ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಯಲ್ಲಾಪುರ ಪೊಲೀಸರು ಪದೇ ಪದೇ ದಂಡ ವಿಧಿಸುತ್ತಿದ್ದಾರೆ. ಅದಾಗಿಯೂ ಅನೇಕರು ನಿಯಮ ಉಲ್ಲಂಘನೆ ಮಾಡುವುದನ್ನು ಬಿಟ್ಟಿಲ್ಲ. ಕಿರವತ್ತಿಯಲ್ಲಿ ವಾಹನ ತಪಾಸಣೆ ನಡೆಸಿದ ಪೊಲೀಸರಿಗೆ ಬಾಲಕನೊಬ್ಬ ಬೈಕ್ ಓಡಿಸುವುದು ಕಾಣಿಸಿದ್ದು, ಆ ಬಾಲಕನ ತಂದೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆರೋಪಿ ಪಾಲಕನಿಗೆ 25 ಸಾವಿರ ರೂ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿದೆ.
ಸುಮಾರು ಒಂದು ತಿಂಗಳ ಹಿಂದೆ ಪಿಸೈ ರಾಜಶೇಖರ ವಂದಲಿ ಅವರು ಕಿರವತ್ತಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಆಗ, ವ್ಯಕ್ತಿಯೊಬ್ಬ ಜೋರಾಗಿ ಬೈಕು ಓಡಿಸಿಕೊಂಡು ಬಂದಿದ್ದು, ಪೊಲೀಸರು ಆ ಬೈಕಿಗೆ ಅಡ್ಡಲಾಗಿ ಕೈ ಮಾಡಿದ್ದರು. ದಾಖಲೆಗಳ ಪರಿಶೀಲನೆ ಮಾಡಿದಾಗ ಆ ವಾಹನ ಚಾಲಕನ ಬಳಿ ಲೈಸನ್ಸ್ ಇರಲಿಲ್ಲ. ಲೈಸನ್ಸ್ ಪಡೆಯಲು ಅಗತ್ಯವಿರುವ 18ರ ವಯಸ್ಸು ಸಹ ಆಗಿರಲಿಲ್ಲ. ಹೀಗಾಗಿ ಆ ಬಾಲಕನ ಪಾಲಕನನ್ನು ಪೊಲೀಸರು ಸ್ಥಳಕ್ಕೆ ಕರೆಯಿಸಿದರು. ಕಿರವತ್ತಿ ದಾಂಡೇಲಿವಾಡದ ಸೋನು ಸತ್ತು ಬಿಚುಕುಳೆ ಅವರು ಅಲ್ಲಿಗೆ ಆಗಮಿಸಿದರು. ಬಾಲಕನಿಗೆ ಬೈಕ್ ಕೊಟ್ಟಿದ್ದು ತಪ್ಪು ಎಂದು ಅವರು ಅಲ್ಲಿಯೇ ಒಪ್ಪಿಕೊಂಡರು.
ಸ0ಚಾರಿ ನಿಯಮ ಪಾಲನೆ ಬಗ್ಗೆ ಪಾಠ ಮಾಡಿದ ಪೊಲೀಸರು ಅಪ್ರಾಪ್ತನಿಗೆ ಬೈಕ್ ನೀಡಿದ ತಪ್ಪಿಗಾಗಿ ಸೋನು ಬಿಚುಕುಳೆ ಅವರ ವಿರುದ್ಧ ಪ್ರಕರಣ ದಾಖಲಿಸಿದರು. ದೋಷಾರೋಪಣ ಪಟ್ಟಿ ಸಿದ್ಧಪಡಿಸಿ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಸಾಕಷ್ಟು ಅರಿವು ಮೂಡಿಸಿದ ನಂತರವೂ ಬಾಲಕನಿಗೆ ಬೈಕ್ ನೀಡುತ್ತಿರುವವರ ಕುರಿತು ನ್ಯಾಯಾಲಯವೂ ಗಂಭೀರ ಚಿಂತನೆ ಮಾಡಿದ್ದು, ಅಂಥ ಪ್ರಕರಣಗಳಿಗೆ ಕಡಿವಾಣ ಹಾಕುವುದಕ್ಕಾಗಿ ಬಾಲಕನಿಗೆ ಬೈಕ್ ನೀಡಿದ ಪಾಲಕ ಸೋನು ಬಿಚುಕುಳೆ ಅವರಿಗೆ 25 ಸಾವಿರ ರೂ ದಂಡವಿಧಿಸಿತು. ಅಪ್ರಾಪ್ತರಿಗೆ ಬೈಕ್ ನೀಡಿದವರಿಗೆ ಜೈಲಿಗೆ ಕಳುಹಿಸಲು ಅಧಿಕಾರವಿರುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಸೋನು ಬಿಚುಕುಳೆ ಅವರನ್ನು ಜೈಲಿಗೂ ಕಳುಹಿಸಿತು.
ನ್ಯಾಯಾಧೀಶೆ ಅನಿತಾಕುಮಾರಿ ಎಸ್ ಅವರ ಆದೇಶದ ಪ್ರಕಾರ ಈ ದಿನ ಸಂಜೆ 5 ಗಂಟೆಯವರೆಗೆ ನ್ಯಾಯಾಂಗ ಬಂಧನದ ಶಿಕ್ಷೆ ಅನುಭವಿಸಿದ ಸೋನು ಬಿಚುಕುಳೆ ಅವರು 25 ಸಾವಿರ ರೂ ದಂಡ ಪಾವತಿಸಿ, ಬೈಕನ್ನು ಬಿಡಿಸಿಕೊಂಡರು.
`ಸ0ಚಾರಿ ನಿಯಮ ಪಾಲಿಸಿ. ಅಪ್ರಾಪ್ತರಿಗೆ ವಾಹನ ಕೊಡುವುದನ್ನು ತಪ್ಪಿಸಿ’