ಗೋಕರ್ಣದಲ್ಲಿ ಅದ್ಧೂರಿ ಶಿವರಾತ್ರಿ ಮಹೋತ್ಸವ ನಡೆದಿದ್ದು, ಬುಧವಾರ ನಡೆದ ಮಹಾರಥೋತ್ಸವದಲ್ಲಿ ಅನೇಕರು ಬಾಳೆಹಣ್ಣು ಹಾಗೂ ಕಡಲೆಯನ್ನು ದೇವರಿಗೆ ಸಲ್ಲಿಸಿದ್ದಾರೆ.
ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವದ ಮಹಾರಥೋತ್ಸವ ಬುಧವಾರ ಸಂಜೆ ನಡೆದಿದ್ದು, ಆಕರ್ಷಕವಾಗಿ ಅಲಂಕರಿಸಿದ ರಥಕ್ಕೆ ಭಕ್ತರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ. ಸಾವಿರಾರು ಜನ ಬಾಳೆ ಹಣ್ಣುಗಳ ಮೇಲೆ ಬೇಡಿಕೆ ಬರೆದು ಅದನ್ನು ರಥಕ್ಕೆ ಎಸೆದಿದ್ದಾರೆ. `ಈ ವರ್ಷವಾದರೂ ಮದುವೆ ಮಾಡಿಸಿಕೊಡು’ ಎನ್ನುವ ಬೇಡಿಕೆಯೂ ರಥಕ್ಕೆ ಸಲ್ಲಿಕೆಯಾಗಿದೆ. ಇದರೊಂದಿಗೆ ಕ್ರಿಕೆಟಿನಲ್ಲಿ ನೆಚ್ಚಿನ ತಂಡ ಗೆಲ್ಲಲಿ’ ಎಂಬುದನ್ನು ಸೇರಿ ಅನೇಕ ಬಗೆಯ ಬೇಡಿಕೆಗಳನ್ನು ಭಕ್ತರು ದೇವರಲ್ಲಿ ಕೇಳಿಕೊಂಡಿದ್ದಾರೆ.
ಉತ್ಸವದ ಅಂಗವಾಗಿ ಮುಂಜಾನೆ ದೇವಾಲಯದಲ್ಲಿ ಶಾಂತಿಘಟಾದ್ಯಭಿಷೇಕ ದಂಡಬಲಿ, ಭೂತಬಲಿ ಸೇರಿದಂತೆ ವಿವಿಧ ದೈವಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯರ ಜೊತೆ ಪ್ರವಾಸಿಗರು ಸೇರಿ ಹರ ಹರ ಶಂಕರ ಎಂಬ ಘೋಷಣೆ ಮೊಳಗಿಸಿದರು. 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಯಾಗಿದ್ದು, ರಥ ಎಳೆಯುವ ಸಮಯದಲ್ಲಿ 20 ಸಾವಿರಕ್ಕೂ ಅಧಿಕ ಜನ ಜಮಾಯಿಸಿದ್ದರು. ರಥ ಎಳೆದ ನಂತರವೂ ಭಕ್ತರ ದೌಡು ಆಗಮಿಸಿದ್ದು, ರಥೋತ್ಸವದಲ್ಲಿ ಒಟ್ಟು 40 ಸಾವಿರಕ್ಕೂ ಅಧಿಕ ಜನ ಭಾಗವಹಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಕವಳೇ ಮಠದ ಕೈವಲ್ಯ ಶ್ರೀ ಶ್ರೀಶಿವಾನಂದ ಸರಸ್ವತಿ ಮಹಾಸ್ವಾಮಿಗಳವರು ರಥವೇರಿ ರಥಕಾಣಿಕೆ ಸಮರ್ಪಿಸಿದ್ದಾರೆ.