ಪಾಲಕರ ವಿರೊಧದ ನಡುವೆಯೂ ಭಟ್ಕಳದ ನಾರಾಯಣ ನಾಯ್ಕ ಹಾಗೂ ಕಸ್ತೂರಿ ನಾಯ್ಕ ಅವರು ಅದ್ಧೂರಿ ಮದುವೆ ಆಗಿದ್ದಾರೆ. ಮದುವೆ ಮುಗಿದ ನಂತರ ನಾರಾಯಣ ನಾಯ್ಕ ಅವರು ಪತ್ನಿಯನ್ನು ಮನೆಗೆ ಕರೆತಂದಿದ್ದು, ಇದಕ್ಕೆ ವಿರೋಧವ್ಯಕ್ತಪಡಿಸಿದ ತಾಯಿ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.
ಭಟ್ಕಳದ ಯಲ್ವಡಿ ಕವೂರು ಬಳಿಯ ಬಿಟ್ಟಿ ಬೀಳೂರುವಿನಲ್ಲಿ ಮಾಸ್ತಮ್ಮ ಮಾಸ್ತಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಅವರ ಮಗ ನಾರಾಯಣ ಮಾಸ್ತಪ್ಪ ನಾಯ್ಕ ಅವರು ತಮ್ಮ ತಂಗಿ ಪದ್ಮಾವತಿ ಮಾಸ್ತಪ್ಪ ನಾಯ್ಕ ಅವರ ಮಗಳಾದ ಕಸ್ತೂರಿ ಮಾಸ್ಪಪ್ಪ ನಾಯ್ಕ ಅವರನ್ನು ವಿವಾಹವಾಗಿದ್ದಾರೆ. ಬೆಳಕೆಯ ವಿನಾಯಕ ದೇವಸ್ಥಾನದಲ್ಲಿ ಫೆಬ್ರವರಿ 20ರಂದು ಅದ್ಧೂರಿ ಮದುವೆ ನಡೆದಿದೆ. ಆದರೆ, ಈ ಮದುವೆಗೆ ಮಾಸ್ತಮ್ಮ ನಾಯ್ಕ ಅವರ ವಿರೋಧವಿದ್ದು, ಅದನ್ನು ಯಾರೂ ತಲೆಗೆ ಹಾಕಿಕೊಂಡಿಲ್ಲ.
ಆ ದಿನ ಮದುವೆ ಮುಗಿದ ನಂತರ ನಾರಾಯಣ ನಾಯ್ಕ ಅವರು ತಮ್ಮ ಪತ್ನಿ ಜೊತೆ ಮನೆಗೆ ಬಂದಿದ್ದಾರೆ. ಸಂಜೆ 7.30ಕ್ಕೆ ಮನೆಗೆ ಬಂದ ವರ-ವಧುವನ್ನು ಮಾಸ್ತಮ್ಮ ನಾಯ್ಕ ಅವರು ಸ್ವಾಗತಿಸಿಲ್ಲ. ಬದಲಾಗಿ, `ನನ್ನ ಮನೆಯೊಳಗೆ ಕಾಲಿಡುವುದು ಬೇಡ’ ಎಂದು ಬೊಬ್ಬೆ ಹೊಡೆದಿದ್ದಾರೆ. ಇದರಿಂದ ನಾರಾಯಣ ನಾಯ್ಕ ಅವರು ಸಿಟ್ಟಾಗಿದ್ದಾರೆ. ಇದೇ ವೇಳೆ ಅವರ ತಂಗಿ ಪದ್ಮಾವತಿ ನಾಯ್ಕ ಹಾಗೂ ಅವರ ಇನ್ನಿತರ ಮಕ್ಕಳಾದ ಮಮತಾ ನಾಯ್ಕ, ಗಾಯತ್ರಿ ನಾಯ್ಕ, ಸುಬ್ರಮಣ್ಯ ನಾಯ್ಕ ಅವರು ಅಲ್ಲಿಗೆ ಬಂದಿದ್ದಾರೆ.
ಆಗಮಿಸಿದ ಬಂಧು-ಮಿತ್ರರಿAದಲೂ ಮಾಸ್ತಮ್ಮ ನಾಯ್ಕ ಅವರನ್ನು ಸಮಾಧಾನ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾರಾಯಣ ನಾಯ್ಕ ಅವರ ಜೊತೆ ಪದ್ಮಾವತಿ ನಾಯ್ಕ ಮಮತಾ ನಾಯ್ಕ, ಗಾಯತ್ರಿ ನಾಯ್ಕ, ಸುಬ್ರಮಣ್ಯ ನಾಯ್ಕ ಅವರು ಸೇರಿ ಮಾಸ್ತಮ್ಮ ನಾಯ್ಕ ಅವರ ಮೇಲೆ ಕೈ ಮಾಡಿದ್ದಾರೆ. ಎಲ್ಲರಿಂದ ಪೆಟ್ಟು ತಿಂದ ಮಾಸ್ತಮ್ಮ ನಾಯ್ಕ ಅವರು ತಮಗಾದ ಅನ್ಯಾಯದ ಬಗ್ಗೆ ಪೊಲೀಸರ ಮೊರೆ ಹೋಗಿದ್ದು, ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.