ಕುಡಿಯುವ ನೀರಿನ ಯೋಜನೆಗಾಗಿ ಕೋಟಿ ಕೋಟಿ ರೂ ವೆಚ್ಚ ಮಾಡುವ ಸರ್ಕಾರಕ್ಕೆ ಶಿರಸಿಯ ಬದನಗೋಡು ಬಳಿಯ ರಂಗಾಪುರದ ಜನರಿಗೆ ಶುದ್ಧ ನೀರು ಕೊಡಲು ಸಾಧ್ಯವಾಗಿಲ್ಲ. ಕುಡಿಯಲು ನೀರಿಲ್ಲದ ಜನ ಗ್ರಾಮ ಪಂಚಾಯತ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದು, ಈ ದಿನ ಆ ಭಾಗದ ಮಹಿಳೆಯರು ಖಾಲಿ ಕೊಡಗಳ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ.
ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ರಂಗಾಪುರ ಗ್ರಾಮದಲ್ಲಿ ಕೆಲ ದಿನಗಳಿಂದ ಕುಡಿಯಲು ನೀರು ಸಿಗುತ್ತಿಲ್ಲ. ಶುದ್ಧ ನೀರಿಗಾಗಿ ಜನ ಹಪಹಪಿಸುತ್ತಿದ್ದು, ಈ ಬಗ್ಗೆ ಮನವಿ ಮಾಡಿದರೂ ಸ್ಥಳೀಯ ಆಡಳಿತ ತಲೆಕೆಡಿಸಿಕೊಂಡಿಲ್ಲ. ಸುತ್ತಲಿನ ವಿವಿಧ ಹಳ್ಳಿಗಳಲ್ಲಿಯೂ ಇದೇ ಸಮಸ್ಯೆ ಉಲ್ಬಣಿಸಿದೆ. ಅಲ್ಲಿನ ಜನರ ಮನವಿಯನ್ನು ಸಹ ಆಡಳಿತದಲ್ಲಿರುವವರು ಆಲಿಸಿಲ್ಲ. ಒಂದು ವಾರದಿಂದ ನೀರಿನ ಸಮಸ್ಯೆ ಹೆಚ್ಚಾದ ಕಾರಣ ಜನ ಆಕ್ರೋಶಕ್ಕೆ ಒಳಗಾಗಿದ್ದಾರೆ.
ಇಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪರಸಪ್ಪ ಲಂಬಾಣಿ ಅವರು ಸಹ ಜನರ ಕೈಗೆ ಸಿಗುತ್ತಿಲ್ಲ. ತಿಂಗಳಿಗೆ ಮೂರು ದಿನ ಮಾತ್ರ ಅವರು ಕಚೇರಿಗೆ ಬರುತ್ತಿರುವ ಬಗ್ಗೆ ಜನ ಆರೋಪಿಸಿದ್ದಾರೆ. ಮಧ್ಯಾಹ್ನ ೧೨ಗಂಟೆಗೆ ಬರುವ ಅಧಿಕಾರಿ ೨ ಗಂಟೆಯ ಒಳಗೆ ಮನೆಗೆ ಮರಳುತ್ತಿದ್ದು, ನೀರಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಅವರು ಸಿಗುತ್ತಿಲ್ಲ ಎಂಬುದು ಅಲ್ಲಿನವರ ದೂರು. ನೀರು ಬಿಡಬೇಕಾದ ಸಿಬ್ಬಂದಿ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಜನ ಬೇಸರವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಬಳಿ ಸಮಸ್ಯೆ ಹೇಳಲು ಹೋದಾಗ `ಸಿಬ್ಬಂದಿ ಮೇಲೆ ದಬ್ಬಾಳಿಕೆ’ ಎಂಬ ಪದ ಪ್ರಯೋಗ ನಡೆದ ಬಗ್ಗೆ ಜನ ಆಕ್ಷೇಪಿಸಿದ್ದಾರೆ. ಹಿಂದಿನ ಆಡಳಿತ ಮಂಡಳಿಯಲ್ಲಿದ್ದ ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಇದೀಗ ಸಮಸ್ಯೆ ಆಲಿಸುವವರೇ ಇಲ್ಲ ಎಂದು ಅಸಮಧಾನವ್ಯಕ್ತಪಡಿಸಿದರು. ಪಂಚಾಯತ ಎದುರು ಖಾಲಿ ಕೊಡದ ಮೆರವಣಿಗೆ ನಡೆಸಿ ತಮ್ಮ ಆಕ್ರೋಶಹೊರಹಾಕಿದರು.