ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ಕಾರಣ ದುಷ್ಕರ್ಮಿಗಳು ವೈದ್ಯೆ ಹಾಗೂ ಅವರ ಪತಿ ವಿರುದ್ಧ ದ್ವೇಷ ಸಾಧಿಸಿದ್ದಾರೆ. ಕಾರವಾರದ ಸದಾಶಿವಗಡದ ಬಳಿ ವೈದ್ಯೆಯ ಅಪಹರಣ ಪ್ರಯತ್ನ ನಡೆದಿದ್ದು, ನಂತರ ಅವರ ಕೊಲೆ ಪ್ರಯತ್ನವೂ ನಡೆದಿದೆ. ಈ ವೇಳೆ ವೈದ್ಯೆ ಸುಮಾ ಪಡವಾಳಕರ್ ಅವರ ಜೊತೆ ಅವರ ಪತಿ ಪ್ರಶಾಂತ ಗೋವೇಕರ್ ಅವರನ್ನು ಸಹ ಎದುರಾಳಿಗಳು ಹಿಡಿದು ಥಳಿಸಿದ್ದಾರೆ.
ಪ್ರಶಾಂತ ದತ್ತಾರಾಮ ಗೋವೇಕರ್ ಅವರು ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯರಾಗಿದ್ದಾರೆ. ಕಾರವಾರದಲ್ಲಿ ಮಿತಿ ಮೀರಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಅದರ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ. ಮರಳುಗಾರಿಕೆ ಮಾಡುವವರ ವಿರುದ್ಧ ದೂರು ನೀಡಿದ ಕಾರಣ ಅವರ ಮೇಲೆ ಈ ಹಿಂದೆಯೂ ದಾಳಿ ನಡೆದಿದ್ದು, ಇದೀಗ ಅವರ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಆಕ್ರಮಣ ನಡೆದಿದೆ. ಏಪ್ರಿಲ್ 6ರಂದು ಗೋವಾ ನೋಂದಣಿಯ ಕಾರಿನಲ್ಲಿ ಬಂದ ಮೂವರು ಪ್ರಶಾಂತ ಗೋವೇಕರ್ ಹಾಗೂ ಅವರ ಪತ್ನಿ ಸುಮಾ ಪಡವಾಳಕರ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಕಾರವಾರದ ಸದಾಶಿವಗಡ ಬಳಿಯ ಕಣಸಗಿರಿಯ ಮಾದೇವ ದೇವಾಲಯ ಹತ್ತಿರ ಸುಮಾ ಪಡವಾಳಕರ್ ಅವರು ವಾಸವಾಗಿದ್ದಾರೆ. ಕಾರವಾರದ ಜ್ನಾನೇಶ್ವರ ಕೋಳಂಬಕರ್, ವಿಶಾಲ ಕೋಳಂಬಕರ್ ಹಾಗೂ ದರ್ಶನ್ ಕೋಳಂಬಕರ್ ಎಂಬಾತರು ತಮ್ಮ ಅಪಹರಣಕ್ಕೆ ಪ್ರಯತ್ನ ಮಾಡಿರುವುದಾಗಿ ಅವರು ದೂರಿದ್ದಾರೆ. `ಸದಾಶಿವಗಡದ ತಾರಿವಾಡದಿಂದ ಅಪಹರಣ ಪ್ರಯತ್ನ ನಡೆದಿದ್ದು, ಅದು ಸಾಧ್ಯವಾಗದೇ ಇದ್ದಾಗ ಕೊಲೆ ಪ್ರಯತ್ನ ಮಾಡಿದ್ದಾರೆ. ಅದು ಆಗದಿದ್ದಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ’ ಎಂದವರು ವಿವರಿಸಿದ್ದಾರೆ. ಈ ವೇಳೆ ಪ್ರಶಾಂತ ಗೋವೇಕರ್ ಅವರ ಮೇಲೆಯೂ ಹಲ್ಲೆ ನಡೆದಿದ್ದು, ಪ್ರಶಾಂತ ಗೋವೇಕರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯೆ ಸುಮಾ ಪಡವಾಳಕರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಮನೆಗೆ ಮರಳಿದ್ದಾರೆ.
ತಮ್ಮ ಮೇಲೆ ನಡೆದ ದಾಳಿಯ ಬಗ್ಗೆ ಸುಮಾ ಪಡವಾಳಕರ್ ಅವರು ಪೊಲೀಸ್ ದೂರು ನೀಡಿದ್ದಾರೆ. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದು, ಗೋವಾ ನೋಂದಣಿಯ ಕಾರನ್ನು ವಶಕ್ಕೆಪಡೆದಿದ್ದಾರೆ. ಹಲ್ಲೆ ನಡೆಸಿದವರಿಗಾಗಿ ಪೊಲೀಸರು ಶೋಧ ಶುರು ಮಾಡಿದ್ದಾರೆ. `ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಡೆಸಿದ ಕಾರಣ ತಮ್ಮ ಮೇಲೆ ದಾಳಿ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗಬೇಕು’ ಎಂದು ಪ್ರಶಾಂತ ಗೋವೇಕರ್ ಅವರು ಆಗ್ರಹಿಸಿದ್ದಾರೆ.