ಶಿರಸಿ-ಯಲ್ಲಾಪುರ ರಸ್ತೆ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
Advertisement. Scroll to continue reading.
ಯಲ್ಲಾಪುರದ ಬೇಡ್ತಿ ಸೇತುವೆ ಬಳಿಯ ಮಳಲಗಾವಿನ ಬಳಿ ಈ ಅಪಘಾತ ನಡೆದಿದೆ. ದಕ್ಷಿಣ ಕನ್ನಡ ಮೂಲದ ವೆಬ್ ಡಿಸೈನರ್ ಮುಕೇಶ ಶೆಟ್ಟಿ ಅವರು ಶಿರಸಿ ಮಾರ್ಗವಾಗಿ ಕಾರು ಓಡಿಸಿಕೊಂಡು ಹೊರಟಿದ್ದರು. ಸಿದ್ದಾಪುರದಿಂದ ಬೆಳಗಾವಿಗೆ ಹೊರಟಿದ್ದ ಬಸ್ಸಿಗೆ ಅವರ ಕಾರು ಗುದ್ದಿತು. ಡಿಕ್ಕಿಯ ರಭಸಕ್ಕೆ ಮುಕೇಶ ಶೆಟ್ಟಿ ಅವರು ಅಲ್ಲಿಯೇ ಸಾವನಪ್ಪಿದರು. ಕೆಎಸ್ಆರ್ಟಿಸಿ ಬಸ್ಸು ಖಾಸಗಿ ಒಪ್ಪಂದದ ಪ್ರಕಾರ ಬೆಳಗಾವಿಗೆ ಸಂಚರಿಸುತ್ತಿದ್ದು, ಅಪಘಾತದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಹ ಸಣ್ಣಪುಟ್ಟ ಗಾಯವಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಬೇರೆ ಬಸ್ಸಿನ ಮೂಲಕ ಕಳುಹಿಸಲಾಗಿದ್ದು, ಅವರು ತಲುಪಬೇಕಾದ ಸ್ಥಳ ತಲುಪಿದ್ದಾರೆ.
ಮೊಬೈಲ್ ಮಿಡಿಯಾ ನೆಟ್ವರ್ಕನ ಮಂಗಳೂರು ಪ್ರತಿನಿಧಿ ನೀಡಿದ ಮಾಹಿತಿ ಪ್ರಕಾರ, 33 ವರ್ಷದ ಮುಕೇಶ ಶೆಟ್ಟಿ ಅವರು ಕುಂದಾಪುರದವರಾಗಿದ್ದು ನಾಡಿನ ಪ್ರಮುಖ ಪತ್ರಿಕೆಗಳ ವೆಬ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಕೆಲ ಮಾಧ್ಯಮದ ವೆಬ್ ಡಿಸೈನರ್ ಜವಾಬ್ದಾರಿ ಹೊಂದಿದ್ದು, ಅದರ ನಿರ್ವಹಣಾ ಕೆಲಸ ಮಾಡುತ್ತಿದ್ದರು. ಮಂಗಳೂರಿನಲ್ಲಿ ಸೂಪರ್ ಮಾರ್ಟ ನಡೆಸುತ್ತಿದ್ದ ಅವರು ಈಚೆಗೆ ಅದನ್ನು ಬೇರೆಯವರಿಗೆ ಹಸ್ತಾಂತರಿಸಿದ್ದರು. ತಮ್ಮ ಉದ್ಯಮ ವಿಸ್ತರಿಸುವ ಉದ್ದೇಶದಿಂದ ಗುರುವಾರ ಮನೆಯಿಂದ ಹೊರಟಿದ್ದರು. `ಶಿವಮೊಗ್ಗಕ್ಕೆ ಹೋಗಿ ಬರುವೆ’ ಎಂದು ಕುಟುಂಬದವರಿಗೆ ತಿಳಿಸಿದ್ದ ಅವರು ನಸುಕಿನಲ್ಲಿಯೇ ಕಾರು ಹತ್ತಿದ್ದರು. ಈ ಮಾರ್ಗವಾಗಿ ಅನ್ಯ ಕೆಲಸದ ನಿಮಿತ್ತ ತೆರಳಿದ್ದು, ಯಲ್ಲಾಪುರದಿಂದ ಮುಂದೆ ಶಿವಮೊಗ್ಗಕ್ಕೆ ಸಂಚರಿಸುವಾಗ ನಡೆದ ಅಪಘಾತದಿಂದ ಮುಕೇಶ ಶೆಟ್ಟಿ ಅವರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಗೊತ್ತಾಗಲಿಲ್ಲ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’