ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಯಲ್ಲಾಪುರದಲ್ಲಿ ಸುರಿದ ಮಳೆಗೆ ಮನೆಯೊಂದು ಕುಸಿತವಾಗಿದೆ. ಮನೆಯ ಗೋಡೆಯೂ ಮುರಿದಿದ್ದು, ಒಳಗೆ ನೀರು ನುಗ್ಗುತ್ತಿದೆ.
ಯಲ್ಲಾಪುರದ ಮಂಚಿಕೇರಿ ಬಳಿ ಈ ಅವಘಡ ನಡೆದಿದೆ. ಇಲ್ಲಿನ ಆಲಿಸ್ ಜುಜೆ ಲೂಪಿಸ್ ಅವರ ಮನೆ ಮುರಿದು ಬಿದ್ದಿದೆ. ಅನಾಧಿ ಕಾಲದ ಈ ಮನೆಯಲ್ಲಿ ಆಲಿಸ್ ಲೂಪಿಸ್ ಅವರು ಪತ್ನಿ ಪಿಲೋಮಿನಾ ಲೂಪಿಸ್ ಅವರ ಜೊತೆ ವಾಸವಾಗಿದ್ದರು. ಬುಧವಾರ ಬೆಳಗ್ಗೆ 7.30ಕ್ಕೆ ಅವರು ಅಡುಗೆ ಮಾಡುತ್ತಿದ್ದು, ನೀರು ತರುವುದಕ್ಕಾಗಿ ಹೊರಗೆ ಹೋಗಿದ್ದರು. ಅದೇ ವೇಳೆ ಮನೆ ಮುರಿದಿದ್ದು, ಎರಡು ನಿಮಿಷದ ಅಂತರದಲ್ಲಿ ಆಲಿಸ್ ಲೂಪಿಸ್ ಅವರು ಜೀವ ಉಳಿಸಿಕೊಂಡಿದ್ದಾರೆ.
ಮನೆಯ ಗೋಡೆಯ ಜೊತೆ ಛಾವಣಿಯೂ ನೆಲಸಮವಾಗಿದೆ. ಹಂಚುಗಳೆಲ್ಲವೂ ಮನೆ ಒಳಗೆ ಬಿದ್ದು, ಇಡೀ ಮನೆಯೊಳಗೆ ನೀರು ನುಗ್ಗುತ್ತಿದೆ. ಇದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಮನೆ ಮುರಿದ ವಿಷಯ ಕೇಳಿ ಅಧಿಕಾರಿಗಳು ಅಲ್ಲಿಗೆ ದೌಡಾಯಿಸಿದ್ದಾರೆ. ಕಂದಾಯ ಇಲಾಖೆಯ ರವಿ ರಾಯನಗೌಡರ್, ರೇಣುಕಾ ಕುಸುಗಲ್ ಅವರು ಅಲ್ಲಿನ ಶೋಚನೀಯ ಪರಿಸ್ಥಿತಿ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಿದ್ದಾರೆ.
ಕಂಪ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರವಿ ಪಟಗಾರ ಹಾಗೂ ಸಿಬ್ಬಂದಿ ಭಾಸ್ಕರ ನಾಯ್ಕ ಅವರು ಭೇಟಿ ನೀಡಿದ್ದಾರೆ. ಭೂ ನ್ಯಾಯ ಮಂಡಳಿ ಸದಸ್ಯ ವಿಕಾಸ ನಾಯ್ಕ ಅವರು ಸಂತ್ರಸ್ತರಿಗೆ ಸಮಾಧಾನ ಹೇಳಿದ್ದಾರೆ.