ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಯಲ್ಲಾಪುರದ ಪ್ರಮೋದ ಹೆಗಡೆ ಹಾಗೂ ಶಿರಸಿಯ ಅರುಣಾಚಲ ಹೆಗಡೆ ಅವರಿಗೆ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘವೂ ಪ್ರಶಸ್ತಿ ಘೋಷಿಸಿದೆ. ಪ್ರಮೋದ ಹೆಗಡೆ ಅವರಿಗೆ `ಸಹಕಾರ ವಸಂತ’ ಹಾಗೂ ಅರುಣಾಚಲ ಹೆಗಡೆ ಅವರಿಗೆ `ಭೂತೇಶ್ವರ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಸಂಘವೂ ತಿಳಿಸಿದೆ.
ದೇವಿಕೆರೆಯ ವಸಂತ ಶೆಟ್ಟಿ ಅವರ ನೆನಪಿನಲ್ಲಿ ಪ್ರತಿ ವರ್ಷ ‘ಸಹಕಾರ ವಸಂತ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅದರಂತೆ, ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ‘ಭೂತೇಶ್ವರ ಸೇವಾ ರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಗಳ ಮೂಲಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಗೂ ಸಾಧನೆ ಮಾಡುವವರಿಗೆ ಸ್ಪೂರ್ತಿಯಾಗಬಲ್ಲವರನ್ನು ಗುರುತಿಸಲಾಗುತ್ತದೆ. ಈ ಹಿನ್ನಲೆ ಸಾಂಸ್ಕೃತಿಕ ರಾಯಬಾರಿ ಪ್ರಮೋದ ಹೆಗಡೆ ಹಾಗೂ ಹಿರಿಯ ನ್ಯಾಯವಾದಿ ಅರುಣಾಚಲ ಹೆಗಡೆ ಜಾನ್ಮನೆ ಅವರಿಗೆ ಈ ಪ್ರಶಸ್ತಿ ಘೋಷಣೆಯಾಗಿದೆ.
ಪ್ರಮೋದ ಹೆಗಡೆ ಅವರು 51 ವರ್ಷಗಳ ಕಾಲ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 38 ವರ್ಷಗಳಿಂದ ಸಂಕಲ್ಪ ಉತ್ಸವ ನಡೆಸುತ್ತಿದ್ದಾರೆ. ಯುಕೆ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. ಕೊಡಸಳ್ಳಿ ಹಾಗೂ ಬೇಡ್ತಿ-ಅಘನಾಶಿನಿ ನದಿ ಜೋಡಣೆ ವಿರೋಧಿ ಹೋರಾಟಗಳ ಮುಂಚೂಣಿ ನಾಯಕರಾಗಿ ಅವರು ಕೆಲಸ ಮಾಡಿದ್ದಾರೆ. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ತಮ್ಮ ಮನೆಯಲ್ಲಿಯೇ `ಮೌನ ಗ್ರಂಥಾಲಯ’ ನಡೆಸುತ್ತಿದ್ದಾರೆ. ಅರುಣಾಚಲ ಪಿ ಹೆಗಡೆ ಜಾನ್ಮನೆ ಅವರು ಮೂರು ದಶಕಗಳಿಂದ ಧಾರವಾಡ ಹೈಕೋರ್ಟಿನ ವಕೀಲರಾಗಿದ್ದಾರೆ. ವಿವಿಧ ಸಂಘ-ಸAಸ್ಥೆಗಳಿಗೆ ಅವರು ನಿರಂತರವಾಗಿ ಕಾನೂನು ನೆರವು ನೀಡುತ್ತಿದ್ದಾರೆ. ಜೊತೆಗೆ ಅನೇಕ ಬಗೆಯ ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭೂತೇಶ್ವರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ, ಸ್ವರ್ಣವಲ್ಲೀ ಮಠದ ಸಲಹೆಗಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.
ಶ್ರೀ ಭೂತೇಶ್ವರ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದ ವಸಂತ ಶೆಟ್ಟಿ ಅವರು ಕೆಡಿಸಿಸಿ ಬ್ಯಾಂಕ್’ನ ವಿಭಾಗೀಯ ಅಧಿಕಾರಿಯಾಗಿದ್ದರು. ಬ್ಯಾಂಕ್ ನೌಕರರ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾಗಿ 30 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ದೇವಿಕೆರೆ ಗಣಪತಿ ಉತ್ಸವ ಆರಂಭ, ಶ್ರೀ ಭೂತೇಶ್ವರ ದೇವಸ್ಥಾನ ನಿರ್ಮಾಣ, ದೇವಿಕೆರೆಯ ರಸ್ತೆ ಅಗಲೀಕರಣ, ಯಕ್ಷಗಾನ, ನಾಟಕ, ಉಚಿತ ಸಾಮೂಹಿಕ ವಿವಾಹ ಹಾಗೂ ಜಾತ್ರೆಯಲ್ಲಿ ಉಚಿತ ಅನ್ನಸಂತರ್ಪಣೆಯAತಹ ಕಾರ್ಯಗಳಿಂದ ‘ದೇವಿಕೆರೆ ವೃತ್ತ ರೂವಾರಿ’ ಎಂದೇ ಹೆಸರುವಾಸಿಯಾಗಿದ್ದರು. ವಸಂತ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತಗೊಳಿಸುವುದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಶ್ರೀಧರ ಮೊಗೇರ, ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ವಸಂತ ಶೆಟ್ಟಿ, ಸಹಾಯಕ ಮುಖ್ಯ ಕಾರ್ಯ ನಿರ್ವಾಹಕ ರಾಘವೇಂದ್ರ ಶೆಟ್ಟಿ, ಆಂತರಿಕ ಸಲಹೆಗಾರ ಪ್ರಕಾಶ ಮದ್ಗುಣಿ ಹಾಗೂ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಹಿನ್ನಲೆ ಸೆಪ್ಟೆಂಬರ್ 19ರಂದು ಶಿರಸಿಯಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದ್ದು, ಅದೇ ವೇದಿಕೆಯಲ್ಲಿ ಈ ಗಣ್ಯರಿಬ್ಬರಿಗೂ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಹಿರಿಯ ಸಹಕಾರಿ ಎಸ್ ಪಿ ಶೆಟ್ಟಿ ಹಾಗೂ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರಿಗೆ ನೀಡಲಾಗಿತ್ತು.