ಭಕ್ತರ ನಂಬಿಕೆಗೆ ತಕ್ಕ ಹಾಗೇ ಭಕ್ತಿಯಿಂದ ನಡೆದುಕೊಳ್ಳುವವರ ಇಷ್ಟಾರ್ಥ ಪೂರೈಸುತ್ತಿರುವ ದೇವಿಗಳಲ್ಲಿ ಯಲ್ಲಾಪುರ ಕಾಳಮ್ಮ ನಗರದಲ್ಲಿರುವ ಕಾಳಮ್ಮ ದೇವಿಯೂ ಒಂದು. ಕಾಳಮ್ಮ ದೇವಿಯ ವರ್ಧಂತಿ ಉತ್ಸವಕ್ಕೆ ದಿನ ನಿಗದಿಯಾಗಿದ್ದು, ಕಾಳಮ್ಮ ನಗರದಲ್ಲಿ ಈ ಬಾರಿ ಮೂರು ದಿನಗಳ ಕಾಲ ಧಾರ್ಮಿಕ-ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
Advertisement. Scroll to continue reading.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಉದಯ ನಾಯ್ಕ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಕಾಳಮ್ಮನಗರದ ಕಾಳಮ್ಮದೇವಿ ದೇವಸ್ಥಾನದಲ್ಲಿ ವರ್ಧಂತಿ ಉತ್ಸವ ಮಾ 8ರಿಂದ 10ರವರೆಗೆ ನಡೆಯಲಿದೆ. ಅದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದವರು ಹೇಳಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಅವರು ಸರ್ವರನ್ನು ಗೌರವದಿಂದ ಆಮಂತ್ರಿಸಿದ್ದಾರೆ. `ಉತ್ಸವದ ಅಂಗವಾಗಿ ಮಾ 8ರಂದು ಗಣಪತಿ ಪುಣ್ಯಾಹ, ಮಹಾಸಂಕಲ್ಪ, ಗಣಹವನ ನಡೆಯಲಿದೆ. ಮಾರ್ಚ 9ರಂದು ನವಚಂಡಿ ಹವನ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಅರ್ಚಕರಾದ ರಾಮಚಂದ್ರ ಭಟ್ಟ ಹಾಗೂ ರಾಮಚಂದ್ರ ಹೆಗಡೆ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದವರು ವಿವರಿಸಿದ್ದಾರೆ.
ದೇಗುಲ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ಅವರು ಮಾತನಾಡಿ, `ಉತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಮಾರ್ಚ 8ರಂದು ರಾತ್ರಿ 8ಕ್ಕೆ ಚಿನ್ನು ಮೆಲೊಡೀಸ್ ಅವರಿಂದ ರಸಮಂಜರಿ, ಮಾರ್ಚ 9ರಂದು ರಾತ್ರಿ 8.30ಕ್ಕೆ ಅನಂತ ಹೆಗಡೆ ದಂತಳಿಗೆ ಅವರ ಸಂಯೋಜನೆಯಲ್ಲಿ ಭೌಮಾಸುರ ಕಾಳಗ-ಪಾರಿಜಾತ ಯಕ್ಷಗಾನ ಪ್ರದರ್ಶನ, ಮಾರ್ಚ 10ರಂದು ಸಂಜೆ 7ಕ್ಕೆ ಮನೋಜ ಪಾಟೀಲ ನೇತೃತ್ವದಲ್ಲಿ ರಸಮಂಜರಿ ನಡೆಯಲಿದೆ’ ಎಂಬ ಮಾಹಿತಿ ನೀಡಿದ್ದಾರೆ. ದೇವಸ್ಥಾನ ಸಮಿತಿ ಉಪಾಧ್ಯಕ್ಷ ನವೀನ ನಾಯ್ಕ, ಸದಸ್ಯ ಸಚಿನ ಅಡಿಗೋಣ, ತ್ರಿಶೂಲ ಬಳಗದ ಸದಸ್ಯ ರಮೇಶ ಕಮ್ಮಾರ ಇತರರು ಸರ್ವ ಭಕ್ತರನ್ನು ಈ ಎಲ್ಲಾ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ.