ನಿಪ್ಲಿ ಜಲಪಾತ ವೀಕ್ಷಣೆಗೆ ನಿತ್ಯ ನೂರಾರು ಜನ ಬರುತ್ತದ್ದು, ಅಲ್ಲಿನ ವಿನಾಯಕ ಶೇಟ್ ಅವರು ಪ್ರವಾಸಿಗರ ನೆಮ್ಮದಿ ಕೆಡಿಸಿದ್ದಾರೆ. ಅನಗತ್ಯ ಗಲಾಟೆ ಮಾಡಿ ಅವರು ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ.
ಸಿದ್ದಾಪುರದ ಹೊಸೂರು ಗ್ರಾಮದಲ್ಲಿ ನಿಪ್ಲಿ ಜಲಪಾತವಿದೆ. ಆಕರ್ಷಕವಾಗಿರುವ ಈ ತಾಣಕ್ಕೆ ಅನೇಕರು ಆಗಮಿಸುತ್ತಾರೆ. ಅಗಸ್ಟ 2ರಂದು ಸಂಜೆ 6.30ಕ್ಕೆ ಕೆಲವರು ಜಲಪಾತದ ಬಳಿ ನಿಂತಿದ್ದು, ಅವರ ಜೊತೆ ಹಲಗೇರಿಯ ವಿನಾಯಕ ಶೇಟ್ ಅವರು ಅನಗತ್ಯ ಜಗಳ ಮಾಡಿದ್ದಾರೆ. ವಿನಾಯಕ ಶೇಟ್ ಅವರ ಜೊತೆ ಹಳದಿ ಬಣ್ಣದ ಟೀಶರ್ಟ ಧರಿಸಿದ್ದ ಮತ್ತೊಬ್ಬರು ವಾಗ್ವಾದ ನಡೆಸಿದ್ದಾರೆ. ಪಾರ್ಕಿಂಗ್ ವಿಷಯವಾಗಿ ಜಗಳ ತೆಗೆದ ಅವರು ಅಲ್ಲಿಗೆ ಆಗಮಿಸಿದ ಇನ್ನಿತರ ಪ್ರವಾಸಿಗರಿಗೂ ಸಮಸ್ಯೆ ಮಾಡಿದ್ದಾರೆ.
ಈ ಗಲಾಟೆಯಿಂದ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರಿಗೆ ತೊಂದರೆಯಾಗಿದ್ದು, ಸಾರ್ವಜನಿಕರ ನೆಮ್ಮದಿಗೂ ಭಂಗ ಉಂಟಾಗಿದೆ ಎಂದು ಪೊಲೀಸರು ದೂರಿದ್ದಾರೆ. ವಿನಾಯಕ ಶೇಟ್ ಅವರ ಜೊತೆ ಈ ಗಲಾಟೆಯಲ್ಲಿ ಭಾಗಿಯಾಗಿದ್ದ ಅಪರಿಚಿತ ವ್ಯಕ್ತಿಯ ಹೆಸರು ಹಾಗೂ ವಿಳಾಸ ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸಿದರೂ ಮಾಹಿತಿ ದೊರೆತಿಲ್ಲ. ಅವರ ಹುಡುಕಾಟ ಮುಂದುವರೆದಿದ್ದು, ವಿನಾಯಕ ಶೇಟ್ ಅವರ ಜೊತೆ ಮತ್ತೊಬ್ಬ ಅಪರಿಚಿತರನ್ನು ಆರೋಪಿಯನ್ನಾಗಿಸಿ ಸಿದ್ದಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಗೋಪಾಲ ಶಿವಮೂರ್ತೆಪ್ಪ ಕುರುಬರ ಅವರು ಕೇಸು ಮಾಡಿದ್ದಾರೆ.