`ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರ ನಿಲುವು ಹೊಂದಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಸಹ ರೈತರ ಸಮಸ್ಯೆ ಆಲಿಸಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. ಅರಣ್ಯ ಅತಿಕ್ರಮಣ ಸೇರಿ ಹಲವು ಸಮಸ್ಯೆಗಳಿದ್ದರೂ ಆ ಬಗ್ಗೆ ಕಿಂಚಿತ್ತು ಕಾಳಜಿವಹಿಸದ ಜನಪ್ರತಿನಿಧಿಗಳ ವಿರುದ್ಧ ಅವರು ಕಿಡಿಕಾರಿದ್ದಾರೆ.
`ಕಳೆದ 50 ವರ್ಷಗಳಿಂದ ಅರಣ್ಯ ಅತಿಕ್ರಮಣದಾರರು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ 80 ಸಾವಿರ ಅರಣ್ಯ ಅತಿಕ್ರಮಣ ಕುಟುಂಬಗಳಿದ್ದು, ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ನಡೆದಿಲ್ಲ. ಮುಖ್ಯಮಂತ್ರಿಗಳ ಭೇಟಿ ಸಮಯದಲ್ಲಿ ಈ ವಿಷಯವಾಗಿ ಮಾತನಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ಶಾಂತಾರಾಮ ನಾಯಕ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ. ಅಂಕೋಲಾದ ಕನ್ನಡ ಭವನದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಮಟ್ಟದ 6ನೇ ರೈತ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿಯೇ ಶಾಂತರಾಮ ನಾಯಕ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ವರ್ತನೆಯನ್ನು ಖಂಡಿಸಿದ್ದಾರೆ.
`ಸದ್ಯ ಮತ್ತೆ ಅಧಿಕಾರಿಗಳು ಅರಣ್ಯವಾಸಿಗಳ ಮನೆಗೆ ಬಂದು ದಾಖಲೆ ಕೇಳುತ್ತಿದ್ದಾರೆ. ನಿಮ್ಮ ಹೆಸರಿನಲ್ಲಿ ಭೂಮಿ ಇದೆಯಾ? ನಿಮ್ಮ ಮನೆಯಲ್ಲಿ ನೌಕರಿಯಲ್ಲಿದ್ದವರಿದ್ದಾರ? ಎಂದು ಪ್ರಶ್ನಿಸುತ್ತಿದ್ದಾರೆ. ಅರಣ್ಯವಾಸಿಯಾದ ಕಾರಣಕ್ಕಾಗಿ ಶಿಕ್ಷಣ ಕೊಡಿಸಿ ನೌಕರಿಗೆ ಕಳುಹಿಸಿರುವುದೇ ತಪ್ಪು ಎಂಬAತೆ ಬಿಂಬಿಸುತ್ತಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು. `ಮುಂದಿನ ಹೋರಾಟದ ಬಗ್ಗೆ ಅರಣ್ಯವಾಸಿಗಳು ಪರಸ್ಪರ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಇಲ್ಲವಾದರೆ ಈಗಿದ್ದ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಸಂಘದ ತಾಲೂಕು ಅಧ್ಯಕ್ಷ ಗೌರೀಶ ನಾಯಕ ಅವರು ಎಚ್ಚರಿಸಿದರು. ಅರಣ್ಯವಾಸಿಗಳಾದ ವೆಂಕಟ್ರಮಣ ಗೌಡ, ಮಾದೇವ ಗೌಡ, ಮೀನಾಕ್ಷಿ ಗೌಡ, ಶಿವರಾಮ ಪಟಗಾರ, ಸಂದೀಪ ನಾಯ್ಕ ಸುಂಕಸಾಳ, ಉದಯ ನಾಯ್ಕ, ಚಂದ್ರು ಗೌಡ ಶಿರಗುಂಜಿ, ವಿಠ್ಠಲ ಗೌಡ ಬಾಳೆಗುಳಿ, ದೇವಣ್ಣ ನಾಯಕ, ಅರುಣ ನಾಯ್ಕ ಹೆಗ್ಗರಣಿ, ದಿನಕರ ನಾಯ್ಕ ಡೋಂಗ್ರಿ, ರಾಜಗೋಪಾಲ ಶೇಟ್ ಮುಂತಾದವರು ಉಪಸ್ಥಿತರಿದ್ದರು. ಸಂಘಟ ತಾಲೂಕು ಕಾರ್ಯದರ್ಶಿ ಸಂತೋಷ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಈ ಸಭೆಯಲ್ಲಿ ತಾಲೂಕು ಸಮಿತಿಯನ್ನು ಪುನರ್ ರಚನೆ ನಡೆದಿದ್ದು, ಅಧ್ಯಕ್ಷರಾಗಿ ಗೌರೀಶ ನಾಯಕ, ಕಾರ್ಯದರ್ಶಿಯಾಗಿ ಸಂತೋಷ ನಾಯ್ಕ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರಮಾನಂದ ನಾಯಕ ಅಚವೆ, ಮಾದೇವ ಗೌಡ, ಸಂದೀಪ್ ಏ ನಾಯ್ಕ, ಮೀನಾಕ್ಷಿ ಗೌಡ,ಜಂಟಿ ಕಾರ್ಯದರ್ಶಿಗಳಾಗಿ ಉದಯ ನಾಯ್ಕ ಹೊಸಬದ್ದೆ, ವೆಂಕಟರಮಣ ಗೌಡ ಬಾಳೆಗುಳಿ, ಜ್ಯೋತಿ ಎ. ನಾಯ್ಕ ಮತ್ತು ಸಮಿತಿ ಸದಸ್ಯರಾಗಿ 11 ಜನ ಆಯ್ಕೆಯಾದರು.