ಬೆಂಗಳೂರಿನ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯವರು ನಡೆಸಿದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಹತ್ವದ ಸಾಧನೆ ಮಾಡಿದ್ದಾರೆ.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಸತತ ಏಳು ವರ್ಷಗಳಿಂದ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. `ಸಿ ವಿ ರಾಮನ್ ವಿಜ್ಞಾನ ರಸಪ್ರಶ್ನೆ-2025’ರಲ್ಲಿ ರಾಜ್ಯದ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಉತ್ತರ ಕನ್ನಡ ಜಿಲ್ಲೆಯಿಂದ 250ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಈ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಮೂವರು ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂಕೋಲಾದ ಪಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕೀರ್ತಿ ಗೋವಿಂದ ನಾಯ್ಕ ಪ್ರಥಮ ಸ್ಥಾನ. ಕಾರವಾರ ತಾಲೂಕಿನ ಜನತಾ ವಿದ್ಯಾಲಯ ಮುದುಗ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಪೂರ್ವಿ ತೇಕು ದುರ್ಗೆಕರ್ ದ್ವಿತೀಯ ಸ್ಥಾನ ಹಾಗೂ ಕಾರವಾರದ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸ್ಮೃತಿ ಸುರೇಶ ದುರ್ಗೆಕರ್ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಉತ್ತರ ಕನ್ನಡ ಜಿಲ್ಲಾ ಸಂಯೋಜಕರಾದ ಜೈ ರಂಗನಾಥ ಬಿ ಎಸ್, ಮುದುಗಾ ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ವೀಣಾ ಮಾಳಿಗೆರ, ಪಿಎಂ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಚಂದ್ರಶೇಖರ್ ಕಡೆಮನಿ. ಪಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾ ಪಕೆಯರಾದ ಕೋಮಲ ಹಿರೇಮಠ, ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಅಮದಳ್ಳಿಯ ಪ್ರಾಂಶುಪಾಲರಾದ ನಾಗರತ್ನ ಎಸ್. ಮತ್ತು ಶಾಲಾ ಸಂಯೋಜಕರಾದ ಟಿ ನ ಸುರೇಶ್ ಆಸ್ನೋಟಿಕರ. ನಿಕಿತಾ ನಾಯ್ಕ್ ಅವರು ಶುಭ ಕೋರಿದರು. ರಾಜ್ಯಮಟ್ಟದ ಪರೀಕ್ಷೆಯು ಫೆ 8ರಂದು ನಡೆಯಲಿದ್ದು, ಅಲ್ಲಿಯೂ ಸಾಧನೆ ಮಾಡಿ ಎಂದು ಹಾರೈಸಿದರು.