ಶಿರಸಿ ದಾಸನಕೊಪ್ಪದ ಕಾಳಂಗಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದ್ದು, ಅಕ್ರಮದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. `ರೈತರ ಸಂಸ್ಥೆ ಹಾಳು ಮಾಡಿ, ರೈತರ ಹಣ ತಿಂದು ಪರಾರಿಯಾದವರು ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಪ್ರತಿಭಟನಾ ನಿರತರಿಗೆ ಭರವಸೆ ನೀಡಿದ್ದಾರೆ.
ಕಾಳಂಗಿ ಸೊಸೈಟಿ ಎದುರು ನೂರಾರು ಸಂಖ್ಯೆಯ ರೈತರು ಅಹೋರಾತ್ರಿ ಧರಣಿ ಮಾಡುತ್ತಿದ್ದು, ಅವರಿಗೆ ಶಿವರಾಮ ಹೆಬ್ಬಾರ್ ಸಮಾಧಾನ ಮಾಡಿದ್ದಾರೆ. `ಕಾಳಂಗಿ ಸೊಸೈಟಿಯಲ್ಲಿ 8 ಕೋಟಿ ರೂ ಮೇಲ್ಪಟ್ಟು ಅವ್ಯವಹಾರ ಆದ ದೂರಿದೆ. ಆಡಳಿತ ಮಂಡಳಿಯವರೇ ಮುಖ್ಯ ಕಾರ್ಯನಿರ್ವಾಹಕರನ್ನು ಬಳಸಿ ಬೇನಾಮಿ ಹೆಸರಿನಲ್ಲಿ ಸಾಲ ತೆಗೆದು ಹಣ ಹೊಡೆದಿದ್ದಾರೆ. ಠೇವಣಿದಾರು ಕೇಳಿದರೂ ಹಣ ಮರಳಿಸಿಲ್ಲ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ. `ಕಳೆದ 20 ದಿನದ ಹಿಂದೆ ಸಂಘದ ಆವಾರದಲ್ಲಿ ಪ್ರತಿಭಟಿಸಿದಾಗ ಸಹಕಾರಿ ಸಹಾಯಕ ನಿಬಂಧಕರು ಸ್ಥಳಕ್ಕಾಗಮಿಸಿ ಪ್ರಾಥಮಿಕ ತನಿಖೆ ನಡೆಸಿ, ಏಳು ದಿನದೊಳಗಡೆ ವರದಿ ನೀಡಲಾಗುತ್ತದೆ ಎಂಬ ಭರವಸೆ ನೀಡಿದ್ದರು. ಆದರೆ, ತನಿಖೆಯೂ ನಡೆದಿಲ್ಲ. ವರದಿಯನ್ನು ಬಹಿರಂಗಪಡಿಸಿಲ್ಲ’ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
`ಆಡಳಿತ ಮಂಡಳಿಯ 12 ಸದಸ್ಯರ ಮೇಲೆಯೂ ನಮ್ಮ ಆರೋಪವಿದೆ. ಪ್ರತಿ ಸದಸ್ಯರಿಗೂ ಜವಾಬ್ದಾರಿಯಿದೆ. ಹಿಂದಿನ ಆಡಳಿತ ಮೇಲೆ ಆರೋಪ ಮಾಡಿ ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರ ಮಾಡಿ ಸಂಘದ ಬಾಗಿಲು ಮುಚ್ಚಲು ಹೊರಟಿದ್ದಾರೆ. ಆಡಳಿತ ಮಂಡಳಿ ಅಮಾನತ್ತಿನಲ್ಲಿಟ್ಟು ತನಿಖೆ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ರೈತರ ಸಮಸ್ಯೆ ಆಲಿಸಿದ ಶಿವರಾಮ ಹೆಬ್ಬಾರ್ `ಜನರು ಕಷ್ಟದಲ್ಲಿದ್ದಾಗ ಅವರ ಸಮಸ್ಯೆಗಳನ್ನು ಆಲಿಸುವುದು ನನ್ನ ಕರ್ತವ್ಯ. ಕಾಳಂಗಿ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆಯ ಸಮಯದಲ್ಲೇ ಕೆಲ ವಿಚಾರಗಳನ್ನು ತಿಳಿಸಿದ್ದು, ರೈತರು ವಿವಿಧ ಆಸೆ ಹಿನ್ನಲೆ ಮತ ನೀಡಿದ್ದಾರೆ. ಚುನಾವಣೆ ವೇಳೆ ಒಳ್ಳೆಯವರ ಮಾತು ಕೇಳದ ಕಾರಣ ಪ್ರತಿಭಟನೆ ಮಾಡುವ ಸ್ಥಿತಿ ಬಂದಿದೆ’ ಎಂದರು. `ಕೆಡಿಸಿಸಿ ಬ್ಯಾಂಕ್ ವತಿಯಿಂದ 1800 ಕೋಟಿ ರೂ. ಸಾಲ ನೀಡಲಾಗಿದ್ದು, ಬ್ಯಾಂಕ್ನಲ್ಲಿ 4 ಸಾವಿರ ಕೋಟಿ ರೂ. ಠೇವಣಿ ಇದೆ. ಆ ಹಣವನ್ನು ರೈತರಿಗೆ ಸಹಾಯ ಮಾಡಲು ಬಳಸಲಾಗುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು’ ಎಂದರು.
`ರೈತರ ಹಾಗೂ ಸಂಘದ ಹಿತ ಬಯಸಬೇಕಾದ ಆಡಳಿತ ಮಂಡಳಿಯೇ ಈ ರೀತಿಯಾಗಿ ನಡೆದುಕೊಂಡರೆ ರೈತರನ್ನು ಯಾರು ಕಾಪಾಡಬೇಕು? ಅನ್ನದಾತ ಯಾವಾಗಲೂ ಸಂಕಷ್ಟದಲ್ಲೇ ಬದುಕುತ್ತಾನೆ. ಕಳೆದ ಬಾರಿ ಬೆಳೆ ಸಾಲ ತೀರಿಸಲು ರೈತರಿಗೆ ಹಣದ ಸಮಸ್ಯೆ ಎದುರಾಗಿತ್ತು. ಆಗ 2,500 ಕುಟುಂಬಗಳು ಸಂಕಷ್ಟಕ್ಕೆ ಸಿಲುಕದಂತೆ ಕೆಡಿಸಿಸಿ ಬ್ಯಾಂಕ್ ಮೂಲಕ ನೆರವು ನೀಡಲಾಗಿತ್ತು. ರೈತರನ್ನು ಕಟ್ ಬಾಕಿ ಸಮಸ್ಯೆಯಿಂದ ರಕ್ಷಿಸಲಾಗಿದೆ’ ಎಂದರು. `ರೈತರನ್ನು ಮೀಟರ್ ಬಡ್ಡಿ ಸಮಸ್ಯೆಯಿಂದ ಹೊರತೆಗೆಯಲು ಕಾಳಂಗಿ ಸೊಸೈಟಿಗೆ ಈಗಾಗಲೇ 45 ಕೋಟಿ ರೂ. ಸಾಲ ನೀಡಿದ್ದೇವೆ. ಕೆಲ ನಿರ್ದೇಶಕರು ನನ್ನ ಬಗ್ಗೆ ಮಾತನಾಡುತ್ತಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು. `ಸಾಲ ವಿತರಣೆಗೆ ಮುಖ್ಯ ಕಾರ್ಯನಿರ್ವಾಹಕನ ಸಹಿ ಅವಶ್ಯವಾಗಿದ್ದರಿಂದ ಪ್ರಭಾರಿ ಕಾರ್ಯನಿರ್ವಾಹಕನನ್ನು ನೇಮಿಸಿ ಸಾಲ ವಿತರಿಸಲಾಗಿದೆ. ಆಡಳಿತ ಮಂಡಳಿಯ ನಿರ್ದೇಶಕರ ಜಾಮೀನು ಪಡೆದು ಸಾಲ ನೀಡಲಾಗಿದೆ. ಎಲ್ಲ ದಾಖಲೆಗಳು ನನ್ನ ಕೈಯಲ್ಲಿವೆ. ರೈತರು ಆಕ್ರೋಶಕ್ಕೆ ಒಳಗಾಗುವ ಮುನ್ನವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ತಪ್ಪಿನಲ್ಲಿ ಯಾರಾದರೂ ಭಾಗಿಯಾಗಿದ್ದರೆ, ಅವರು ಚುನಾವಣೆಗೆ ಹೋಗಿ ಜನರ ಎದುರು ನಿಲ್ಲಲಿ’ ಎಂದು ಶಿವರಾಮ ಹೆಬ್ಬಾರ್ ಅವರು ಸವಾಲು ಹಾಕಿದರು.
`ಆಡಳಿತ ಮಂಡಳಿಯನ್ನು ವಜಾಗೊಳಿಸಲು ಸಿದ್ಧತೆ ನಡೆದಿದೆ. ಮೇ 26ರ ನಂತರ ಬೆಳೆ ಸಾಲ ವಿತರಣೆಯೊಂದಿಗೆ ಕೆಡಿಸಿಸಿ ಬ್ಯಾಂಕ್ ವತಿಯಿಂದ ಲೆಕ್ಕಪರಿಶೋಧಕರ ವಿಶೇಷ ತಂಡ ರಚಿಸಲಾಗಿದೆ. ಹಾಲಿ ಹಾಗೂ ಹಿಂದಿನ ಆಡಳಿತ ಮಂಡಳಿಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ’ ಎಂಬ ಭರವಸೆ ನೀಡಿದರು. `ಸೊಸೈಟಿಯ ವಿಷಯದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಮುಂದಿನ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಲಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ. ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ತಪ್ಪು ಮಾಡಿದವರನ್ನು ಬಿಡುವುದಿಲ್ಲ. ರೈತರ ಹಣದಲ್ಲಿ ಮೋಸ ಮಾಡಿದರೆ ನ್ಯಾಯಾಲಯವೂ ಕ್ಷಮಿಸುವುದಿಲ್ಲ’ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದರು.