ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಶಿವರಾತ್ರಿ ಸಂಭ್ರಮಕ್ಕೆ ಸಜ್ಜಾಗಿದೆ. ಈ ಬಾರಿಯ ಶಿವರಾತ್ರಿ ಭಾನುವಾರ ಬಂದಿರುವುದರಿoದ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಬರುವ ಸಾಧ್ಯತೆಯಿದ್ದು, ಅವರ ಅನುಕೂಲಕ್ಕಾಗಿ ಪೊಲೀಸರು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಮುರುಡೇಶ್ವರ ಪಿಸೈ ಹನುಮಂತ ಬೀರಾದರ್ ಅವರ ಮುಂದಾಳತ್ವದಲ್ಲಿ ಮುರುಡೇಶ್ವರದ ಅನೇಕ ಕಡೆ ಕ್ಯೂ ಆರ್ ಕೋಡ್ ಸ್ಟಿಕರ್ ಅಳವಡಿಸಲಾಗಿದೆ. ಮೊಬೈಲ್ ಮೂಲಕ ಆ ಕೋಡನ್ನು ಸ್ಕಾನ್ ಮಾಡಿದರೆ ಪೊಲೀಸರು ನೀಡುವ ಅನೇಕ ಮಾಹಿತಿ ಸಿಗುತ್ತಿದೆ. ಪೊಲೀಸ್ ಸಹಾಯ ಕೇಂದ್ರ, ಸುರಕ್ಷತಾ ಕ್ರಮ, ಪಾರ್ಕಿಂಗ್ ವ್ಯವಸ್ಥೆ ಸೇರಿ ಜನರಿಗೆ ಅಗತ್ಯವಿರುವ ವಿಷಯಗಳ ಮೇಲೆ ಕ್ಯೂ ಆರ್ ಕೋಡ್ ಬೆಳಕು ಚೆಲ್ಲಿದೆ.
ಲಕ್ಷಾಂತರ ಭಕ್ತರು ಬರುವುದರಿಂದ ಸಾಮಾನ್ಯವಾಗಿ ಶಿವರಾತ್ರಿ ಅವಧಿಯಲ್ಲಿ ಮುರುಡೇಶ್ವರದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ವಿವಿಧ ಮಾರ್ಗದರ್ಶನ ಮಾಡಿದ್ದಾರೆ. ಬರುವ ಭಕ್ತರಿಗೆ ಅನುಕೂಲವಾಗುವ ಹಾಗೇ ಪಾರ್ಕಿಂಗ್ ಸ್ಥಳ ಗುರುತಿಸಲು ಈ ಕ್ಯೂ ಆರ್ ಕೋಡ್ ನೆರವು ನೀಡಲಿದೆ. ಇದರೊಂದಿಗೆ ಪೊಲೀಸ್ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಹಾಯ ಕೇಂದ್ರಕ್ಕೆ ತೆರಳುವ ಮಾಹಿತಿಯನ್ನು ಕ್ಯೂ ಆರ್ ಕೋಡ್ ಒದಗಿಸುತ್ತಿದೆ.
ತುರ್ತು ಸನ್ನಿವೇಶಕ್ಕೆ ಅಗತ್ಯವಿರುವ ಆಸ್ಪತ್ರೆ, ಕಡಲತೀರದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮ, ಮುಖ್ಯವಾಗಿ ಸೇವ್ ಮಾಡಿಕೊಳ್ಳಬೇಕಾದ ಫೋನ್ ನಂಬರ್, ಸಮೀಪದ ಬಸ್ಸು ಹಾಗೂ ರೈಲು ನಿಲ್ದಾಣದ ಬಗ್ಗೆಯೂ ಕ್ಯೂ ಆರ್ ಕೋಡ್ ಮಾಹಿತಿ ನೀಡುತ್ತಿದೆ. ಹೊರ ಪ್ರದೇಶದಿಂದ ಬರುವ ಭಕ್ತರಿಗೆ ಮೊಬೈಲಿನಲ್ಲಿಯೇ ಸಮಗ್ರ ಮಾಹಿತಿ ನೀಡುವುದಕ್ಕಾಗಿ ಪೊಲೀಸ್ ಇಲಾಖೆ ಈ ಕ್ಯು ಆರ್ ಕೋಡ್ ಸಿದ್ಧಪಡಿಸಿದ್ದು, ಮುರುಡೇಶ್ವರದ ಪ್ರಮುಖ ಸ್ಥಳದಲ್ಲಿ ಅದನ್ನು ಅಂಟಿಸಲಾಗಿದೆ.