ಹಳಿಯಾಳದ ಕೆಕೆ ಹಳ್ಳಿ ಗ್ರಾಮದಲ್ಲಿರುವ ಸತ್ಯಪುರುಷ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಹೋಗಿದ್ದ ನಾಗರಾಜ ಗೌಡ ಅವರ ಮೇಲೆ ದಾಳಿ ನಡೆದಿದೆ. ಸಂಘದ ಕೋಣೆಯಲ್ಲಿ ಬಂಧಿಸಿ ಬೆಂಕಿ ಹಾಕುವುದಾಗಿ ಇಬ್ಬರು ಅವರನ್ನು ಬೆದರಿಸಿದ್ದಾರೆ.
ಹಳಿಯಾಳದ ಮುರ್ಕವಾಡ ಗ್ರಾಮದಲ್ಲಿ ನಾಗರಾಜ ಅರ್ಜುನ ಗೌಡ ಅವರು ವಾಸವಾಗಿದ್ದಾರೆ. ರೈತರಾಗಿ ಬದುಕು ಕಟ್ಟಿಕೊಂಡಿರುವ ಅವರು ಕೆಕೆ ಹಳ್ಳಿ ಗ್ರಾಮದಲ್ಲಿರುವ ಸತ್ಯಪುರುಷ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆಡಳಿತ ವಿಷಯದ ಮಾತುಕಥೆಗಾಗಿ ಅವರು ಆಗಾಗ ಸೊಸೈಟಿಗೆ ಭೇಟಿ ನೀಡುತ್ತಿದ್ದು, ಸೊಸೈಟಿಗೆ ಹೋಗಿದ್ದ ಅವರನ್ನು ಆಗಂತುಕರಿಬ್ಬರು ಅಡ್ಡಗಟ್ಟಿದ್ದಾರೆ. ಮುಗುದಕೊಪ್ಪದ ರಾಮು ಕಲ್ಲಪ್ಪ ಸುಣಗಾರ ಹಾಗೂ ಮುರ್ಕವಾಡದ ಆಂಜಿನೇಯ ವೆಂಕಪ್ಪ ಆಕಳವಾಡ ಸೇರಿ ನಾಗರಾಜ ಗೌಡ ಅವರನ್ನು ಹಿಡಿದು ಥಳಿಸಿದ್ದಾರೆ.
ರಾಮು ಸುಣಗಾರ್ ಹಾಗೂ ಆಂಜಿನೇಯ ಆಕಳವಾಡ ಅವರು ನಾಗರಾಜ ಗೌಡ ಅವರ ಮೇಲೆ ಹಲ್ಲೆ ನಡೆಸಲು ಕಾರಣ ಏನು? ಎಂಬುದು ಗೊತ್ತಾಗಿಲ್ಲ. ಥಳಿಸಲು ಶುರು ಮಾಡಿದವರು ಸೂಕ್ತ ಕಾರಣವನ್ನು ಸಹ ಹೇಳಲಿಲ್ಲ. `ಸಂಘದ ಕೋಣೆಯಲ್ಲಿ ತುಂಬಿ ಬೆಂಕಿ ಹಾಕುವೆ’ ಎಂದು ಅವರಿಬ್ಬರು ನಾಗರಾಜ ಗೌಡ ಅವರಿಗೆ ಬೆದರಿಸಿದ್ದಾರೆ. ತಮ್ಮ ಮೇಲಾದ ದಾಳಿಯ ಬಗ್ಗೆ ನಾಗರಾಜ ಗೌಡ ಅವರು ಸಂಘದ ಇನ್ನಿತರ ನಿರ್ದೇಶಕರು ಹಾಗೂ ಕುಟುಂಬದವರ ಜೊತೆ ಚರ್ಚಿಸಿದ್ದಾರೆ. ಅದಾದ ನಂತರ ಅವರು ಪೊಲೀಸ್ ದೂರು ನೀಡಿದ್ದಾರೆ. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.