ಬ್ರಾಹ್ಮಣ ಎಂಬ ಸೋಗಿನಲ್ಲಿ ನೀಚ ಕೆಲಸ ಮಾಡುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳುವ ಹಾಗೇ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಮಾತನಾಡಿದ್ದಾರೆ. ಸಂಸ್ಕಾರದ ಹೆಸರಿನಲ್ಲಿ ಅನಾಚಾರ ಮಾಡುವವರು ಕುಳಿತಲ್ಲಿಯೇ ಬೆವರುವ ಹಾಗೇ ಅವರು ಭಾಷಣ ಮಾಡಿದ್ದಾರೆ.
ಅಖಿಲ ಹವ್ಯಕ ಮಹಾಸಭಾದವರು ಯಲ್ಲಾಪುರದ ಕಾರ್ಮಿಕ ಭವನದಲ್ಲಿ ನಡೆಸಿದ `ಸಂಸ್ಕಾರೋತ್ಸವ’ದಲ್ಲಿ ಅನಂತಕುಮಾರ ಹೆಗಡೆ ಅವರು ಅತ್ಯಂತ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಅನಂತಕುಮಾರ ಹೆಗಡೆ ಅವರು ಯಾರನ್ನು ದೂಷಿಸಿಲ್ಲ. ಯಾರ ಬಗ್ಗೆಯೂ ಆರೋಪಿಸಿಲ್ಲ. ಬದಲಾಗಿ, ತಮ್ಮನ್ನೇ ತಾವು `ಶೂದ್ರ, ವೈಶ್ಯ ಹಾಗೂ ಕ್ಷತ್ರೀಯ’ ಎಂದು ಹೇಳಿಕೊಂಡು ಮಾತು ಶುರು ಮಾಡಿದ ಅವರು 21 ನಿಮಿಷಗಳ ಕಾಲ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. `ಕೇವಲ ಜಾತಿಯಿಂದ ಬ್ರಾಹ್ಮಣತ್ವ ಬರಲ್ಲ’ ಎಂದು ಪ್ರತಿಪಾದಿಸಿದ್ದಾರೆ. ಮಾತು ಮುಗಿಸುವ ವೇಳೆ `ನನ್ನ ಮಾತು ತೀಕ್ಷ್ಣ ಎನಿಸುತ್ತದೆ. ಆದರೆ, ಅದು ವಾಸ್ತವ. ಆ ತೀಕ್ಷ್ಣತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ಮತ್ತೆ ನನ್ನನ್ನು ಇಂಥ ಕಾರ್ಯಕ್ರಮಕ್ಕೆ ಕರೆಯಬೇಡಿ’ ಎಂದು ಸಹ ಹೇಳಿದ್ದಾರೆ. `ಆಚಾರ-ವಿಚಾರಗಳಲ್ಲಿ ನಾವು ನಮ್ಮತನವನ್ನು ಕಳೆದುಕೊಂಡು ದೂರ ಹೋಗುತ್ತಿದ್ದೇವೆ. ಇದ್ದಿದ್ದರಲ್ಲಿಯೇ ಚೂರು-ಪಾರು ಬ್ರಾಹ್ಮಣತ್ವದ ಬಗ್ಗೆ ಹೇಳಿಕೊಂಡು ಅಲೆದಾಡುತ್ತಿದ್ದೇವೆ. ಈ ಜಾತಿಯಲ್ಲಿ ಹುಟ್ಟಿದ್ದರಿಂದ ಬ್ರಾಹ್ಮಣ ಎಂದು ಕರೆಯಿಸಿಕೊಳ್ಳಬೇಕೇ? ಅಥವಾ ನಮ್ಮಲ್ಲಿರುವ ಆಧಾರದಿಂದ ಬ್ರಾಹ್ಮಣ ಎಂದು ಗುರುತಿಸಿಕೊಳ್ಳಬೇಕೆ? ಎಂಬ ಜಿಜ್ಞಾಸೆಯಿದೆ’ ಎಂದು ಸಭಿಕರ ಮುಂದೆಯೇ ಅನಂತಕುಮಾರ ಹೆಗಡೆ ಪ್ರಶ್ನೆಯಿಟ್ಟಿದ್ದಾರೆ. `ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಆತ ಬ್ರಾಹ್ಮಣನಾಗುವುದಿಲ್ಲ. ನಡತೆಯ ಆಧಾರದಲ್ಲಿ ವ್ಯಕ್ತಿ ಬ್ರಾಹ್ಮಣನಾಗುತ್ತಾನೆ’ ಎಂದು ಪ್ರತಿಪಾದಿಸಿದ ಅನಂತಕುಮಾರ ಹೆಗಡೆ ಅವರು `ವೇದಗಳನ್ನು ಕಂಡುಕೊoಡ ಋಷಿಮುನಿಗಳು ಜಾತಿಯಿಂದ ಹುಟ್ಟಿದ ಬ್ರಾಹ್ಮಣರಲ್ಲ. ಆದರೆ, ಅವರ ಕರ್ಮ, ಅವರ ಅನುಷ್ಠಾನ ಹಾಗೂ ತಪಸ್ಸು ಅವರನ್ನು ಬ್ರಾಹ್ಮಣತ್ವದ ಕಡೆ ತೆಗೆದುಕೊಂಡು ಹೋಗಿದೆ’ ಎಂದು ಹೇಳಿದ್ದಾರೆ. `ಬ್ರಾಹ್ಮಣತ್ವವನ್ನು ಜಾತಿಗೆ ಮೀಸಲಾಗಿಡಬೇಡಿ. ಜಾತಿ ಸಂಕೋಲೆಯಲ್ಲಿದ್ದರೆ ಅದು ಬ್ರಾಹ್ಮಣತ್ವಕ್ಕೆ ಮಾಡಿದ ಅಪಚಾರ’ ಎಂದು ಅವರು ಹೇಳಿದ್ದಾರೆ.
`ಯಾರು ಸೇವೆ ಮಾಡುತ್ತಾರೆಯೋ, ಅದರಲ್ಲಿಯೂ ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಮಾಡುತ್ತಾರೆಯೋ ಅವರು ಶೂದ್ರರು. ನಿಸ್ವಾರ್ಥ ಸೇವೆ ಮಾಡುವವರು ಶೂದ್ರ ಎಂದು ಕರೆಯಿಸಿಕೊಳ್ಳುವ ಯೋಗ್ಯತೆಪಡೆಯುತ್ತಾರೆ. ಆದರೆ, ಇಂದಿನ ಅನೇಕ ಯುವಕ-ಯುವತಿಯರಿಗೆ ಶೂದ್ರ ಎಂದು ಕರೆಯಿಸಿಕೊಳ್ಳುವ ಯೋಗ್ಯತೆಯೂ ಇಲ್ಲ’ ಎಂದು ಅನಂತಕುಮಾರ ಹೆಗಡೆ ಅವರು ತಮ್ಮ ಭಾಷಣದಲ್ಲಿ ಕಟುವಾಗಿ ಹೇಳಿದ್ದಾರೆ. `ಸ್ವಂತಕ್ಕೆ ಸ್ವಲ್ಪ. ಸಮಾಜಕ್ಕೆ ಸರ್ವಸ್ವ ಎಂದು ದುಡಿಯುವವ ವೈಶ್ಯ. ನಾನು ಸಹ ಸ್ವಭಾವದಲ್ಲಿ ಕ್ಷತ್ರೀಯ, ವ್ಯವಹಾರದಲ್ಲಿ ವೈಶ್ಯ, ಸಮಾಜದ ಕೆಲಸ ಮಾಡುವಾಗ ಶುದ್ರನಾಗಿದ್ದೆ. ಹೀಗಿರುವಾಗ, ಬ್ರಾಹ್ಮಣತ್ವದ ಬಗ್ಗೆ ಪ್ರತಿಯೊಬ್ಬರು ಅವಲೋಕನ ಮಾಡಿಕೊಳ್ಳಬೇಕು’ ಎನ್ನುವ ಮೂಲಕ ಅನಂತಕುಮಾರ ಹೆಗಡೆ ಅವರು ತಮ್ಮನ್ನು ತಾವೇ ಉದಾಹರಣೆಯನ್ನಾಗಿಸಿಕೊಂಡಿದ್ದು, ಬ್ರಾಹ್ಮಣರ ಮುಖವಾಡಧರಿಸಿ ಬೇಳೆ ಬೇಯಿಸಿಕೊಳ್ಳುತ್ತಿರುವವರ ಬೆವರಿಳಿಸಿದ್ದಾರೆ. `ಬ್ರಾಹ್ಮಣತ್ವ ಎಂಬುದು ಒಂದು ಅರ್ಹತೆ. ಅದೊಂದು ಯೋಗ್ಯತೆ. ಅದು ಜಾತಿ ಅಲ್ಲ. ಅದನ್ನು ಜಾತಿ ಎಂದು ಪರಿಗಣಿಸಿದರೆ ಅದು ಮೂರ್ಖತನ. ಸೃಷ್ಠಿಯ ಚೈತನ್ಯವನ್ನು ಅರ್ಥಮಾಡಿಕೊಂಡು ಅದರೊಂದಿಗೆ ಬದುಕುವ ಶ್ರೇಷ್ಠ ಸ್ಥಿತಿ ಬ್ರಾಹ್ಮಣತ್ವ’ ಎಂದು ಅನಂತಕುಮಾರ ಹೆಗಡೆ ಅವರು ಹೇಳಿದ್ದಾರೆ. `ನಾವು ಯಾವ ಬ್ರಾಹ್ಮಣರು? ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ನಮ್ಮ ಮುಂದಿನ ದಾರಿ ಸರಿಯಾಗಿರಬೇಕು ಎಂದರೆ ಇಂದಿನ ನಿಲುವು ಸ್ಪಷ್ಠವಾಗಿರಬೇಕು. ಮನೆಯಲ್ಲಿರುವ ನಮ್ಮ ಮಕ್ಕಳು ನಮ್ಮ ಮಾತು ಕೇಳಬೇಕು ಎಂದರೆ ನಾವು ಮಾತನಾಡಿದರೆ ಸಾಲಲ್ಲ. ನಮ್ಮ ನಡತೆಯೂ ಹಾಗೇ ಇರಬೇಕು’ ಎಂದು ಅನಂತಕುಮಾರ ಹೆಗಡೆ ಅವರು ಸಭಿಕರಿಗೆ ಕಿವಿಮಾತು ಹೇಳಿದ್ದಾರೆ. `ನಮ್ಮ ನಡೆತೆಯೇ ಮೇಲ್ಪಂಕ್ತಿ ಆದಾಗ ನಮ್ಮ ಮಕ್ಕಳಿಗೆ ನಾವು ಹೇಳಿಕೊಡಬೇಕು ಎಂದಿರುವುದಿಲ್ಲ. ಅವರು ಅದನ್ನು ಅನುಸರಿಸುತ್ತಾರೆ. ಅವರ ವೈಚಾರಿಕತೆಗೆ ತಕ್ಕಂತೆ ಕೆಲ ಪ್ರಶ್ನೆಗಳು ಏಳುತ್ತವೆ. ಅದಕ್ಕೆ ಉತ್ತರ ಕೊಡುವ ಸಾಮರ್ಥ್ಯ ನಮ್ಮಲ್ಲಿರಬೇಕಾಗಿರುತ್ತದೆ’ ಎಂದು ಹೇಳಿದ್ದಾರೆ. `ನನ್ನಲ್ಲಿ ಅಂಥ ಬ್ರಾಹ್ಮಣತ್ವ ಎಲ್ಲಿ ಕಂಡಿತು? ಎಂದು ಭಾಷಣದ ಶುರುವಿನಲ್ಲಿ ಹೇಳಿದ್ದ ಅನಂತಕುಮಾರ ಹೆಗಡೆ ಅವರು ನಡುವೆ `ತಾನೂ ಹೇಳದಿದ್ದರೂ ತನ್ನ ಮಗ ಲಕ್ಷ ಗಾಯತ್ರಿ ಜಪ ಮಾಡು ಪ್ರತಿಜ್ಞೆ ಮಾಡಿದ್ದಾನೆ’ ಎಂಬ ವಿಷಯವನ್ನು ಪ್ರಸ್ತಾಪಿಸಿ ತಮ್ಮ ಮನೆಯ ಸಂಸ್ಕಾರ ಸರಿಯಾಗಿರುವ ಬಗ್ಗೆ ಅವರು ಸಭೀಕರಿಗೆ ವಿಷಯ ಮುಟ್ಟಿಸಿದ್ದಾರೆ.
`ಶಿಕ್ಷಣ ಸಂಸ್ಥೆಯ ಪಾಠ ಸರ್ಟಿಪಿಕೇಟ್ ಗೆ ಮಾತ್ರ ಸೀಮಿತ. ಮನೆಯಲ್ಲಿ ಸಿಕ್ಕ ಸಂಸ್ಕಾರವೇ ಸಮಾಜದಲ್ಲಿ ಆ ಮನುಷ್ಯನಿಗೆ ಸಿಗುವ ಪ್ರಮಾಣಪತ್ರ. ನಮಗೆ ಇಲ್ಲದ ಸಂಸ್ಕಾರವನ್ನು ಮಕ್ಕಳಿಂದ ಏಕೆ ನಿರೀಕ್ಷಿಸುತ್ತೀರಿ? ಎಂದು ಅನಂತಕುಮಾರ ಹೆಗಡೆ ಅವರು ಪ್ರಶ್ನೆ ಮಾಡಿದ್ದಾರೆ. `ದೊಡ್ಡ ದೊಡ್ಡ ವಿಧ್ವತ್ ಸಭೆಗಳಿಂದ ಸಂಸ್ಕಾರ ಬರುವುದಿಲ್ಲ. ನಿತ್ಯದ ಆಚರಣೆಯಿಂದ ಮಾತ್ರ ಸಂಸ್ಕಾರ ಸಿಗುತ್ತದೆ’ ಎಂದವರು ಕಿವಿಮಾತು ಹೇಳಿದ್ದಾರೆ. `ನಮ್ಮ ಸ್ವಭಾವಕ್ಕೆ ತಕ್ಕಂತೆ ನಾವು ದೇವರನ್ನು ಭ್ರಷ್ಟರನ್ನಾಗಿಸಿದ್ದೇವೆ. ಅಂತ ಕೆಲಸ ಮಾಡಿಸಿದರೆ ಗಣಹೋಮ, ಇಂಥ ಕೆಲಸ ಮಾಡಿದರೆ ರುದ್ರಹೋಮ ಎಂದು ದೇವರಿಗೆ ಲಂಚ ಕೊಡುವ ಸ್ಥಿತಿ ತಲುಪಿದ್ದೇವೆ. ಭಗವಂತನ ಜೊತೆ ವ್ಯವಹಾರ ಮಾಡುವ ಮಟ್ಟಕ್ಕೆ ಇಳಿದಿದ್ದು, ನಮ್ಮ ಅನಿಷ್ಟಕ್ಕೆ ತಕ್ಕಂತೆ ದೇವರಿಗೆ ಹೊದಿಕೆ ಹೊದೆಯಿಸುತ್ತಿದ್ದೇವೆ’ ಎನ್ನುತ್ತ ಈ ವ್ಯವಸ್ಥೆಯನ್ನು ಅನಂತಕುಮಾರ ಹೆಗಡೆ ಅವರು ಟೀಕಿಸಿದ್ದಾರೆ. `ಭಗವಂತವಿರುವುದು ನಮ್ಮ ಕಷ್ಟ-ದುಖ: ಆಲಿಸುವುದಕ್ಕಲ್ಲ. ಭಗವಂತ ಒಂದು ಅದ್ಬುತ ಶಕ್ತಿಯಾಗಿದ್ದು, ಅದನ್ನು ಅರ್ಥಮಾಡಿಕೊಮಡರೆ ಎಲ್ಲ ಕಷ್ಟ ದೂರ. ನಾವು ಹೇಳಿದ ಹಾಗೇ ಬರೆದುಕೊಳ್ಳಲು ಭಗವಂತ ಗುಮಾಸ್ತನಲ್ಲ’ ಎಂದು ಈ ವೇಳೆ ಹೇಳಿಕೆ ನೀಡಿದ್ದಾರೆ. `ಸಂಸ್ಕಾರ ಎಂಬುದು ಪ್ರತಿಯೊಬ್ಬರ ಮನೆಯಿಂದ ಶುರುವಾಗಬೇಕು. ಮಠ-ಮಂದಿರ-ಶಿಕ್ಷಣ ಸಂಸ್ಥೆಯಿಂದ ಸಂಸ್ಕಾರ ಸಿಗಲ್ಲ. ಪಾಠ ಮಾಡುವುದರಿಂದ ಸಂಸ್ಕಾರ ಸಿಗಲ್ಲ. ನಮ್ಮನ್ನು ನೋಡಿ ಮಕ್ಕಳು ಕಲಿಯಬೇಕು. ಆ ಯೋಗ್ಯತೆ ಅಳವಡಿಸಿಕೊಂಡ ಅಪ್ಪ-ಅಮ್ಮನೇ ಧನ್ಯರು. ನನ್ನ ಮಕ್ಕಳಿಗೆ ನಾನೇ ಆದರ್ಶ ಎಂಬ ಯೋಗ್ಯತೆ ಅಪ್ಪ ಅಮ್ಮನ ಬಳಿಯಿದ್ದರೆ ಯಾವ ಗುರುವೂ ಬೇಕಿಲ್ಲ. ಸಂಸ್ಕಾರ ಕೊಡಲು ಆ ಯೋಗ್ಯತೆ ಬೇಕು. ಸಂಸ್ಕಾರ ಕೊಡುವ ಮುನ್ನ ಆ ಯೋಗ್ಯತೆ ನಮಗಿದೆಯಾ? ಎಂದು ಪ್ರಶ್ನಿಸಿಕೊಳ್ಳಬೇಕು’ ಎನ್ನುತ್ತ ಅನಂತಕುಮಾರ ಹೆಗಡೆ ಅವರು ಈ ದಿನದ ಭಾಷಣ ಮುಗಿಸಿದ್ದಾರೆ.