ಕಳೆದ ವರ್ಷ ವ್ಯಾಪಕ ಮಳೆಯಾದ ಪ್ರದೇಶದ ರೈತರಿಗೂ ಅತ್ಯಂತ ಕಡಿಮೆ ಪ್ರಮಾಣದ ಬೆಳೆ ವಿಮಾ ಪರಿಹಾರ ಸಿಕ್ಕಿದ್ದು, `ಅಧಿಕಾರಿಗಳು ಮಾಡಿದ ಎಡವಟ್ಟೇ ಇದಕ್ಕೆ ಕಾರಣ’ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಆರೋಪಿಸಿದ್ದಾರೆ.
`ರಾಜ್ಯ ಸರಕಾರದ ಅಧಿಕಾರಿಗಳು ಮನಸ್ಸಿಗೆ ಬಂದ ಹಾಗೆ ಮಳೆ ವರದಿ ಕೊಟ್ಟಿದ್ದಾರೆ. ಪಕ್ಕದ ಪಂಚಾಯತ್ ಬಂದಿರುವ ಮಳೆ ಪ್ರಮಾಣ ಆಧರಿಸಿ ಇನ್ನೊಂದು ಪಂಚಾಯತಗೆ ವರದಿ ಕೊಟ್ಟಿದ್ದಾರೆ. ಹೀಗಾಗಿ ಒಂದೇ ಪ್ರಕಾರದ ಮಳೆ ಬಂದಿರುವ ಮತ್ತಿಘಟ್ಟಕ್ಕೆ ಗುಂಟೆಗೆ 170 ರೂ, ಬಂಡಲ ಪಂಚಾಯತ್ ಗುಂಟೆಗೆ 900 ರೂ ಪರಿಹಾರ ಬಂದಿದೆ. ದೊಡ್ನಳ್ಳಿ ಪಂಚಾಯತ್ ಗುಂಟೆಗೆ 50 ರೂ ಬಂದರೆ ಬಿಸಲಕೊಪ್ಪದಲ್ಲಿ 500 ರೂ ಬಂದಿದೆ. ಈ ಅವಾಂತರಕ್ಕೆ ಕಾಂಗ್ರೆಸ್ ಶಾಸಕ ಹಾಗೂ ಸಚಿವರೇ ಕಾರಣ’ ಎಂದವರು ದೂರಿದ್ದಾರೆ. `ಶಾಸಕರ ಹಾಗು ಸಚಿವರ ಅಸಡ್ಡೆಯಿಂದ ಅಡಿಕೆ ಬೆಳೆಗಾರರು ಹೈರಣಾಗಿದ್ದಾರೆ. ವಿಮಾ ಕಂಪನಿ ರಾಜ್ಯ ಸರ್ಕಾರದ ಜೊತೆ ಶಾಮೀಲಾಗಿ ಹಣ ಉಳಿಸುವ ಕಾರ್ಯ ಮಾಡಿದ ಬಗ್ಗೆ ಜನ ಮಾತನಾಡುತ್ತಿದ್ದಾರೆ’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ.
`ಜಿಲ್ಲೆಯ ರೈತರು ಪ್ರಸ್ತುತ ಸಾಲಿನಲ್ಲಿ ತೀವ್ರ ಸಂಕಷ್ಟದಲ್ಲಿದ್ದು, ಈ ಕೂಡಲೇ ಕ್ಷೇತ್ರದ ಶಾಸಕರು ತಮ್ಮ ನೇತೃತ್ವದಲ್ಲಿ ರೈತರು ಸಹಕಾರಿ ಸಂಘಗಳ ಪ್ರಮುಖರ ಸಭೆ ನಡೆಸಬೇಕು. ಕೃಷಿ ವಿಜ್ಞಾನಿಗಳು, ತೋಟಗಾರಿಕಾ ಅಧಿಕಾರಿಗಳನ್ನು ಕರೆಯಿಸಿ ತುರ್ತು ಪರಿಹಾರ ಒದಗಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. `ಎಲೆಚುಕ್ಕಿ ರೋಗದ ತೀವ್ರತೆಗೆ ಜಿಲ್ಲೆಯ ಜನ ಹೈರಾಣಾಗಿದ್ದು, ನಿತ್ಯದ ಬದುಕನ್ನು ಸಾಗಿಸುವುದು ಸಹ ಕಷ್ಟಕರವಾಗಿದೆ. ಸಂಕಷ್ಟದಲ್ಲಿರುವ ರೈತರ ಪರವಾಗಿ ಬಿಜೆಪಿ ಸದಾ ನಿಲ್ಲಲಿದ್ದು, ಅದೇ ಕಾರಣಕ್ಕೆ ಮಳೆ ಮಾಪನ ಯಂತ್ರ ಸರಿಯಿಲ್ಲದಿದ್ದರೂ ಸಹ ಕಳೆದ ಅವಧಿಯಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದ ಫಲವಾಗಿ ರೈತರಿಗೆ ಬೆಳೆವಿಮೆ ಹಣ ದೊರಕಿಸಿಕೊಡಲಾಗಿದೆ. ಈ ವರ್ಷವೂ ಸಹ ಸಂಸದರ ಪ್ರಯತ್ನದ ಫಲವಾಗಿ ಬೆಳೆವಿಮೆ ಹಣ ಜಮಾ ಆಗುತ್ತಿದೆ. ಕಳೆದ ವರ್ಷವೇ ಮಳೆ ಮಾಪನ ಯಂತ್ರವನ್ನು ಸರಿಪಡಿಸುವಂತೆ ಸಂಸದರು ತಾಕೀತು ಮಾಡಿದ್ದರೂ ಸಹ ರಾಜ್ಯ ಸರಕಾರದ ನಿಷ್ಕಾಳಜಿ ತೋರುವ ಮೂಲಕ ಜಿಲ್ಲೆಯ ರೈತರ ಬದುಕಿನಲ್ಲಿ ಚೆಲ್ಲಾಟ ಮಾಡುತ್ತಿದೆ’ ಎಂದವರು ಆಕ್ರೋಶವ್ಯಕ್ತಪಡಿಸಿದ್ದಾರೆ.
`ವಿಧಾನಸಭೆ ಅಧಿವೇಶನದಲ್ಲಿ ಶಿರಸಿ ಕ್ಷೇತ್ರದ ಶಾಸಕರು ಕೇವಲ ಕ್ಷೇತ್ರದ ಜನತೆಯೆದರು ಪ್ರಚಾರಕ್ಕಾಗಿ ಕಾಟಾಚಾರಕ್ಕೆ ಪ್ರಶ್ನೆ ಕೇಳಿ ಸುಮ್ಮನೆ ಕೂತಿದ್ದಾರೆ. ಎಲೆ ಚುಕ್ಕೆ ರೋಗಕ್ಕೆ ಔಷಧಿ ಸಹಾಯ ಧನ ಸರ್ಕಾರ 62 ಕೋಟಿ ರೂಪಾಯಿ ಮೀಸಲಿರಿಸಿದೆ ಎಂದು ಹೇಳಿಕೊಂಡಿದ್ದು, ಆದರೆ, ಈವರೆಗೆ ಕೇವಲ 5.25 ಕೋಟಿ ರೂಪಾಯಿ ಮಾತ್ರ ಖರ್ಚಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹಾಗಿದ್ದಲ್ಲಿ ಬಾಕಿ ಉಳಿದಿರುವ 56.75 ಕೋಟಿ ರೂಪಾಯಿ ಎಲ್ಲಿ ಹೋಯಿತು? ಸರ್ಕಾರದ ವರದಿಯ ಪ್ರಕಾರ ಕೇವಲ 16,000 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 22,000ಕ್ಕೂ ಹೆಚ್ಚು ರೈತರು ಈ ರೋಗದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಕೂಡಲೇ ತೋಟಗಾರಿಕೆ ಮಂತ್ರಿ ಜಿಲ್ಲೆಗೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಬೇಕು’ ಎಂದವರು ಹೇಳಿದ್ದಾರೆ.