ಯಲ್ಲಾಪುರ ಟಿಎಂಎಸ್ ಮಾಜಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರು ಶುಕ್ರವಾರದಿಂದ ಅನ್ನ-ನೀರು ತ್ಯಜಿಸಿದ್ದಾರೆ. 85 ವರ್ಷದ ಅವರು ಟಿಎಂಎಸ್ ಆಡಳಿತಾಧಿಕಾರಿ ಭಾಸ್ಕರ್ ನಾಯ್ಕ ಅವರ ವಿರುದ್ಧ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ. ಮೂರನೇ ದಿನ ಮೂರನೇ ಹಂತದ ಪ್ರತಿಭಟನೆ ಮುಂದುವರೆಸಿದ್ದು, ಈ ಹಿಂದೆ ಘೋಷಿಸಿದ ಹಾಗೇ ಟಿಎಂಎಸ್ ಕಚೇರಿ ಎದುರು ಧರಣಿ ಕುಳಿತಿದ್ದಾರೆ.
Advertisement. Scroll to continue reading.
ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಟಿ ಎಂ ಎಸ್ ಆಡಳಿತಾಧಿಕಾರಿ ಭಾಸ್ಕರ ನಾಯ್ಕ ಅವರು ವರ್ತಿಸುತ್ತಿದ್ದಾರೆ ಎಂಬುದು ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರ ಆರೋಪ. `ಆಡಳಿತಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ನಂತರ ಭಾಸ್ಕರ ನಾಯ್ಕ ಅವರು ಕೆಲ ಠರಾವು ಮಾಡಿದ್ದಾರೆ. ಆ ಠರಾವುಗಳಿಂದ ಸಂಘದ ಸದಸ್ಯರಿಗೆ ಅನ್ಯಾಯವಾಗುತ್ತಿದೆ. ಆ ಠರಾವುಗಳನ್ನು ರದ್ಧು ಮಾಡಬೇಕು. ಜೊತೆಗೆ ಆಡಳಿತಾಧಿಕಾರಿಯಾಗಿರುವ ಭಾಸ್ಕರ ನಾಯ್ಕ ಅವರನ್ನು ವಜಾ ಮಾಡಬೇಕು’ ಎಂಬುದು ಅಗ್ಗಾಶಿಕುಂಬ್ರಿ ಅವರ ಬೇಡಿಕೆ.
ಯಲ್ಲಾಪುರ ಟಿಎಂಎಸ್’ಗೆ ಸಾವಿರಾರು ಸಂಖ್ಯೆಯ ಸದಸ್ಯರಿದ್ದಾರೆ. ಆದರೆ, ಈ ಹೋರಾಟದಲ್ಲಿ ನೂರರ ಸಂಖ್ಯೆಯಲ್ಲಿ ಮಾತ್ರ ಸದಸ್ಯರು ಭಾಗವಹಿಸಿದ್ದಾರೆ. ಟಿಎಂಎಸ್ ಸದಸ್ಯರಲ್ಲದ ಕೆಲವರು ಸಹ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದು, ಅಗ್ಗಾಶಿಕುಂಬ್ರಿ ಅವರ ಹೋರಾಟಕ್ಕೆ ಬಿಜೆಪಿಯ ಪ್ರಮುಖರು ಬೆಂಬಲ ನೀಡಿದ್ದಾರೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಆಗಾಗ ಪ್ರತಿಭಟನಾ ಸ್ಥಳಕ್ಕೆ ಬಂದು ಹೋಗುತ್ತಿದ್ದಾರೆ. ಬಿಜೆಪಿಯ ಘಟಾನುಘಟಿ ನಾಯಕರು ಧರಣಿಗೆ ಬೆಂಬಲ ನೀಡಿದರೂ ನಿರೀಕ್ಷೆಗೆ ತಕ್ಕ ಹಾಗೇ ಜನ ಬೆಂಬಲ ಸಿಕ್ಕಿಲ್ಲ.
ಇನ್ನೂ ಸೊಸೈಟಿ ವಿಷಯದಲ್ಲಿ ರಾಜಕಾರಣಿಗಳು ಕೈಯಾಡಿಸುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದವರು ಸೊಸೈಟಿ ರಾಜಕಾರಣದಲ್ಲಿ ಅನಗತ್ಯವಾಗಿ ಮೂಗು ತೂರಿಸಿದ್ದರಿಂದ ಅಗ್ಗಾಶಿಕುಂಬ್ರಿ ಅವರ ಹೋರಾಟಕ್ಕೆ ರೈತರು ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡುತ್ತಿಲ್ಲ. ಈ ಪ್ರತಿಭಟನೆ ವಿಷಯವಾಗಿ ಪರ-ವಿರೋಧ ಚರ್ಚೆ ನಡೆಯುತ್ತಿದ್ದರೂ, ಯಾವುದೇ ಒಂದು ಪಕ್ಷದ ಕಡೆ ಒಲವು ತೋರಿದರೂ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವ ಬಗ್ಗೆ ಸಾಮಾನ್ಯ ರೈತರು ಮಾತನಾಡುತ್ತಿದ್ದಾರೆ. ಈ ಕ್ಷೇತ್ರದ ಮಟ್ಟಿಗೆ ಅನೇಕ ಸನ್ನಿವೇಶದಲ್ಲಿ ಬಿಜೆಪಿಯ ದೊಡ್ಡ ದೊಡ್ಡ ಘಟಾನುಘಟಿಗಳೇ ಕಾಂಗ್ರೆಸ್ ನಾಯಕರಿಗೆ ಶರಣಾದ ಸನ್ನಿವೇಶಗಳಿವೆ. ಹೀಗಾಗಿ `ಸದ್ಯ ಅಗ್ಗಾಶಿಕುಂಬ್ರಿ ಅವರ ಬೆಂಬಲಕ್ಕೆ ನಿಂತ ಕೆಲ ಬಿಜೆಪಿಗರ ಜೊತೆ ಗುರುತಿಸಿಕೊಂಡರೂ ಆ ನಾಯಕರು ಭವಿಷ್ಯದಲ್ಲಿ ರಾಜಿ ಆದರೆ, ತಮಗೆ ಸಮಸ್ಯೆ ಆಗಬಹುದು’ ಎಂಬುದು ಸಾಮಾನ್ಯ ರೈತರ ಚಿಂತನೆ.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರು ಧರಣಿ ಶುರು ಮಾಡಿದ್ದು, ಮಧ್ಯಾಹ್ನದ ವೇಳೆಗೆ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ವೈದ್ಯರು ಬಂದು ತಪಾಸಣೆ ಮಾಡಿದ್ದಾರೆ. ಧರಣಿ ವೇಳೆ ವಿವಿಧ ಸಂಘ-ಸAಸ್ಥೆಯವರು ಆಗಮಿಸಿ ಧರಣಿ ಹಿಂಪಡೆಯುವAತೆ ಮನವಿ ಮಾಡಿದ್ದಾರೆ. ಉಪವಾಸದ ಬದಲು ಹೀಗೆ ಪ್ರತಿಭಟನೆ ನಡೆಸುವಂತೆಯೂ ಕೋರಿದ್ದಾರೆ. ಆದರೆ, ಅದಕ್ಕೆ ಅಗ್ಗಾಶಿಕುಂಬ್ರಿ ಅವರು ಒಪ್ಪಿಲ್ಲ. ಧರಣಿ ಶುರುವಾಗುವ ವೇಳೆ ಕೆಲವರು ಆಗಮಿಸಿ ಭಗವದ್ಗೀತೆ ಪಠಿಸಿದ್ದಾರೆ. ಅನೇಕರು ಭಜನೆಯನ್ನು ಮಾಡಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ಹೊರತುಪಡಿಸಿ ಬೇರೆ ಇಲಾಖೆ ಅಧಿಕಾರಿಗಳು ಕಾಣಿಸಲಿಲ್ಲ.