ಪುಡಿಗಾಸಿನ ಆಸೆಗಾಗಿ ಸಿದ್ದಾಪುರದ ಪಿಗ್ಮಿ ಕಲೆಕ್ಟರ್ ಗೀತಾ ಹುಂಡೇಕರ್ ಅವರ ಉಸಿರುಗಟ್ಟಿಸಿ ಕೊಲೆ ಮಾಡಿದ ಅಭಿಜಿತ್ ಮಡಿವಾಳ್ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 21 ಸಾವಿರದ ಆಸೆಗಾಗಿ ವೃದ್ಧೆಯನ್ನು ಕೊಂದಿರುವುದಕ್ಕಾಗಿ ಅಭಿಜಿತ್ ಮಡಿವಾಳ ಅವರು ಜೀವನಪೂರ್ತಿ ಜೈಲು ಶಿಕ್ಷೆ ಅನುಭವಿಸಬೇಕಿದ್ದು, ಕಾಸಿಗಾಗಿ ಕೊಲೆ ಮಾಡುವವರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ನ್ಯಾಯಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಸಿದ್ದಾಪುರದ ಸೊರಬಾ ರಸ್ತೆಯ ಡಿ ಸಿಲ್ವಾ ವೈನ್ಪ ಬಳಿ ಗೀತಾ ಹುಂಡೆಕರ್ ಅವರು ಒಂಟಿಯಾಗಿ ವಾಸವಾಗಿದ್ದರು. ವಿನಾಯಕ ಸೌಹಾರ್ದ ಕ್ರೆಡಿಟ್ ಸೊಸೈಟಿಯ ಪರವಾಗಿ ಪಿಗ್ಮಿ ಸಂಗ್ರಹ ಮಾಡುತ್ತಿದ್ದರು. ಅಲ್ಲಿಂದ ಬರುವ ಆದಾಯದಿಂದಲೇ ಹೆಣ್ಣು ಮಕ್ಕಳಿಬ್ಬರ ಮದುವೆ ಮಾಡಿದ್ದರು. 75ನೇ ವಯಸ್ಸಿನಲ್ಲಿಯೂ ಸಹ ಸಿದ್ದಾಪುರ ಪಟ್ಟಣದ ಎಲ್ಲಡೆ ಓಡಾಡಿ ಪಿಗ್ಮಿ ಸಂಗ್ರಹಿಸಿ ಅದರಿಂದ ಬರುವ ಕಮಿಷನ್ ಹಣದಲ್ಲಿಯೇ ತಮ್ಮ ಜೀವನ ನಡೆಸುತ್ತಿದ್ದರು. ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ಗೀತಾ ಹುಂಡೇಕರ್ ಅವರ ಮೇಲೆ ಅಭಿಜಿತ್ ಗಣಪತಿ ಮಡಿವಾಳ ಅವರ ಕಣ್ಣು ಬಿದ್ದಿತ್ತು. ಗೀತಾ ಹುಂಡೇಕರ್ ಅವರ ಪಿಗ್ಮಿ ಹಣದ ಮೇಲೆ ವಕ್ರದೃಷ್ಠಿ ಬೀರಿದ ಅಭಿಜಿತ್ ಮಡಿವಾಳ ಅವರು ಆ ಹಣ ಅಪಹರಿಸುವ ಸಂಚು ರೂಪಿಸಿದ್ದರು. 2024ರ ಡಿಸೆಂಬರ್ 23ರಂದು ಗೀತಾ ಹುಂಡೀಕರ್ ಅವರು ಮನೆಯಲ್ಲಿದ್ದಾಗ ಶೌಚಾಲಯದ ಮೂಲಕ ಅಭಿಜಿತ್ ಮಡಿವಾಳ ಅವರು ಆ ಮನೆ ಪ್ರವೇಶಿಸಿದರು. ಆ ದಿನ ರಾತ್ರಿ 10.15ರ ಆಸುಪಾಸಿಗೆ ಗೀತಾ ಹುಂಡಿಕರ್ ಅವರ ಮೇಲೆ ಅಭಿಜಿತ್ ಮಡಿವಾಳ ಅವರು ಆಕ್ರಮಣ ಮಾಡಿದರು.
ಗೀತಾ ಹುಂಡೇಕರ್ ಅವರ ಕತ್ತು ಹಿಸುಕಿ ಸಾಯಿಸಿದ ಅಭಿಜಿತ್ ಮಡಿವಾಳ್, ನಂತರ ಅವರ ಕಿವಿಯೋಲೆ ಕದ್ದರು. ಕೈಯಲ್ಲಿದ್ದ ಬಳೆ ಜೊತೆ ಪಿಗ್ನಿ ಮಾಡಿ ಸಂಗ್ರಹಿಸಿದ್ದ 21680ರೂ ಹಣವನ್ನು ದೋಚಿ ಪರಾರಿಯಾದರು. ಮರು ದಿನ ಬೆಳಗ್ಗೆ ಗೀತಾ ಹುಂಡಿಕರ್ ಅವರ ಸಾವಿನ ಬಗ್ಗೆ ಅನುಮಾನ ಕಾಡಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ಕಾಣಿಸಿದ್ದು, ಪೊಲೀಸರು ದೌಡಾಯಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಅದಾದ ಒಂದು ದಿನದ ನಂತರ ಪಿಗ್ಮಿ ಹಣದ ಆಸೆಗಾಗಿ ಅಭಿಜಿತ್ ಮಡಿವಾಳ್ ಅವರೇ ಗೀತಾ ಹುಂಡೇಕರ್ ಅವರನ್ನು ಕೊಲೆ ಮಾಡಿರುವುದನ್ನು ಪೊಲೀಸ್ ನಿರೀಕ್ಷಕ ಜೆ ಬಿ ಸೀತಾರಾಮ ಅವರು ಪತ್ತೆ ಮಾಡಿದರು. ಕೂಡಲೇ ಅಭಿಜಿತ್ ಮಡಿವಾಳ ಅವರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದರು. ಎಸೈ ಗಣಪತಿ ಬಂಟ್ ಹಾಗೂ ಇನ್ನಿತರ ಸಿಬ್ಬಂದಿ ವಿಚಾರಣೆ ನಡೆಸಿದಾಗ ಅಭಿಜಿತ್ ಮಡಿವಾಳ್ ಅವರು ಕೊಲೆ ಮಾಡಿದನ್ನು ಒಪ್ಪಿಕೊಂಡರು. ಅದೇ ಆಧಾರದಲ್ಲಿ ಪೊಲೀಸರು ವಿವಿಧ ಸಾಕ್ಷಿ ಹಾಗೂ ದಾಖಲೆಗಳ ಜೊತೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು.
ಈ ಕೇಸು ಕೋರ್ಟಿಗೆ ಬಂದ ನಂತರ ಸರ್ಕಾರಿ ಅಭಿಯೋಜಕ ರಾಜೇಶ್ ಮಳಗಿಕರ್ ಅವರು ವಾದ ಶುರು ಮಾಡಿದರು. ಶಿರಸಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಾರವಾರ ಪೀಠಾಸೀನ ನ್ಯಾಯಾಧೀಶ ಕಿರಣ ಕಿಣಿ ಅವರಲ್ಲಿ `ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದರು. ಕೊಲೆ ಪ್ರಕರಣಕ್ಕೆ ಪೂರಕವಾಗಿ ವಿವಿಧ ಸಾಕ್ಷಿಗಳನ್ನು ಒದಗಿಸಿದರು. ದೋಷಾರೋಪಣ ಪಟ್ಟಿ ಸಲ್ಲಿಕೆಯಾದ ಆರು ತಿಂಗಳ ಒಳಗೆ ಈ ಪ್ರಕರಣದ ಆದೇಶ ಹೊರ ಬಂದಿದ್ದು, ವೃದ್ಧ ಪಿಗ್ಮಿ ಕಲೆಕ್ಟರ್ ಗೀತಾ ಹುಂಡಿಕರ್ ಅವರನ್ನು ಕೊಲೆ ಮಾಡಿದ ಅಭಿಜಿತ್ ಮಡಿವಾಳ್ ಅವರಿಗೆ ನ್ಯಾಯಾಧೀಶ ಕಿರಣ ಕಿಣಿ ಅವರು ಜೀವನ ಪೂರ್ತಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದರು. ಇದರೊಂದಿಗೆ ಕೊಲೆ ಮಾಡಿದ ಅಭಿಜಿತ್ ಮಡಿವಾಳ ಅವರಿಗೆ 31 ಸಾವಿರ ರೂ ದಂಡವನ್ನು ನ್ಯಾಯಾಧೀಶರು ವಿಧಿಸಿದರು. ವೃದ್ಧೆಯ ಪುತ್ರಿಯರಿಬ್ಬರಿಗೆ 50 ಸಾವಿರ ರೂ ಪರಿಹಾರ ಕೊಡಬೇಕು ಎಂದು ಸೂಚಿಸಿದರು. `ಸಂತ್ರಸ್ತ ಹೆಣ್ಣು ಮಕ್ಕಳಿಬ್ಬರು ಕಾನೂನು ಸೇವಾ ಪ್ರಾಧಿಕಾರದಿಂದ ಹೆಚ್ಚಿನ ಪರಿಹಾರ ಪಡೆಯಲು ಅರ್ಹರು’ ಎಂದು ಉಲ್ಲೇಖಿಸಿ ನ್ಯಾಯಾಧೀಶ ಕಿರಣ ಕಿಣಿ ಅವರು ತಮ್ಮ ಆದೇಶ ಪ್ರಕಟಿಸಿದರು. ಹೊಸದಾಗಿ ಜಾರಿಯಾದ ಭಾರತೀಯ ನ್ಯಾಯ ಸಂಹಿತೆ, ಸಕಾಲಕ್ಕೆ ಕೋರ್ಟಿಗೆ ಬಂದ ಸಾಕ್ಷಿ ಹಾಗೂ ಶೀಘ್ರವಾಗಿ ನಡೆದ ವಿಚಾರಣೆಯಿಂದಾಗಿ ಕೊಲೆ ಆರೋಪಿಗೆ ತ್ವರಿತ ರೀತಿಯಲ್ಲಿ ಶಿಕ್ಷೆ ಪ್ರಕಟವಾಗಿದೆ.