ನದಿ ಜೋಡಣೆ ನೆಪದಲ್ಲಿ ಉತ್ತರ ಕನ್ನಡದ ಜೀವನಾಡಿಯಾದ ನದಿಗಳ ರೂಪ ಬದಲಿಸಲು ಮುಂದಾದ ಕ್ರಮವನ್ನು ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ವಿರೋಧಿಸಿದ್ದಾರೆ.
ಅಘನಾಶಿನಿ, ಬೇಡ್ತಿ, ವರದಾ, ವೇದಾವತಿ, ನದಿ ತಿರುವು ಯೋಜನೆ ಕೈಬಿಡುವಂತೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಅವರು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. `ಅಘನಾಶಿನಿ ನದಿ ಜೋಡಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ವ್ಯಾಪಕ ಪ್ರಮಾಣದಲ್ಲಿ ಹಾನಿ ಆಗಲಿದೆ. ಈ ಯೋಜನೆ 1.20 ಲಕ್ಷ ಮರಗಳು ನಾಶವಾಗಲಿದ್ದು, ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕೃಷಿ, ಮೀನುಗಾರಿಕೆ ಸಹ ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾಗಲಿದೆ’ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.
`ಅವೈಜ್ಞಾನಿಕ ಯೋಜನೆಯಿಂದ ಭೂ ಕುಸಿತ ಸಾಧ್ಯತೆಗಳಿವೆ. ತಜ್ಞರು ನೀಡಿದ ಎಚ್ಚರಿಕೆ ಮೀರಿ ಈ ಯೋಜನೆ ಜಾರಿಗೆ ತರುವುದು ಸರಿಯಲ್ಲ’ ಎಂದವರು ಹೇಳಿದ್ದಾರೆ. `ಬೇಸಿಗೆ ಅವಧಿಯಲ್ಲಿ ನದಿ ನೀರು ಕಡಿಮೆ ಆಗುತ್ತದೆ. ಇಲ್ಲಿಯೇ ನೀರು ಇಲ್ಲದಿರುವಾಗ ಅದನ್ನು ಬೇರೆ ಕಡೆ ಒಯ್ಯುವುದು ಸರಿಯಲ್ಲ’ ಎಂದು ಜನ ಹೇಳಿದ್ದಾರೆ. ಈ ಎಲ್ಲಾ ಹಿನ್ನಲೆ ಈ ಯೋಜನೆಯನ್ನು ರದ್ಧು ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ನಿವೃತ್ತ ಸರಕಾರಿ ಅಧಿಕಾರಿ ನಾಗೇಶ್, ಪ್ರಮುಖರಾದ ವೆಂಕಟೇಶ್ ನಾಯ್ಕ, ಸಿಂಪ್ರಿಯಾನ್, ಜಯೇಶ್ ಹುಲಸ್ವಾರ, ಪಾಂಡುರAಗ ನಾಯ್ಕ, ಅಮೀನ್ ಸಯ್ಯದ್, ಕುಮಾರ ನಾಯರ್ ಇತರರು ಪತ್ರ ರವಾನಿಸಿದ್ದಾರೆ.