ಬೇಡ್ತಿ, ಅಘನಾಶಿನಿ ಹಾಗೂ ಶಾಲ್ಮಲಾ ನದಿಗಳ ತಿರುವು ಯೋಜನೆಗಳನ್ನು ಕೈಬಿಡಬೇಕು ಎಂಬ ಉದ್ದೇಶದಿಂದ ಭಕ್ತರಲ್ಲಿ ಜಾಗೃತಿ ಮೂಡಿಸಲು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವೂ ಭಜನಾ ಅಭಿಯಾನ ನಡೆಸಲು ನಿರ್ಧರಿಸಿದೆ. ಈ ಯೋಜನೆ ನಿಲ್ಲಿಸುವಂತೆ ದೇವರಲ್ಲಿ ಪ್ರಾರ್ಥಿಸಲು ಯುಗಾದಿಯಿಂದ ರಾಮನವಮಿಯವರೆಗೆ ಒಂಬತ್ತು ದಿನಗಳ ಕಾಲ ಎಲ್ಲಾ ದೇವಾಲಯಗಳಲ್ಲಿ ಭಜನೆ ನಡೆಯಲಿದೆ.
Advertisement. Scroll to continue reading.
ಭಜನೆ ಮೂಲಕ ದೇವರಲ್ಲಿ ಪ್ರಾರ್ಥಿಸುವಂತೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿಷ್ಯವರ್ಗಕ್ಕೆ ಸೂಚನೆ ನೀಡಿದೆ. ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಯಲಿದೆ. ಇತ್ತೀಚೆಗೆ ಬೇಡ್ತಿ ಮತ್ತು ಅಘನಾಶಿನಿ ನದಿಗಳಲ್ಲಿ ನಡೆಸಿದ ಪೂಜೆ ಹಾಗೂ ಗಂಗಾರತಿ ಕಾರ್ಯಕ್ರಮಗಳು ಚಳುವಳಿಗೆ ಬಲ ನೀಡಿದ್ದು, `ನದಿ ಪೂಜೆಯೇ ನದಿ ಉಳಿಸಿ ಸತ್ಯಾಗ್ರಹ’ ಎಂದು ಶ್ರೀಗಳು ಹೇಳಿದ್ದಾರೆ. ಅದರ ಭಾಗವಾಗಿ `ಯುಗಾದಿಯಿಂದ ರಾಮನವಮಿಯವರೆಗೆ ಪ್ರತಿದಿನ ಎರಡು ಗಂಟೆಗಳ ಕಾಲ ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ಆಯೋಜಿಸಿ, ನದಿ ತಿರುವು ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೈಬಿಡಬೇಕು’ ಎಂಬ ಸಂದೇಶವನ್ನು ಭಕ್ತರಲ್ಲಿ ಹಂಚುವAತೆ ಸೂಚಿಸಲಾಗಿದೆ. ಭಜನೆ ಆರಂಭದಲ್ಲಿ ಇದರ ಕುರಿತು ಮಾಹಿತಿ ನೀಡುವುದರ ಜೊತೆಗೆ ಕಾರ್ಯಕ್ರಮದ ಅಂತ್ಯದಲ್ಲಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಎರಡು ನಿಮಿಷ ಧ್ಯಾನ ಮಾಡಲಾಗುತ್ತದೆ. ಬಳಿಕ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಇನ್ನೂ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಹೆಸರು ಹಾಗೂ ಸಹಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಅಲ್ಲದೆ, ನದಿ ಉಳಿಸುವ ಹೋರಾಟಕ್ಕೆ ಬೆಂಬಲವಾಗಿ ಪತ್ರ ಚಳುವಳಿಗೂ ಚಾಲನೆ ನೀಡಲಾಗಿದ್ದು, ಭಕ್ತರು ತಮ್ಮ ಸಹಿಸಹಿತ ಪತ್ರಗಳನ್ನು ನೀಡುವಂತೆ ಕೋರಲಾಗಿದೆ. ಸಮಿತಿ ಸಂಚಾಲಕರು, ಸೀಮೆಗಳ ಪ್ರಮುಖರು, ಮಾತೃಮಂಡಳಿ ಹಾಗೂ ವಿವಿಧ ಉಪಸಮಿತಿಗಳು ಭಜನಾ ಕಾರ್ಯಕ್ರಮ ಯಶಸ್ವಿಯಾಗಲು ಸಂಯೋಜಿತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಪರೀಕ್ಷೆ ಮುಗಿಸಿರುವ ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳು ಕೂಡ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಗ್ರಾಮ ಹಾಗೂ ಬೀದಿ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮಗಳ ವರದಿಯನ್ನು ಸಂಗ್ರಹಿಸಿ ಶ್ರೀಮಠಕ್ಕೆ ಸಲ್ಲಿಸುವ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ತಿಳಿಸಿದೆ.