ದಿನಕ್ಕೆ ಮೂರು ತಾಸು ಫೇಸ್ಬುಕ್ ನೋಡುತ್ತಿದ್ದ ಯಲ್ಲಾಪುರದ ಸುಹಾಸ್ ಕೆ ಆರ್ ಅವರ ಬ್ಯಾಂಕ್ ಪಾಸ್ ಬುಕ್’ನ ಹಣ ಖಾಲಿ ಆಗಿದೆ. 29 ಲಕ್ಷ ರೂ ಕಳೆದುಕೊಂಡ ಅವರು ಕಾಳಮ್ಮ ನಗರವನ್ನು `ಟಿಪ್ಪು ನಗರ’ ಎಂದು ನಮೂದಿಸಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆ ಮೂಲಕ ಗೂಗಲ್ ಮ್ಯಾಪ್’ಗೆ ಮಾತ್ರ ಸೀಮಿತವಾಗಿದ್ದ ಟಿಪ್ಪು ನಗರವನ್ನು ಸುಹಾಸ್ ಕೆ ಆರ್ ಅವರು ಸರ್ಕಾರಿ ಕಡತಕ್ಕೆ ಸೇರಿಸಿದ್ದಾರೆ.
ಸರ್ಕಾರಿ ದಾಖಲೆಗಳ ಪ್ರಕಾರ ಯಲ್ಲಾಪುರದ ಕಾಳಮ್ಮ ನಗರದ ಬಳಿ ಎಲ್ಲಿಯೂ ಟಿಪ್ಪು ನಗರ ಇಲ್ಲ. ಅದಾಗಿಯೂ, ಗೂಗಲ್ ಮ್ಯಾಪ್ ಕಾಳಮ್ಮ ನಗರವನ್ನು `ಟಿಪ್ಪು ನಗರ’ ಎಂದು ಕಾಣಿಸಿದ್ದು ವಿರೋಧಕ್ಕೆ ಕಾರಣವಾಗಿತ್ತು. ಅದಾದ ನಂತರ ಮತ್ತೆ ಅದು ಕಾಳಮ್ಮ ನಗರ ಎಂದು ಬದಲಾಗಿತ್ತು. ಇದೀಗ ಮತ್ತೆ ಗೂಗಲ್ ಮ್ಯಾಪಿನಲ್ಲಿ ಟಿಪ್ಪು ನಗರ ಎಂದು ನಮೂದಾಗಿದ್ದು, ಅದೇ ಆಧಾರದಲ್ಲಿ ಸುಹಾಸ್ ಕೆ ಆರ್ ಅವರು ತಾವು ವಾಸವಾಗಿರುವ ಪ್ರದೇಶದ ವಿಳಾಸವನ್ನು ಟಿಪ್ಪು ನಗರ ಎಂದು ಸರ್ಕಾರಕ್ಕೆ ನೀಡುವ ಕಡತದಲ್ಲಿ ನಮೂದಿಸಿದ್ದಾರೆ. ಸೈಬರ್ ಅಪರಾಧ ಠಾಣೆ ಪೊಲೀಸರು ಆ ಬಗ್ಗೆ ಅರಿವಿಲ್ಲದೇ ಹಾಗೇ ಪ್ರಕರಣ ದಾಖಲಿಸಿದ್ದು, ಆ ಕಡತ ಸರ್ಕಾರಿ ದಾಖಲೆಗೆ ಸೇರಿದೆ.
ಆ ದಿನ ಏನಾಯ್ತು ಎಂದರೆ..
ಮoಡ್ಯದ ಶಂಕರನಗರ ಸುಹಾಸ್ ಕೆ ಆರ್ ಅವರು ಯಲ್ಲಾಪುರದಲ್ಲಿ ವಾಸವಾಗಿದ್ದಾರೆ. ಖಾಸಗಿ ಕಂಪನಿಯೊAದರಲ್ಲಿ ಅವರು ಉದ್ಯೋಗಿಯಾಗಿದ್ದಾರೆ. ಯಲ್ಲಾಪುರದ ಚಿತ್ರಣದ ಬಗ್ಗೆ ಅವರಿಗೆ ಅರಿವಿಲ್ಲ. ಹೀಗಾಗಿ ಮೊಬೈಲಿನಲ್ಲಿದ್ದ ಗೂಗಲ್ ಮ್ಯಾಪ್ ನೋಡಿ ಅವರು ವ್ಯವಹರಿಸುತ್ತಿದ್ದು, ಅದೇ ಮೊಬೈಲಿನ ಫೇಸ್ಬುಕ್ ಖಾತೆ ಅವರ ಬ್ಯಾಂಕ್ ಖಾತೆಯ ವಂಚನೆಗೆ ಕಾರಣವಾಗಿದೆ.
2025ರ ಏಪ್ರಿಲ್ 27ರಂದು ಸುಹಾಸ್ ಕೆ ಆರ್ ಅವರು ಫೇಸ್ಬುಕ್ ನೋಡುತ್ತಿರುವಾಗ ಅವರಿಗೆ `ಆನ್ಲೈನ್ ಜಾಬ್’ ಎಂಬ ಜಾಹೀರಾತು ಕಾಣಿಸಿದೆ. ಆಕರ್ಷಕ ಜಾಹೀರಾತು ನೋಡಿದ ಅವರು ವಂಚಕರು ನೀಡಿದ ಗುಂಪಿಗೆ ಸೇರಿದ್ದಾರೆ. ಅಲ್ಲಿದ್ದ ನಿಶಾ ಶರ್ಮಾ ಅವರು ಸುಹಾಸ್ ಕೆ ಆರ್ ಅವರನ್ನು ಮಾತನಾಡಿಸಿದ್ದಾರೆ. ಅವರ ಮಾತಿನ ಮೋಡಿಗೆ ಮರಳಾದ ಸುಹಾಸ್ ಅವರು ಆನ್ ಲೈನ್ ಉದ್ಯೋಗ ಮಾಡುವುದಾಗಿ ಹೇಳಿದ್ದಾರೆ. ವಿವಿಧ ವೆಬ್ಸೈಟಿನ ಉತ್ಪನ್ನಗಳಿಗೆ ದಿನಕ್ಕೆ 2 ತಾಸು ರೇಟಿಂಗ್ ಕೊಟ್ಟು ರಿವ್ಯು ಬರೆದರೆ 49 ಡಾಲರ್ ಹಣ ಕೊಡುವುದಾಗಿ ನಂಬಿಸಿದ್ದಾರೆ. ಅದರಂತೆ ಕೆಲಸ ಮಾಡಿದ ಸುಹಾಸ್ ಕೆ ಆರ್ ಅವರಿಗೆ 500ರೂ ಆದಾಯವೂ ಬಂದಿದೆ.
ಆ ಆದಾಯವನ್ನು ಮತ್ತೊಂದು ಕಡೆ ಹೂಡಿಕೆ ಮಾಡುವಂತೆ ನಿಶಾ ಶರ್ಮಾ ಅವರು ಸೂಚಿಸಿದ್ದು, ಅದರಂತೆ ಹೂಡಿಕೆ ಮಾಡಿದಾಗ ಸುಹಾಸ್ ಅವರಿಗೆ 1 ಸಾವಿರ ರೂ ಸಿಕ್ಕಿದೆ. ಹೆಚ್ಚು ಹೆಚ್ಚು ಹಣ ಸಿಗುವ ಆಟ ನೋಡಿದ ಸುಹಾಸ್ ಕೆ ಆರ್ ಅವರು 2026ರ ಫೆಬ್ರವರಿ 2ರವರೆಗೆ ಒಟ್ಟು 29 ಲಕ್ಷ ರೂ ಹಣ ಹೂಡಿಕೆ ಮಾಡಿದ್ದಾರೆ. ಒಟ್ಟು 2913459ರೂ ಹೂಡಿಕೆ ನಂತರ ನಿಶಾ ಶರ್ಮ ಅವರು ಸುಹಾಸ್ ಕೆ ಆರ್ ಅವರನ್ನು ದೂರ ಮಾಡಿದ್ದಾರೆ. ಹೀಗಾಗಿ ಅವರಿಗೆ ಹೂಡಿಕೆ ಹಣವೂ ಸಿಕ್ಕಿಲ್ಲ. ಲಾಭವೂ ಬಂದಿಲ್ಲ.
ಈ ಎಲ್ಲಾ ಹಿನ್ನಲೆ ಸುಹಾಸ್ ಕೆ ಆರ್ ಅವರು ಸೈಬರ್ ಕಾರವಾರದ ಅಪರಾಧ ಪೊಲೀಸ್ ಠಾಣೆಗೆ ತೆರಳಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ಪೊಲೀಸರಲ್ಲಿ ಹೇಳಿಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ. ಆ ಪ್ರಕರಣ ದಾಖಲಿಸುವಾಗ ವಿಳಾಸ ನೀಡುವಾಗ `ಕಾಳಮ್ಮ ನಗರ’ದ ಹೆಸರನ್ನು `ಟಿಪ್ಪು ನಗರ’ ಎಂದು ಬರೆದಿದ್ದಾರೆ.
ಸೈಬರ್ ಕ್ರೈಂ ಕುರಿತು ಕೂಡಲೇ ಇಲ್ಲಿ ಫೋನ್ ಮಾಡಿ: 1930