ಪದೇ ಪದೇ ವಿದ್ಯುತ್ ಕಡಿತದಿಂದ ಸಮಸ್ಯೆ ಅನುಭವಿಸುವ ರೈತರಿಗಾಗಿ ಸರ್ಕಾರ `ಕುಸುಮ್-ಬಿ’ ಯೋಜನೆಯನ್ನು ಜಾರಿಗೆ ತಂದಿದೆ. ಸೋಲಾರ್ ಪಂಪ್ಸೆಟ್ ಆಧಾರಿತವಾಗಿರುವ ಯೋಜನೆಗೆ ಸರ್ಕಾರದಿಂದ ಶೇ 80ರಷ್ಟು ಸಬ್ಸಿಡಿ ಸಿಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 23 ರೈತರು ಈ ಯೋಜನೆಯ ಪ್ರಯೋಜನಪಡೆದಿದ್ದಾರೆ. ಇನ್ನಷ್ಟು ಜನ ಅರ್ಜಿ ಸಲ್ಲಿಸಿದ್ದು, ಅವರ ಕ್ಷೇತ್ರ ಭೇಟಿಯ ಸಮೀಕ್ಷೆ ನಡೆದಿದೆ.
Advertisement. Scroll to continue reading.
ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್ ಬಿ ಯೊಜನೆ ರೂಪಿಸಲಾಗಿದೆ. ಈ ಯೋಜನೆಯ ಮೂಲಕ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು ಮತ್ತು ಸೌರಶಕ್ತಿ ಬಳಕೆಯ ಉತ್ತೇಜನ ಮಾಡಲು ಸರ್ಕಾರ ಈ ಯೋಜನೆ ರೂಪಿಸಿದೆ. ಮೊದಲು ಈ ಯೋಜನೆ ಮೂಲಕ ಸೌರ ಕೃಷಿ ಪಂಪ್ಸೆಟ್ ಅಳವಡಿಸಲು ಶೇ 30ರಷ್ಟು ಸಬ್ಸಿಡಿ ಸಿಗುತ್ತಿದ್ದು, ನಂತರ ಶೇ 50ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಸಬ್ಸಿಡಿ ಮೊತ್ತವನ್ನು ಶೇ 80ಕ್ಕೆ ಏರಿಸಲಾಗಿದೆ. ರೈತರಿಗೆ ಸೌರ ಫಲಕಗಳು, ಸಬ್ ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್ಗಳು, ಮೌಂಟಿoಗ್ ಸ್ಟ್ರಕ್ಟರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಖರೀದಿಗೆ ಈ ಸಹಾಯಧನ ನೆರವಾಗಲಿದೆ.
ರೈತರು 3 ಹೆಚ್ ಪಿ, 5 ಹೆಚ್ ಪಿ, 7.5 ಹೆಚ್ಪಿ ಮತ್ತು 10 ಹೆಚ್ ಪಿ ಸಾಮರ್ಥ್ಯದ ಸರ್ಫೇಸಬಲ್ ಸಬ್ ಮರ್ಸಿಬಲ್ ಸೌರ ಪಂಪ್ಸೆಟ್ಗಳನ್ನು ಅಳಡಿಸಿಕೊಳ್ಳಬಹುದಾಗಿದ್ದು, ಇದಕ್ಕೆ ತಗಲುವ ವೆಚ್ಚದಲ್ಲಿ ಶೇ 80ರಷ್ಟು ಸಹಾಯಧನವನ್ನು ಸರ್ಕಾರ ಪಾವತಿಸಲಿದೆ. ಶೇ 20ರಷ್ಟು ರೈತರು ಪಾವತಿ ಕಡ್ಡಾಯ. ಈ ಸೌರ ಪಂಪ್ಸೆಟ್ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗಿದೆ. ಸೌರ ಪಂಪ್ಸೆಟ್ ಬಳಕೆಯಿಂದ ಸುಮಾರು 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ.
ಅನಧಿಕೃತ ಪಂಪ್ಸೆಟ್ಗಳನ್ನು ಸಕ್ರಮಗೊಳಿಸುವ ಯೋಜನೆಯಡಿ ರೂ 50ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ರೈತರು ಅರ್ಜಿ ನೋಂದಾಯಿಸಿದಲ್ಲಿ ಅಂತಹ ರೈತರ ನೀರಾವರಿ ಪಂಪ್ಸೆಟ್ಗೆ ಈ ಯೋಜನೆ ಅಡಿ ಮೊದಲ ಆದ್ಯತೆ ಕೊಡಲಾಗುತ್ತದೆ. ರೈತರು ತಮ್ಮ ಆಧಾರ್, ಆರ್.ಟಿ.ಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಹಾಕಬೇಕಿದೆ. ರೈತರ ನೋಂದಾಣಿ ಸಮಸ್ಯೆಯನ್ನು ಬಗೆಹರಿಸಲು ಸಹಾಯವಾಣಿ ಸ್ಥಾಪಿಸಲಾಗಿದ್ದು, 080-22202100ಗೆ ಫೋನ್ ಮಾಡಿ ಮಾಹಿತಿಪಡೆಯಲು ಸಾಧ್ಯ. ಇನ್ನೂ ಹೆಚ್ಚಿನ ಮಾಹಿತಿಗೆ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ..
ಯೋಜನೆಗಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ :`ಕುಸುಮ್-ಬಿ ಯೋಜನೆಗಾಗಿ ಅರ್ಜಿ’