`50 ಲಕ್ಷ ಅನುದಾನ ಕೋರಿ ಮುಖ್ಯಮಂತ್ರಿಗೆ ಮನವಿ ಮಾಡಿದರೂ ಅದನ್ನು ಕೊಟ್ಟಿಲ್ಲ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಾಲ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ಸಾವಿರ ದಿನದ ಸಾಧನೆ’ ಎಂದು ವ್ಯಂಗ್ಯವಾಡಿದ್ದಾರೆ. `ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳಲ್ಲಿ ಸಾಲ ಮಾಡಿದೆಯೇ ವಿನ: ಅಭಿವೃದ್ಧಿ ಮಾಡಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. `ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳು ಪೂರೈಸಿದ ಸಂಭ್ರಮಾಚರಣೆ ಮಾಡುತ್ತಿದೆ. ಆದರೆ ಈ ಸಾವಿರ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಮಾಡಿಲ್ಲ. ಬರೀ ಗ್ಯಾರಂಟಿ ಯೋಜನೆ ಕೊಟ್ಟರೆ ಪ್ರಯೋಜನವಿಲ್ಲ. ಮೂಲ ಸೌಕರ್ಯಗಳ ಅಭಿವೃದ್ಧಿಗೂ ಅನುದಾನ ಬರುತ್ತಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದ್ದಾರೆ.
`ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ. ನನ್ನ ಕ್ಷೇತ್ರಕ್ಕೆ 50 ಲಕ್ಷ ಕೊಡಿ ಎಂದು ಸಿಎಂ ಬಳಿ ಕೇಳಿದರೂ ಅನುದಾನ ದೊರೆತಿಲ್ಲ. ಕಾಂಗ್ರೆಸ್ ಮುಖಂಡರು 30 ಕೋಟಿ ಸರ್ಕಾರ ಕೊಟ್ಟಿದೆ ಎಂದು ಹೇಳುತ್ತಿದ್ದು, ಎರಡು ವರ್ಷದಲ್ಲಿ ಸರ್ಕಾರ ಕೊಟ್ಟ ಹಣ ಎಲ್ಲಿಯೂ ಸಾಲುತ್ತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ 1800 ಕೋಟಿ ರೂ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಾಗಿತ್ತು’ ಎಂದವರು ಹೇಳಿದ್ದಾರೆ. `ನಾನು ಮೂರು ಬಾರಿ ಶಾಸಕನಾದ ಅವಧಿಯಲ್ಲಿ ಇಂಥ ಕೆಟ್ಟ ಸರ್ಕಾರ ನೋಡಿಲ್ಲ’ ಎಂದವರು ಅಸಮಧಾನಹೊರಹಾಕಿದ್ದಾರೆ.
ಆರ್ ವಿ ದೇಶಪಾಂಡೆ ಅವರ ವಿರುದ್ಧವೂ ಕಿಡಿಕಾರಿದ ದಿನಕರ ಶೆಟ್ಟಿ ಅವರು `ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಭಟ್ಕಳಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಕ್ಷೇತ್ರದ ಬಗ್ಗೆ ಅವರಿಗೆ ಕಾಳಜಿಯಿಲ್ಲ’ ಎಂದು ಗುಡುಗಿದ್ದಾರೆ. ಕುಮಟಾ ಬಿಜೆಪಿ ಮಂಡಲ ಅಧ್ಯಕ್ಷ ಜಿ ಐ ಹೆಗಡೆ, ಮಂಡಲದ ಮಾಜಿ ಅಧ್ಯಕ್ಷ ಹೇಮಂತ ಗಾಂವ್ಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಗಜಾನನ ಗುನಗಾ, ಮಂಡಲ ಕಾರ್ಯದರ್ಶಿ ತಿಮ್ಮಪ್ಪ ಮುಕ್ರಿ, ವಿಶ್ವನಾಥ ನಾಯ್ಕ ಇತರರು ದಿನಕರ ಶೆಟ್ಟಿ ಅವರ ಮಾತಿಗೆ ತಲೆಯಾಡಿಸಿದ್ದಾರೆ.