ಗೋಕರ್ಣಕ್ಕೆ ಹೋಗಿ ಬರುವುದಾಗಿ ಹೊರಟಿದ್ದ ಶ್ರೀನಿಧಿ ಕಡಗೋಳ ಅವರ ಮೊಬೈಲ್ ಸಿಗ್ನಲ್ ಯಲ್ಲಾಪುರದಲ್ಲಿ ಅಂತ್ಯವಾಗಿದ್ದು, ಹುಡುಕಾಟ ನಡೆಸಿದಾಗ ಅವರು ಜೇನುಕಲ್ಲು ಗುಡ್ಡದಲ್ಲಿ ಶವವಾಗಿರುವುದು ಗೊತ್ತಾಗಿದೆ. ಜೀವನದಲ್ಲಿ ಜಿಗುಪ್ಸೆಹೊಂದಿದ ಶ್ರೀನಿಧಿ ಕಡಗೋಳ ಅವರು ಜೇನುಕಲ್ಲು ಗುಡ್ಡದ ಮೇಲಿನಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ.
Advertisement. Scroll to continue reading.
ಧಾರವಾಡದ ಹೊಸ ಯಲ್ಲಾಪುರದ ಕಂಪ್ಲಿ ಬಳಿಯ ಬಸವೇಶ್ವರ ನಗರದಲ್ಲಿ ಶ್ರೀನಿಧಿ ಕೃಷ್ಣ ಕಡಗೋಳ (23) ಅವರು ವಾಸವಾಗಿದ್ದರು. ಯಾವುದೋ ಒಂದು ವಿಷಯವಾಗಿ ಅವರು ಕೊರಗುತ್ತಿದ್ದರು. ಅದೇ ವಿಷಯವಾಗಿ ಅವರು ಮಾನಸಿಕವಾಗಿಯೂ ಕುಗ್ಗಿದ್ದರು. ಆದರೆ, ಆ ವಿಷಯ ಯಾವುದು? ಎಂದು ಅವರು ಯಾರಿಗೂ ಹೇಳಿರಲಿಲ್ಲ.
ಹೀಗಿರುವಾಗ ಮಾರ್ಚ 4ರಂದು ಅವರು ಬೆಳಗ್ಗೆ 9ಗಂಟೆಗೆ ಮನೆಯಿಂದ ಹೊರಬಿದ್ದರು. `ಗೋಕರ್ಣಕ್ಕೆ ಹೋಗಿ ಬರುವೆ’ ಎಂದಿದ್ದ ಶ್ರೀನಿಧಿ ಕಡಗೋಳ ಅವರು ಸ್ಕೂಟಿ ಓಡಿಸಿಕೊಂಡು ಹೊರಟಿದ್ದರು. ಆದರೆ, ಆ ದಿನ ಅವರು ಎಲ್ಲಿ ಹೋದರು? ಎಂದು ಗೊತ್ತಾಗಲಿಲ್ಲ. ಈ ಹಿನ್ನಲೆ ಅವರ ಪಾಲಕರು ಪೊಲೀಸರ ಸಹಾಯದಿಂದ ಹುಡುಕಾಟ ನಡೆಸಿದರು. ತಂತ್ರಜ್ಞಾನ ಆಧಾರಿತವಾಗಿ ಹುಡುಕಾಟ ನಡೆಸಿದಾಗ ಶ್ರೀನಿಧಿ ಕಡಗೋಳ ಅವರ ಮೊಬೈಲ್ ಕೊನೆಯದಾಗಿ ಯಲ್ಲಾಪುರದ ಬಳಿಯಿರುವುದು ಗೊತ್ತಾಯಿತು.
ಯಲ್ಲಾಪುರ ಪೊಲೀಸರು ಶ್ರೀನಿಧಿ ಕಡಗೋಳ ಅವರ ಶೋಧ ಶುರು ಮಾಡಿದರು. ಮಾರ್ಚ 7ರಂದು ಜೇನುಕಲ್ಲು ಗುಡ್ಡದ ತಪ್ಪಲಿನಲ್ಲಿ ಶವವೊಂದು ಸಿಕ್ಕಿದ್ದು, ಅದು ಶ್ರೀನಿಧಿ ಕಡಗೋಳ ಅವರ ದೇಹ ಎಂದು ಅರಿವಾಯಿತು. ಸ್ಥಳೀಯರ ಸಹಕಾರದಿಂದ ಪೊಲೀಸರು ಸಾಕಷ್ಟು ಶ್ರಮವಹಿಸಿ ಆ ಶವವನ್ನು ಮೇಲೆತ್ತಿದರು. ಜೀವನದಲ್ಲಿನ ಜಿಗುಪ್ಸೆಯಿಂದ ಶ್ರೀನಿಧಿ ಕಡಗೋಳ ಅವರು ಜೇನುಕಲ್ಲು ಗುಡ್ಡದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಪೊಲೀಸರು ದೃಢಪಡಿಸಿದರು. ಕೃಷ್ಣ ಶ್ರೀನಿವಾಸ ಕಡಗೋಳ ಅವರು ಸ್ಥಳಕ್ಕೆ ಆಗಮಿಸಿದ್ದು, ಮಗನ ಸಾವಿನ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದರು. ಪಿಸೈ ಸಿದ್ದಪ್ಪ ಗುಡಿ ಅವರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.