ವಾತಾವರಣ ಬದಲಾದ ಬಗ್ಗೆ ಅರಿವಿದ್ದರೂ ಹೊಟ್ಟೆಪಾಡಿನ ಅನಿವಾರ್ಯತೆಗೆ ಸಿಲುಕಿ ಚಿಪ್ಪಿ ಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ ಎಂಟು ಜನ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ಭಟ್ಕಳದ ಶಿರಾಲಿ ತಟ್ಟಿ ಹಕ್ಕಲು ಪ್ರದೇಶದಲ್ಲಿ ನಡೆದ ದುರಂತದಲ್ಲಿ ಸಾವನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಕರಾವಳಿಯ ವಿಶಿಷ್ಟ ಖಾದ್ಯಗಳಲ್ಲಿ ಚಿಪ್ಪೆ ಕಲ್ಲು ಸಹ ಒಂದು. ಸಾವಿರಾರು ಕುಟುಂಬಗಳು ಈ ಚಿಪ್ಪೆ ಕಲ್ಲು ಆರಿಸಿ, ಅದನ್ನು ವಿವಿಧ ಹೊಟೇಲುಗಳಿಗೆ ಕೊಟ್ಟು ಹಣಪಡೆಯುತ್ತಾರೆ. ನೆರೆ ರಾಜ್ಯಗಳಲ್ಲಿಯೂ ಚಿಪ್ಪೆ ಕಲ್ಲಿನ ಖಾದ್ಯಕ್ಕೆ ಬಹು ಬೇಡಿಕೆಯಿರುವುದರಿಂದ ಅನೇಕರ ಪಾಲಿಗೆ ಚಿಪ್ಪೆ ಕಲ್ಲು ಆರಿಸುವುದೇ ನಿತ್ಯದ ದುಡಿಮೆಯಾಗಿದೆ. ಭಟ್ಕಳದ ಲಕ್ಷ್ಮಿ ಮಾದೇವ ನಾಯ್ಕ ಕುಟುಂಬದವರು ಇದೇ ಕಾಯಕ ಮಾಡಿಕೊಂಡಿದ್ದು, ಭಾನುವಾರ 14 ಜನ ಒಟ್ಟಿಗೆ ನೀರಿಗಿಳಿದಿದ್ದಾರೆ. ನೀರಿನ ಅಬ್ಬರಕ್ಕೆ 11 ಜನ ಕೊಚ್ಚಿ ಹೋಗಿದ್ದು, ಅದರಲ್ಲಿ 8 ಜನ ಆಗಲೇ ಶವವಾಗಿ ಸಿಕ್ಕಿದ್ದಾರೆ. ಅದಾದ ನಂತರ ಮತ್ತೊಬ್ಬರು ಶವವಾಗಿದ್ದಾರೆ. ಇನ್ನೂ ಮೂವರು ಕಾಣೆಯಾಗಿದ್ದು, ಅವರ ಶೋಧ ನಡೆಯುತ್ತಲೇ ಇದೆ.
ಕಳೆದ ಮೂರು ದಿನಗಳಿಂದ ಭಾರಿ ಮಳೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಎಂದಿಗಿAತ ಜಾಸ್ತಿ ಇತ್ತು. ನೀರು ಹೆಚ್ಚಾಗಿರುವುದನ್ನು ಎಲ್ಲರೂ ಅಂದಾಜಿಸಿದ್ದರು. ಶನಿವಾರ ರಾತ್ರಿಯೂ ಜೋರು ಮಳೆಯಿತ್ತು. ಆದರೆ, ಮಳೆ ಎಂದು ಕೂತರೆ ಹೊಟ್ಟೆ ತುಂಬುತ್ತಿರಲಿಲ್ಲ. ಹೀಗಾಗಿ ಕೈ ಕೈ ಹಿಡಿದು 14 ಜನ ನೀರಿಗೆ ಇಳಿದಿದ್ದು, ನೀರಿನ ಹರಿವನ್ನು ಸರಿಯಾಗಿ ಊಹಿಸದ ಕಾರಣ ಕೊಚ್ಚಿ ಹೋದರು. ಪರಸ್ಪರ ಕೈಕೈ ಹಿಡಿದುಕೊಂಡು ಹೋಗುತ್ತಿದ್ದವರು ಏಕಾಏಕಿ ನೀರು ಪಾಲಾದರು. ಒಬ್ಬರನ್ನು ಒಬ್ಬರು ಹಿಡಿದಿದ್ದರಿಂದ ಎಲ್ಲರೂ ಸೆಳೆತಕ್ಕೆ ಒಳಗಾಗಿದ್ದು, ಅದಾಗಿಯೂ ಅಲ್ಲಿದ್ದವರು ನಾಲ್ವರನ್ನು ರಕ್ಷಿಸಿದರು.
ಕ್ಷಣಾರ್ಧದಲ್ಲಿ ನದಿಯ ಭೀಕರ ಸೆಳೆತಕ್ಕೆ ಸಿಲುಕಿದ ಇವರೆಲ್ಲರೂ ಏಕಾಏಕಿ ನೀರಿನ ಆಳಕ್ಕೆ ಕೊಚ್ಚಿ ಹೋಗಿದ್ದು, ಒಂದೇ ಕುಟುಂಬದ ಎಂಟು ಜನ ಜಲ ಸಮಾಧಿಯಾದರು. `ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. `ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ’ ಎಂದವರು ಘೋಷಿಸಿದ್ದಾರೆ.