ಬೈಕಿನ ಹಿಂಬದಿ ಕುಳಿತು ತರಕಾರಿ ಖರೀದಿಸುತ್ತಿದ್ದ ಶಿರಸಿಯ ವಿಜಯಲಕ್ಷ್ಮೀ ಹೆಗಡೆ ಅವರು ಆಯತಪ್ಪಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ.
ಶಿರಸಿ ಹಳೆ ಉಂಚಳ್ಳಿಯ ವಿಜಯಲಕ್ಷ್ಮೀ ಮಂಜುನಾಥ ಹೆಗಡೆ (71) ಅವರು ವಾಸವಾಗಿದ್ದರು. ಹಳೆ ಉಂಚಳ್ಳಿಯಲ್ಲಿ ಅವರು ಮನೆ ಕಟ್ಟಿಸುತ್ತಿದ್ದರು. ಆಗಾಗ ಸ್ಥಳಕ್ಕೆ ಭೇಟಿ ನೀಡಿ ಮನೆ ಕೆಲಸದ ಆಗು-ಹೋಗುಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಅದರಂತೆ ಫೆಬ್ರವರಿ 8ರಂದು ಸಹ ಅವರು ಮನೆ ಬಳಿ ಹೋಗಿದ್ದರು. ಅಲ್ಲಿಂದ ಉಂಚಳ್ಳಿಗೆ ಮರಳುವ ಸಿದ್ಧತೆಯಲ್ಲಿರುವಾಗ ವಾಸು ಮಡಿವಾಳ ಅವರು ಬೈಕಿನಲ್ಲಿ ಬರುವುದು ಕಾಣಿಸಿತು.
ವಿಜಯಲಕ್ಷ್ಮೀ ಹೆಗಡೆ ಅವರು ವಾಸು ಮಡಿವಾಳ ಅವರ ಬೈಕಿಗೆ ಅಡ್ಡಲಾಗಿ ಕೈ ಮಾಡಿದರು. ವಾಸು ಮಡಿವಾಳ ಅವರು ಬೈಕು ನಿಲ್ಲಿಸಿದ್ದರಿಂದ ಅವರ ಬೈಕು ಏರಿದರು. ಹರೀಶಿ ಕ್ರಾಸಿನ ಬಳಿ ಫಾಮಿದಾ ಅವರ ಮನೆ ಎದುರು ತರಕಾರಿ ವ್ಯಾಪಾರ ನಡೆಯುತ್ತಿರುವುದನ್ನು ವಿಜಯಲಕ್ಷ್ಮೀ ಹೆಗಡೆ ಅವರು ನೋಡಿದರು. ಬೈಕಿನಲ್ಲಿ ಕುಳಿತು ತರಕಾರಿಪಡೆಯುತ್ತಿರುವಾಗ ವಿಜಯಲಕ್ಷ್ಮೀ ಹೆಗಡೆ ಅವರು ನೆಲಕ್ಕೆ ಬಿದ್ದರು.
ಪರಿಣಾಮ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಹುಬ್ಬಳ್ಳಿಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ನಂತರ ಶಿರಸಿಯ ಪಿಜಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದರು. ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿರುವ ಜಾನ್ವಿ ಸತೀಶ ಅಯ್ಯರ್ ಅವರು ತಾಯಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದು, ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದರು.