ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಆದರೆ, ಬಸ್ ನಿಲ್ದಾಣದ ಶೌಚಾಲಯಕ್ಕೆ ಬರುವವರನ್ನು ಅಲ್ಲಿರುವವರು ಬೆದರಿಸಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಶಿರಸಿ, ಕುಮಟಾ, ಯಲ್ಲಾಪುರ ಸೇರಿ ನಾನಾ ಭಾಗಗಳಿಂದ ಈ ದೂರು ಬಂದಿದೆ. ಮುಜುಗರಕ್ಕೆ ಒಳಗಾದ ಮಹಿಳೆಯರು ಕೇಳಿದಷ್ಟು ಹಣ ಕೊಟ್ಟು ಅಲ್ಲಿಂದ ಹೊರ ಬರುತ್ತಿದ್ದು, ಹಣ ಕೊಡದಿದ್ದರೆ ಅವರನ್ನು ನಿಂದಿಸುವ ಕೆಲಸವೂ ಜೋರಾಗಿ ನಡೆಯುತ್ತಿದೆ. ಸಾಕಷ್ಟು ಬಾರಿ ಈ ಬಗ್ಗೆ ವಿರೋಧವ್ಯಕ್ತವಾದರೂ ಸುಲಿಗೆಕೋರರು ಮಾತ್ರ ಸುಧಾರಿಸಿಲ್ಲ. ಶಿರಸಿ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಹಣ ನೀಡಿ ಬಳಸುವ ಶೌಚಗೃಹದಲ್ಲಿ ಸಾರ್ವಜನಿಕರ ಸುಲಿಗೆ ಮುಂದುವರೆದಿದೆ. ಇಲ್ಲಿ ಮಹಿಳೆಯರ ಮತ್ತು ಪುರುಷರ ಶೌಚಗೃಹದ ಎದುರಿನಲ್ಲಿ ಅಳವಡಿಸಲಾಗಿರುವ ದರಪಟ್ಟಿಯಲ್ಲಿ ದರವನ್ನೇ ಅಳಿಸಿಹಾಕಲಾಗಿದೆ. ಗ್ಯಾರಂಟಿ ಪ್ರಾಧಿಕಾರದ ಪ್ರತಿ ತಿಂಗಳ ಸಭೆಯಲ್ಲಿಯೂ ಈ ವಿಷಯ ಚರ್ಚೆಗೆ ಬರುತ್ತಿದೆ. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಿಲ್ಲ.
ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಶೌಚಗೃಹ ನಿರ್ವಹಣೆ ಹಾಗೂ ಶುಲ್ಕ ಸಂಗ್ರಹವನ್ನು ಟೆಂಡರ್ ನೀಡಲಾಗಿದೆ. ಬಹುತೇಕ ಕಡೆ ಉತ್ತರ ಭಾರತದವರು ಇದನ್ನು ನಡೆಸುತ್ತಿದ್ದಾರೆ. ಶೌಚಗೃಹ ಬಳಸಿದವರಿಂದ 2 ರೂ. ಶುಲ್ಕ ಸಂಗ್ರಹಿಸಿಕೊಳ್ಳಬೇಕು. ಮೂತ್ರ ವಿಸರ್ಜನೆಗೆ ಆಗಮಿಸಿದವರಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂಬ ನಿಯಮಗಳಿವೆ. ಆದರೆ, ಎಲ್ಲಾ ಕಡೆಯೂ 10ರಿಂದ 15ರೂ ವಸೂಲಿ ಮಾಡಲಾಗುತ್ತಿದೆ. ದುಡ್ಡಿಲ್ಲದೇ ಬರುವ ಮಹಿಳೆಯರನ್ನು ಕೆಟ್ಟದಾಗಿ ನಿಂದಿಸಿ ಅವಮಾನ ಮಾಡಲಾಗುತ್ತಿದೆ. ಬೇರೆ ಬೇರೆ ಊರುಗಳಿಂದ ಬರುವ ಪ್ರಯಾಣಿಕರು ಈ ಬಗ್ಗೆ ದೂರಿದ್ದಾರೆ.
ದೂರದ ಊರುಗಳಿಗೆ ಸಂಚರಿಸುವ ಮಹಿಳಾ ಪ್ರಯಾಣಿಕರಿಗೆ ಬಸ್ ನಿಲ್ದಾಣದ ಶೌಚಾಲಯ ಅನಿವಾರ್ಯವಾಗಿದೆ. ಆ ಪರಿಸ್ಥಿತಿ ದುರುಪಯೋಗಪಡಿಸಿಕೊಳ್ಳುವ ದಾಂಡೀಗರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಕಡಿಮೆ ಹಣ ನೀಡುವ ಪ್ರಯಾಣಿಕರನ್ನು ಹಿಂಬಾಲಿಸಿ ಬಂದು ಹಣಪಡೆದ ನಿದರ್ಶನಗಳಿವೆ. ಈ ವಿಷಯ ಗಮನಕ್ಕೆ ಬಂದ ನಂತರ ಶಿರಸಿಯ ಕೆಎಸ್ಆರ್ಟಿಸಿ ಅಧಿಕಾರಿಗಳು ಟೆಂಡರ್ದಾರರಿಗೆ 500ರೂ ದಂಡ ವಿಧಿಸಿದ್ದಾರೆ. ಆದರೆ, ಆ ದಂಡದ ಮೊತ್ತ ಸರಿದೂಗಿಸಿಕೊಳ್ಳಲು ಅಲ್ಲಿ ಮತ್ತೆ ದುಪ್ಪಟ್ಟು ಹಣ ವಸೂಲಿ ನಡೆದಿದೆ.