ಉತ್ಪನ್ನಗಳ ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ಸಮನ್ವಯ ಹಾಗೂ ಸಂಪರ್ಕ ಮೂಡಿಸುವುದಕ್ಕಾಗಿ ಸ್ಕೊಡ್ವೆಸ್ ಸಂಸ್ಥೆ ವಿನೂತನ ಕಾರ್ಯಾಗಾರ ನಡೆಸಿದ್ದು, ಮೊದಲ ಪ್ರಯತ್ನದಲ್ಲಿಯೇ ಅದು ಯಶಸ್ವಿಯಾಗಿದೆ. 14ಕ್ಕೂ ಅಧಿಕ ಖರೀದಿ ಸಂಸ್ಥೆ ಹಾಗೂ 50ರಷ್ಟು ಮಾರಾಟ ಸಂಸ್ಥೆಯವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, 35ಕ್ಕೂ ಬಗೆಯ ಉತ್ಪನ್ನಗಳ ವ್ಯವಹಾರಕ್ಕೆ ಒಪ್ಪಂದ ನಡೆದಿದೆ.
ಜಿ ಐ ಝಡ್, ಇಸಾಫ್, ಕೃಷಿ ಹಾಗೂ ತೋಟಗಾರಿಕಾ ಇಲಾಖೆ, ಪ್ರಗತಿಮಿತ್ರ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಶಿರಸಿಯ ಪೂಗಭವನದಲ್ಲಿ ಇದೇ ಮೊದಲ ಬಾರಿಗೆ 2ದಿನಗಳ ಖರೀದಿ-ಮಾರಾಟ ಕಾರ್ಯಾಗಾರ ನಡೆದಿದೆ. ರಾಜ್ಯಮಟ್ಟದ ಈ ಕಾರ್ಯಾಗಾರದಲ್ಲಿ ಹಲವು ಉತ್ಪನ್ನಗಳ ಪ್ರದರ್ಶನ ನಡೆದಿದ್ದು, ಅನೇಕರಿಗೆ ಅನುಕೂಲವಾಗಿದೆ. `ಸಣ್ಣ ರೈತರ ಮಾರುಕಟ್ಟೆಗೆ ಬೈಯರ್ & ಸೆಲ್ಲರ್ ಮೀಟ್ ಎಂಬುದು ಯೋಗ್ಯ ವೇದಿಕೆ’ ಎಂದು ಶಿರಸಿ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರು ಕರೆ ನೀಡಿದ್ದಾರೆ. ಈ ಕಾರ್ಯಕ್ರಮ ಉದ್ಘಾಟಿಸಿದ ಅವರು `ಕೃಷಿ ಕ್ಷೇತ್ರವನ್ನು ರೋಗ ಮುಕ್ತ ಮಾಡಿ’ ಎಂದು ವಿಜ್ಞಾನಿ ಹಾಗೂ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
`ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಸಮನ್ವಯ ಸಂಪರ್ಕದ ಕೊರತೆಯಿಂದ ರೈತ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಇಂಥ ಕಾರ್ಯಾಗಾರಗಳಿಂದ ಆ ಸಮಸ್ಯೆ ದೂರವಾಗುವ ಆಶಾಭಾವನೆ ಮೂಡಿದೆ’ ಎಂದು ಭೀಮಣ್ಣ ನಾಯ್ಕ ಅವರು ಅಭಿಪ್ರಾಯಪಟ್ಟಿದ್ದಾರೆ. `ಸಣ್ಣ ಮತ್ತು ಅತೀ ಸಣ್ಣ ರೈತರು ಎಷ್ಟೇ ಗುಣಮಟ್ಟದ ಉತ್ಪನ್ನಗಳನ್ನು ಸಿದ್ಧಪಡಿಸಿದರೂ ಪ್ರಮಾಣ ಮತ್ತು ಗುಣಮಟ್ಟದ ವ್ಯತ್ಯಾಸದ ಕಾರಣಕ್ಕಾಗಿ ದೊಡ್ಡ ಮಟ್ಟದ ಮಾರುಕಟ್ಟೆಯ ಸಂಪರ್ಕ ಸಾಧಿಸಲು ಸಾಧ್ಯವಾಗದೇ ಇರುವುದರಿಂದ ಬೈಯರ್ & ಸೆಲ್ಲರ್ ಮೀಟ್ ಕಾರ್ಯಕ್ರಮಗಳ ಮೂಲಕ ಎಲ್ಲಾ ಉತ್ಪನ್ನಗಳನ್ನು ಉತ್ತಮ ದರಕ್ಕೆ ಮಾರುವ ಮೂಲಕ ಸುಸ್ಥಿರ ಮಾರುಕಟ್ಟೆ ಹೊಂದಬಹುದು’ ಎಂದರು. `ರೈತರೂ ಸಹ ಕೇವಲ ಪ್ರಾಥಮಿಕ ಹಂತದ ಉತ್ಪನ್ನಗಳಿಗೆ ಅಷ್ಟೇ ಸೀಮಿತವಾಗದೇ ಮಾರುಕಟ್ಟೆಯ ಅವಶ್ಯಕತೆಗನುಗುಣವಾಗಿ ಪ್ರತೀ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯುವ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು. `ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಎಲ್ಲ ರೀತಿಯ ಉತ್ಪನ್ನಗಳಿಗೆ ಖಾಯಂ ಮಾರುಕಟ್ಟೆ ಸೌಲಭ್ಯ ಒದಗಿದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದರು.
`ಜಿಲ್ಲೆಯಲ್ಲಿ ಅಡಿಕೆ ತೋಟಗಳು ಎಲೆಚುಕ್ಕೆ ರೋಗದಿಂದ ಇಳುವರಿ ಕಳೆದುಕೊಂಡಿದ್ದು, ಅಧಿಕಾರಿಗಳು ಹಾಗೂ ವಿಜ್ಞಾನಿಗಳು ರೋಗ ನಿಯಂತ್ರಕ ಔಷಧಗಳ ಬಳಕೆ ಮತ್ತು ಪರಿಣಾಮದ ಕುರಿತು ಅಧ್ಯಯನ ನಡೆಸಿ ರೈತರಿಗೆ ಪರಿಹಾರ ಮಾರ್ಗೋಪಾಯಗಳನ್ನು ಪರಿಚಯಿಸಬೇಕು’ ಎಂದು ಭೀಮಣ್ಣ ನಾಯ್ಕ ಅವರು ಸೂಚನೆ ನೀಡಿದರು. ಅಧ್ಯಕ್ಷತೆವಹಿಸಿದ್ದ ಸ್ಕೊಡ್ವೆಸ್ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು `ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಬೈಯರ್ & ಸೆಲ್ಲರ್ ಮೀಟಿನ ಮಹತ್ವ ಹಾಗೂ ಉದ್ದೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್, ಅರಣ್ಯ ಮಹಾವಿದ್ಯಾಲಯದ ಡೀನ್ ಆರ್ ವಾಸುದೇವ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ್, ಕೃಷಿ ಇಲಾಖೆಯ ಉಪನಿರ್ದೇಶಕ ಕೆ ಎಚ್ ಪಾಂಡು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ, ಪ್ರಗತಿಮಿತ್ರ ರೈತ ಉತ್ಪಾದಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿವೇಕ ಹೆಗಡೆ ಅವರು ಮಾತನಾಡಿದರು. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟç ಸೇರಿದಂತೆ ಹಲವಾರು ರಾಜ್ಯಗಳಿಂದ 14ಕ್ಕೂ ಹೆಚ್ಚು ಖರೀದಿದಾರ ಕಂಪನಿಗಳು ಹಾಗೂ 50ಕ್ಕೂ ಹೆಚ್ಚು ಮಾರಾಟ ಸಂಸ್ಥೆಗಳು ಭಾಗವಹಿಸಿದ್ದವು. 35 ಕ್ಕೂ ಹೆಚ್ಚು ಉತ್ಪನ್ನಗಳ ಮಾರಾಟದ ಕುರಿತು ಒಪ್ಪಂದಗಳಾದವು. ಸ್ಕೊಡ್ವೆಸ್ನ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಸ್ವಾಗತಿಸಿದರು. ಯೋಜನಾ ಸಂಯೋಜಕ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.