ಹೈಸ್ಕೂಲ್ ಹುಡುಗಿಗೆ ಲೈಂಗಿಕ ಹಿಂಸೆ ನೀಡಿದ ಯಲ್ಲಾಪುರದ ಶೇಖರ ದೇವಾಡಿಗ ಅವರಿಗೆ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಜೊತೆಗೆ 1.10 ಲಕ್ಷ ರೂ ದಂಡ ಪಾವತಿಗೂ ಆದೇಶಿಸಿದೆ.
ಯಲ್ಲಾಪುರದ ಕುಂದರಗಿ ಬಳಿಯ ಮಾವಿನಕಟ್ಟಾದ ಶೇಖರ ಮಾಧವ ದೇವಾಡಿಗ (30) ಅವರು ಅಪ್ರಾಪ್ತೆಯೊಬ್ಬರಿಗೆ ಲೈಂಗಿಕ ಹಿಂಸೆ ನೀಡಿದ್ದರು. 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಅನಾಚಾರ ಮಾಡಿದ್ದರು. 2022ರಲ್ಲಿ ಈ ವರ್ತಮಾನ ನಡೆದಿದ್ದು, ಸಂತ್ರಸ್ತೆ ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿ ಶೇಖರ್ ದೇವಾಡಿಗ ಅವರನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣ ಕಾರವಾರ ನ್ಯಾಯಾಲಯದ ಮೆಟ್ಟಿಲೇರಿತು. ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಿ ಅಭಿಯೋಜಕ ಗುರುಶಾಂತಯ್ಯ ಕುರ್ಡಿಕೇರಿ ವಾದ ಮಂಡಿಸಿದರು. ಇದಕ್ಕೆ ಪೂರಕ ಸಾಕ್ಷಿಗಳನ್ನು ಅವರು ಒದಗಿಸಿದರು. ಆಗಿನ ಯಲ್ಲಾಪುರ ಪಿಐ ಸುರೇಶ ಎಳ್ಳೂರು ತನಿಖೆ ನಡೆಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈಗಿನ ಪಿಐ ರಮೇಶ ಹಾನಾಪುರ ಅವರು ಪ್ರಕರಣದ ರೂಪುರೇಶೆಗಳ ಬಗ್ಗೆ ನ್ಯಾಯಾಲಯಕ್ಕೆ ಸಮಗ್ರ ವರದಿ ನೀಡಿದರು.
ಎಸೈ ವಿಠ್ಠಲ್ ಲವಾಡಕರ್ ಅವರು ಕೋರ್ಟ ಮಾನೆಟಿರಿಂಗ್ ಕೆಲಸ ನಿರ್ವಹಿಸಿದರು. ಎಸೈ ಗಜಾನನ ನಾಯ್ಕ ಹಾಗೂ ಸಿಬ್ಬಂದಿ ವಿರೇಶ ಎಂ ಎಚ್ ಅವರು ವಿಚಾರಣೆ ವೇಳೆ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಎಲ್ಲಾ ದಾಖಲೆ ಹಾಗೂ ಸಾಕ್ಷಿ ಗಮನಿಸಿದ ನ್ಯಾಯಧೀಶೆ ಪ್ರತಿಭಾ ಕುಲಕರ್ಣಿ ಅವರು ಮಾರ್ಚ 17ರಂದು ತಮ್ಮ ಆದೇಶ ಪ್ರಕಟಿಸಿದರು.
ಆ ಆದೇಶದ ಪ್ರಕಾರ ಆರೋಪ ಸಾಭೀತಾಗಿದ್ದು, 30 ವರ್ಷದ ಶೇಖರ ದೇವಾಡಿಗ ಅವರು ಮುಂದಿನ 20 ವರ್ಷಗಳ ಕಾಲ ಜೈಲು ವಾಸ ಅನುಭವಿಸಬೇಕಿದೆ. ಜೊತೆಗೆ 1.10 ಲಕ್ಷ ರೂ ದಂಡ ಪಾವತಿಸಬೇಕಿದೆ. ಸಂತ್ರಸ್ತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂ ಪರಿಹಾರ ಪಡೆಯುವ ಅವಕಾಶ ಕೊಡಲಾಗಿದೆ.