ಮುಂಡಗೋಡ ತಮ್ಯಾನಕೊಪ್ಪದಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಐದಾರು ಜನ ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೆ ಕಲ್ಲು ತಾಗಿದ್ದು, ನೋವಾಗಿದೆ.
ಧಾರವಾಡದ ಬೇಕರಿ ಕೆಲಸಗಾರ ಪ್ರೇಮಕುಮಾರ ಗೊಲ್ಲಿಪಲ್ಲಿ ಅವರು ಫೆ 2ರಂದು ಕಾರಿನಲ್ಲಿ ಮುಂಡಗೋಡಿಗೆ ಬಂದಿದ್ದರು. ಆ ಕಾರಿನಲ್ಲಿ ಬೇಕರಿ ಮಾಲಕ ಹಮದ್ ಶಿರಾಜ ಪಣಿಬಂದ, ಪರಿಚಯಸ್ಥ ಅಲ್ತಾಪ ಪಣಿಬಂದ್ ಹಾಗೂ ಜಿಲಾನಿ ಅವರು ಜೊತೆಗಿದ್ದರು. ಅವರೆಲ್ಲರೂ ತಮ್ಯಾನಕೊಪ್ಪದಲ್ಲಿರುವ ಮಹಮದ್ ಪಣಿಬಂದ ಅವರ ಹೊಲಕ್ಕೆ ಹೋಗಿದ್ದು, ರಾತ್ರಿ ಮರಳುತ್ತಿದ್ದರು.
ಆ ವೇಳೆ ಕಾರಿನಲ್ಲಿದ್ದ ಜಿಲಾನಿ ಹಾಗೂ ಅದೇ ಊರಿನ ವ್ಯಕ್ತಿಯೊಬ್ಬರ ನಡುವೆ ಜಗಳ ಶುರುವಾಯಿತು. ದಿಢೀರ್ ಆಗಿ ಸ್ಥಳಕ್ಕೆ ಐದಾರು ಜನ ಗುಂಪು ಕಟ್ಟಿಕೊಂಡು ಬಂದರು. `ಬೇರೆ ಊರಿನಿಂದ ಬಂದು ಇಲ್ಲಿ ಜಗಳ ಮಾಡುವಿರಾ?’ ಎಂದು ಅವರೆಲ್ಲರೂ ಪ್ರಶ್ನಿಸಿದ್ದು, ಉತ್ತರಿಸುವುದರೊಳಗೆ ಕಲ್ಲು ತೂರಾಟ ಶುರು ಮಾಡಿದರು. ಆ ಕಲ್ಲು ಮಹಮದ್ ಸಿರಾಜ್ ಹಾಗೂ ಅಲ್ತಾಪ ಅವರಿಗೆ ತಾಗಿತು. ಅವರಿಬ್ಬರು ಗಾಯಗೊಂಡರು. ಕಾರು ಸಹ ಜಖಂ ಆಯಿತು. ಆದರೆ, ಕಲ್ಲು ತೂರಾಟ ಮಾಡಿದವರು ಯಾರು? ಎಂದು ಗೊತ್ತಾಗಲಿಲ್ಲ. ಅವರ ಪತ್ತೆಗಾಗಿ ಪ್ರೇಮಕುಮಾರ ಗೊಲ್ಲಿಪಲ್ಲಿ ಅವರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಕಿಡಿಗೇಡಿಗಳ ಶೋಧ ನಡೆಸಿದ್ದಾರೆ.