`ಅಧಿಕಾರ-ಅಂತಸ್ತುಗಳಿಗಿoತಲೂ ಗುರುಹಿರಿಯರ ಆಶೀರ್ವಾದ ಶ್ರೇಷ್ಠ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.
ಸಿದ್ದಾಪುರದ ಕಲಗದ್ದೆಯ ಶ್ರೀ ನಾಟ್ಯವಿನಾಯಕ ಹಾಗೂ ಲಲಿತಾ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವರ್ಷಪೂರ್ತಿಯ ಮೋದಕ ಸೇವೆಯ ಮಹಾ ಸಮಾರೋಪ, ಮಹಾಪೂರ್ಣಾಹುತಿ, ನೂತನ ಕಾಮೇಶ್ವರ ದೇಗುಲ ಲೋಕಾರ್ಪಣೆ ಕಾರ್ಯಕ್ರಮ ನಡೆದಿದೆ. ಆ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಭಾಗವಹಿಸಿದ್ದಾರೆ. ಅದೇ ವೇದಿಕೆಯಲ್ಲಿ ಬಸವರಾಜ ಹೊರಟ್ಟಿ ಅವರಿಗೆ ರಾಘವೇಶ್ವರ ಶ್ರೀಗಳು `ರಾಜಮಾನ್ಯ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಈ ವೇಳೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳೊಂದಿಗಿನ ದಶಕಗಳ ಕಾಲದ ಒಡನಾಟ ಹಾಗೂ ಗೋ ಸೇವೆಯ ಮಹತ್ವದ ಬಗ್ಗೆ ಮಾತನಾಡಿ ಬಸವರಾಜ ಹೊರಟ್ಟಿ ಅವರು ಭಾವುಕರಾಗಿದ್ದಾರೆ.
`ಸರ್ಕಾರ ಕೋಟಿ ರೂ ಖರ್ಚು ಮಾಡಿದರೂ ಮಾಡಲಾಗದ ಕೆಲಸವನ್ನು ಶ್ರೀಗಳು ಭಕ್ತಿಯಿಂದ ಮಾಡುತ್ತಿದ್ದಾರೆ. ಸಮಾಜದಲ್ಲಿ ಮೌಲ್ಯಗಳ ಕುಸಿತ ಮತ್ತು ದ್ವೇಷದ ವಾತಾವರಣದ ನಡುವೆ ಪವಿತ್ರ ಸ್ಥಳಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ’ ಎಂದವರು ಹೇಳಿದ್ದಾರೆ. ಈ ಪರಿಸರ ನೆಮ್ಮದಿಯ ತಾಣವಾಗಿದೆ. ನಮ್ಮ ಶಾಸಕರೂ ಕೆಲವೊಮ್ಮೆ ಹಾದಿ ತಪ್ಪುತ್ತಿದ್ದು ಇಲ್ಲಿಯೇ ತರಬೇತಿ ಕೊಡಿಸುವ ಅವಶ್ಯಕತೆಯಿದೆ’ ಎಂದು ಬಸವರಾಜ ಹೊರಟ್ಟಿ ಅವರು ಮಾರ್ಮಿಕವಾಗಿ ಹೇಳಿದ್ದಾರೆ. `ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರೊಂದಿಗೆ ಕೈಜೋಡಿಸಿ ಮಠದ ಮತ್ತು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ’ ಎಂದು ಅವರು ಭರವಸೆ ನೀಡಿದ್ದಾರೆ.
ಕಲಗದ್ದೆಯ ಈ ರೂಪಾಂತರವನ್ನು ಶ್ರೀಗಳು ಒಂದು ಪವಾಡ ಸದೃಶ ಕಾರ್ಯ ಎಂದು ಬಣ್ಣಿಸಿದ್ದಾರೆ. `ಕೇವಲ 21 ದಿನಗಳಲ್ಲಿ ಕಾಮೇಶ್ವರ ದೇವಸ್ಥಾನ ಮತ್ತು ಅದಕ್ಕಿಂತಲೂ ವೇಗವಾಗಿ ಕೇವಲ 15 ದಿನಗಳಲ್ಲಿ ಗುರುಭವನ ನಿರ್ಮಾಣವಾಗಿರುವುದು ಮನುಷ್ಯ ಸಹಜ ಶಕ್ತಿಯಿಂದ ಸಾಧ್ಯವಿಲ್ಲದ ಮಾತು. ಇದು ದೃಢ ಇಚ್ಛಾಶಕ್ತಿಯ ಫಲವಾಗಿದ್ದು, ಕಡಿಮೆ ಅವಧಿಯಲ್ಲಿ ಕಟ್ಟಡ ನಿರ್ಮಾಣವಾಗಿದ್ದು ದೈವಿಕ ಸಂಕಲ್ಪದ ಸಂಕೇತವಾಗಿದೆ’ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. `ದೃಢ ಸಂಕಲ್ಪ ಮತ್ತು ನಿರಂತರ ಸಾಧನೆಯ ಹಾದಿಯಲ್ಲಿ ಪವಾಡಗಳು ಘಟಿಸುತ್ತವೆ ಎಂಬುದಕ್ಕೆ ಎಂಟು ತಿಂಗಳುಗಳ ಕಾಲ ಶ್ರದ್ಧೆಯಿಂದ ನಡೆದ ಈ ಮೋದಕ ಹವನವೇ ಸಾಕ್ಷಿಯಾಗಿದ್ದು, ಸಾಮೂಹಿಕ ಶ್ರಮ ಹಾಗೂ ಛಲದಿಂದ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದು ಇಲ್ಲಿ ಸಾಬೀತಾಗಿದೆ’ ಎಂದಿದ್ದಾರೆ. ಚೈತನ್ಯ ರಾಜಾರಾಮ ಕ್ಷೇತ್ರ ಶಿರಳಗಿ ಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ `ಪುರಾಣಗಳಲ್ಲಿ ಬರುವ ಶಿವನ ಕುಟುಂಬದ ಪರಿಕಲ್ಪನೆಯು ಕೇವಲ ಲೌಕಿಕ ಸಂಬAಧವಲ್ಲ. ಅದು ಪ್ರಕೃತಿ ಮತ್ತು ಪುರುಷ ತತ್ವದ ಸಂಕೇತವಾಗಿದೆ. ಗಣಪತಿಯು ಸಮಷ್ಟಿ ಬುದ್ಧಿಯ ಸಂಕೇತವಾಗಿದ್ದು, ಈ ಎಲ್ಲ ದೈವಿಕ ರೂಪಗಳು ಒಂದೇ ಪರಬ್ರಹ್ಮನ ವಿವಿಧ ಅಭಿವ್ಯಕ್ತಿಗಳಾಗಿವೆ’ ಎಂದಿದ್ದಾರೆ. `ದೈಹಿಕ ಕಾಯಿಲೆಗೆ ಆಸ್ಪತ್ರೆ ಇರುವಂತೆ, ಮಾನಸಿಕ ನೆಮ್ಮದಿ ಮತ್ತು ಶಾಂತಿಗಾಗಿ ದೇವಸ್ಥಾನಗಳು ಅವಶ್ಯಕ. ಭಕ್ತರ ಸಂಕಷ್ಟಗಳನ್ನು ನೀಗಿಸುವ ಜಾಗೃತ ಕ್ಷೇತ್ರವಾಗಿ ಈ ಕ್ಷೇತ್ರ ಬೆಳೆಯಲಿ’ ಎಂದವರು ಹಾರೈಸಿದ್ದಾರೆ.
ಈ ವೇಳೆ ಸಿದ್ದಾಪುರ ಟಿ ಎಂ ಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೇಸರ ಅವರಿಗೆ `ಸಿಂಧೂರಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಮೋದಕ ಸೇವಾ ಸಮಿತಿಯ ಸ್ವಾಗತ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ, ಪ್ರಧಾನ ವಿಶ್ವಸ್ತ ವಿನಾಯಕ ಹೆಗಡೆ ಕಲಗದ್ದೆ, ಮೋಹನ ಹೆಗಡೆ ಹೇರವಟ್ಟ, ಗಣಪತಿ ಹೆಗಡೆ ಗುಂಜಗೋಡ ವಿವಿಧ ಕಾರ್ಯಕ್ರಮಗಳ ಜವಾಬ್ದಾರಿ ನಿಭಾಯಿಸಿದ್ದಾರೆ.