ಕುಮಟಾದ ತದಡಿ ಅಳವೆ ಪ್ರದೇಶದಲ್ಲಿ ಕೋಟಿ ರೂ ವೆಚ್ಚದಲ್ಲಿ ಹೂಳು ತೆಗೆಯುವ ಕೆಲಸ ನಡೆಯುತ್ತಿದ್ದು, ಹೂಳೆತ್ತುವ ಕಾಮಗಾರಿ ಕಳಪೆ ಎಂಬ ದೂರು ಕೇಳಿ ಬಂದಿದೆ. ಆಳ ಸಮುದ್ರಕ್ಕೆ ಯಾಂತ್ರಿಕೃತ ದೋಣಿ ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತಿರುವ ಹಿನ್ನಲೆ ಮೀನುಗಾರರು ಹೂಳು ತೆಗೆಯುವಂತೆ ಒತ್ತಾಯಿಸಿದ್ದು, ಸದ್ಯ ಮೀನುಗಾರರೇ ಆ ಕಾಮಗಾರಿಯ ಬಗ್ಗೆ ಆಕ್ಷೇಪವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ 2.65 ಕೋಟಿ ರೂ ವೆಚ್ಚದಲ್ಲಿ ಹೂಳೆತ್ತುವ ಕೆಲಸ ನಡೆಯುತ್ತಿದೆ. ಈ ಕೆಲಸ ನಿರ್ವಹಿಸಲು ಬೃಹತ್ ಆಕಾರದ ಡ್ರೇಜಿಂಗ್ ಮಷಿನ್ ಬಂದಿದೆ. ಆ ಯಂತ್ರ ದಿನಕ್ಕೆ ಒಮ್ಮೆ ಮಾತ್ರ ಅಳಿವೆ ಪ್ರದೇಶಕ್ಕೆ ಹೋಗಿ ಬರುತ್ತಿದ್ದು, ಮತ್ತೆರಡು ದಿನ ಖಾಲಿ ನಿಲ್ಲುತ್ತಿದೆ. ತದಡಿ ಬಂದಿರನಲ್ಲೇ ಲಂಗರು ಹಾಕಿರುವ ಈ ಯಂತ್ರ ಈವರೆಗೆ ಎಷ್ಟು ಪ್ರಮಾಣದಲ್ಲಿ ಹೂಳೆತ್ತಿದೆ? ಎನ್ನುವುದರ ಬಗ್ಗೆ ಜನರಿಗೆ ಮಾಹಿತಿ ಸಿಗುತ್ತಿಲ್ಲ. ತೆಗೆದ ಹೂಳು ಎಲ್ಲಿ ಹಾಕುತ್ತಾರೆ? ಎಂಬ ಪ್ರಶ್ನೆಗೂ ಉತ್ತರವಿಲ್ಲ.
`ಅನಗತ್ಯ ಹಣ ಪೋಲು ಮಾಡುವ ಬದಲು ಸರಿಯಾದ ರೀತಿ ಕೆಲಸ ನಿರ್ವಹಿಸಬೇಕು. ಹೂಳು ಎತ್ತುವ ನೆಪದಲ್ಲಿ ಖರ್ಚು ಕಾಣಿಸುವ ಬದಲು ಆ ಕೆಲಸವನ್ನು ಸರಿ ಮಾಡಬೇಕು’ ಎಂದು ಅಲ್ಲಿನ ಮೀನುಗಾರರು ಆಗ್ರಹಿಸಿದ್ದಾರೆ. ಅಲ್ಲಿನ ಉಮೇಶ ಹರಿಕಾಂತ, ಜಗದೀಶ ತಾಂಡೇಲ, ಭಾಸ್ಕರ ಹರಿಕಾಂತ, ನಾಗರಾಜ ಹರಿಕಾಂತ ಇತರರು ಹೂಳು ಎತ್ತುವ ಯಂತ್ರದ ಕೆಲಸದ ಬಗ್ಗೆ ಪ್ರಶ್ನಿಸಿದ್ದಾರೆ.