ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಬರುವ ಗರ್ಭಿಣಿಯರಿಂದ ಹಣ ವಸೂಲಿ ಮಾಡುತ್ತಿದ್ದ ವೈದ್ಯರಿಬ್ಬರು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರ ಬಳಿ ಸಿಕ್ಕಿಬಿದ್ದಿದ್ದಾರೆ.
ADVERTISEMENT
`ನಾವು ಯಾರಿಂದಲೂ ಹಣ ಕೇಳಿಲ್ಲ. ಅವರು ಖುಷಿಯಿಂದ ಕೊಟ್ಟಿದನ್ನು ಮಾತ್ರ ಪಡೆದಿದ್ದೇವೆ’ ಎಂದು ಈ ವೇಳೆ ಡಾ ಅಖಿಲ ಕಿತ್ತೂರ ಹಾಗೂ ಡಾ ಕೀರ್ತಿ ಅವರು ಹೇಳಿಕೆ ನೀಡಿದ್ದಾರೆ. ಇದರಿಂದ ಆರ್ ವಿ ದೇಶಪಾಂಡೆ ಅವರು ಇನ್ನಷ್ಟು ಸಿಡಿಮಿಡಿಗೊಂಡಿದ್ದು, ಕಣ್ಮುಂದೆ ಲಂಚಾವತಾರ ನಡೆದರೂ ಸುಮ್ಮನಿರುವ ತಹಶೀಲ್ದಾರ್ ಅವರನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. `ಖುಷಿ ಆಗಿದ್ದರೆ ಜನ ಪೇಡೆ ಹಂಚುತ್ತಾರೆ. ಹಣ ಹಂಚುವ ಪದ್ಧತಿ ಎಲ್ಲಿಯೂ ಇಲ್ಲ. ಇಂಥಹುದನ್ನು ನಾನು ಸಹಿಸುವುದಿಲ್ಲ’ ಎಂದು ಆರ್ ವಿ ದೇಶಪಾಂಡೆ ಗುಡುಗಿದ್ದಾರೆ.
`ನಾವು ಖುಷಿಗೆ ಕೊಟ್ಟಿದನ್ನು ಮಾತ್ರಪಡೆದಿದ್ದೇವೆ’ ಎಂದು ವೈದ್ಯರು ಹೇಳಿದ್ದು, ಇದರಿಂದ ಸಿಡಿಮಿಡಿಗೊಂಡ ಆರ್ ವಿ ದೇಶಪಾಂಡೆ ಅವರು `ನಿಮಗೆ ಮಕ್ಕಳಾದಾಗ ಎಷ್ಟು ಖುಷಿ ಕೊಟ್ಟಿದ್ದೀರಿ?’ ಎಂದು ಅವರು ವೈದ್ಯರಿಬ್ಬರಿಗೂ ಪ್ರಶ್ನಿಸಿದ್ದಾರೆ. `ಜನರಿಂದ ವಸೂಲಿ ಮಾಡಿದ ಎಲ್ಲಾ ಹಣವನ್ನು ಅವರಿಗೆ ಮರಳಿಸಬೇಕು. ಇಲ್ಲವಾದಲ್ಲಿ ಪೊಲೀಸರನ್ನು ಕರೆಯಿಸುತ್ತೇನೆ’ ಎಂದು ಆರ್ ವಿ ದೇಶಪಾಂಡೆ ಅವರು ವೈದ್ಯರಿಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ.
ADVERTISEMENT
ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆರೋಗ್ಯ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಆರ್ ವಿ ದೇಶಪಾಂಡೆ ಅವರು ಪ್ರಶ್ನಿಸಿದ್ದು, ಆಸ್ಪತ್ರೆಯ ಸೌಲಭ್ಯ, ರೋಗಿಗಳ ಸೇವಾ ಗುಣಮಟ್ಟ, ಔಷಧಿ ಲಭ್ಯತೆ ಹಾಗೂ ಮೂಲಸೌಕರ್ಯದ ಬಗ್ಗೆ ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಹೆರಿಗೆ ಹಾಗೂ ಸಿಜೇರಿಯನ್ ಬಳಿಕ ಬಡ ರೋಗಿಗಳಿಂದ ಹಣ ಪಡೆಯಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ. ಡಾ ಅಖಿಲ ಕಿತ್ತೂರ ಹಾಗೂ ಡಾ ಕೀರ್ತಿ ಅವರ ವಿರುದ್ಧ ಸಾರ್ವಜನಿಕರು ಆರೋಪಿಸಿದ್ದು, 15ರಿಂದ 20 ಸಾವಿರ ರೂ ವಸೂಲಿ ಮಾಡಿದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
`ನಾವು ಯಾರಿಂದಲೂ ಹಣ ಕೇಳಿ ಪಡೆಯುವುದಿಲ್ಲ. ಅವರು ಕೊಟ್ಟರೆ ಮಾತ್ರ ಸ್ವೀಕರಿಸುತ್ತೇವೆ’ ಎಂದು ವೈದ್ಯರಿಬ್ಬರು ಸಭೆಯಲ್ಲಿ ಹೇಳಿದ್ದು, `ನಾವು ಕೇಳುವುದಿಲ್ಲ, ಕೊಟ್ಟಷ್ಟು ತೆಗೆದುಕೊಳ್ಳುತ್ತೇವೆ ಎಂದರೆ ಏನರ್ಥ? ನಿಮಗೆ ಮಾನ ಮರ್ಯಾದೆ ಇಲ್ಲವಾ?’ ಎಂದು ಆರ್ ವಿ ದೇಶಪಾಂಡೆ ಗರಂ ಆಗಿದ್ದಾರೆ. `ಮುಂದೆ ಯಾರಿಂದಾದರೂ ಹಣ ಸ್ವೀಕರಿಸಿದರೆ ಪೊಲೀಸ್ ದೂರು ದಾಖಲಿಸುವೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಈವರೆಗೆ ಹಣಪಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ. `ಬಡವರ ಹತ್ತಿರ ಸುಲಿಗೆ ಮಾಡಿದರೆ ಹುಶಾರ್’ ಎಂದು ಆ ವೈದ್ಯರಿಬ್ಬರಿಗೂ ಎಚ್ಚರಿಸಿದ್ದಾರೆ.
ಲಂಚಪಡೆದ ವೈದ್ಯಾಧಿಕಾರಿಗಳಿಗೆ ಬೆವರಿಳಿಸಿದ ಶಾಸಕ: ವಿಡಿಯೋ ಇಲ್ಲಿ ನೋಡಿ..