ಟಿ ಜಂಬೆಬೆಟ್ಟ ಹೊನ್ನಾವರ, ಸುರೇಶ ರಾಠೋಡ, ಬಸವಂತಪ್ಪ, ರಘು ಮರಾಠಿ, ಗಿರೀಶ ನಾಯ್ಕ, ಗಣೇಶ ಪಟಗಾರ ಯಲ್ಲಾಪುರ,ರವಿ ಶಾಸ್ತ್ರಿ ಇತರರು ಈ ನಿಯೋಗದಲ್ಲಿದ್ದರು.