`ನದಿ ತಿರುವು, ಶರಾವಂತಿ ಪಂಪ್ ಸ್ಟೋರೇಜ್, ಕೇಣಿ ವಾಣಿಜ್ಯ ಬಂದರು, ಅರಣ್ಯ ಅತಿಕ್ರಮಣ ಸಮಸ್ಯೆ, ಅಡಿಕೆ ಎಲೆಚುಕ್ಕಿ ರೋಗ, ಮಳೆ ಮಾಪನ ಯಂತ್ರ ದುರಸ್ಥಿ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದರೂ ಆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಮಾತನಾಡಿಲ್ಲ. ಎಂಟು ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಇದರ ಹಿಂದೆ ಸ್ಥಳೀಯ ಸಂಸ್ಥೆ ಚುನಾವಣೆಯ ಲೆಕ್ಕಾಚಾರವಿರುವ ಹಾಗಿದೆ’ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಅನುಮಾನವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು `ನದಿ ತಿರುವು ಯೋಜನೆಗಳು, ಶರಾವತಿ ಪಂಪ್ ಸ್ಟೋರೇಜ್ ಯೋಜನೆ, ಬಂದರುಗಳ ಕಾಮಗಾರಿ, ಅರಣ್ಯ ಅತಿಕ್ರಮಣ ಸಮಸ್ಯೆ ಮತ್ತು ಎಲೆ ಚುಕ್ಕೆ ರೋಗದಿಂದ ಸಂಕಷ್ಟದಲ್ಲಿರುವ ರೈತರ ವಿಚಾರ, ಮಳೆ ಮಾಪನದ ಸಮಸ್ಯೆ ಬಗ್ಗೆ ಅರಿವಿದ್ದರೂ ನಾಯಕರು ಮಾತನಾಡಿಲ್ಲ. ಬಿಜೆಪಿಯನ್ನು ಟೀಕಿಸುವ ಉದ್ದೇಶಕ್ಕೆ ಪ್ರವಾಸ ಮಾಡಿದ ಹಾಗೇ ಕಾಣುತ್ತಿದ್ದು, ಸಮಸ್ಯೆಗಳ ಬಗ್ಗೆ ಶಾಸಕರು ಸಹ ಮನವಿ ನೀಡಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ.
`ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಪ್ರಯತ್ನದಿಂದ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ಸಿದ್ಧವಾದ ನಂತರ ಆಗಮಿಸಿ ಉದ್ಘಾಟನೆ ಮಾಡುವುದರಲ್ಲಿ ಸರ್ಕಾರದ ಸಾಧನೆ ಏನೂ ಇಲ್ಲ’ ಎಂದಿದ್ದಾರೆ. `ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಭಾಷಣ ಗಮನಿಸಿದರೆ ಬರೀ ರಾಜಕೀಯ ಉದ್ದೇಶಗಳು ಮಾತ್ರ ಕಾಣುತ್ತಿವೆ. ಜನರ ಸಮಸ್ಯೆ ದೂರ ಮಾಡುವ ದೂರದೃಷ್ಠಿಯ ಬಗ್ಗೆ ನಾಯಕರು ಏನೂ ಹೇಳಿಲ್ಲ’ ಎಂದು ಕಿಡಿಕಾರಿದ್ದಾರೆ.
`ಬರುವ ಬಜೆಟ್ ನಲ್ಲಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುತ್ತೇವೆ ಎಂದಿರುವುದು ಸ್ವಾಗತಾರ್ಹ. ಆದರೆ, ಕಾರವಾರದ ಕ್ರಿಮ್ಸ್ ಆಸ್ಪತ್ರೆ ಮತ್ತು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯಕೀಯ ಉಪಕರಣ ಮತ್ತು ನುರಿತ ವೈದ್ಯರುಗಳ ನಿಯೋಜನೆಯನ್ನು ಮಾಡದೆ ಕೇವಲ ಬಜೆಟಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುತ್ತೇವೆ ಎಂದು ಘೋಷಿಸುವುದು ಜಿಲ್ಲೆಯ ಜನರ ಮೂಗಿಗೆ ತುಪ್ಪ ಸವರುವ ಕೆಲಸದ ಹಾಗಾಗಿದೆ. ಎಲ್ಲಾ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಲಮಿತಿಯಲ್ಲಿ ವೈದ್ಯಕೀಯ ಸೇವೆ ದೊರಕುವಂತಹ ಕ್ರಮ ಕೈಗೊಳ್ಳಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಆಗ್ರಹಿಸಿದ್ದಾರೆ. `ಹಿಂದಿನ ಬಿಜೆಪಿ ಸರಕಾರದಲ್ಲಿ ಘೋಷಣೆ ಆಗಿದ್ದ ಕುಮಟಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಬೇಕು. ಸಿದ್ದಾಪುರ -ಶಿರಸಿ ಭಾಗದ ಜನರಿಗಾಗಿ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರ ನೇಮಕಾತಿ ಯಾತ್ರೋಪಕರಣಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯಬೇಕು’ ಎಂದು ಹೇಳಿದ್ದಾರೆ.