ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವೂ ಶಿರಸಿಯ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ `ನಾಡಪ್ರಭು ಕೆಂಪೆಗೌಡ ಪ್ರಶಸ್ತಿ’ ಪ್ರಧಾನ ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವೀಂದ್ರ ನಾಯ್ಕ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಈ ಪ್ರಶಸ್ತಿ ವಿತರಣೆ ಮಾಡಿದ್ದಾರೆ. ರವೀಂದ್ರ ನಾಯ್ಕ ಅವರು ಕಳೆದ ನಾಲ್ಕು ದಶಕಗಳಿಂದ ಮಧ್ಯಪಾನ ವಿರೋಧಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಅರಣ್ಯ ಭೂಮಿ ಹಕ್ಕಿನ ಹೋರಾಟ ಸೇರಿ ವಿವಿಧ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನಲೆ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಶುರುವಾಗಿದ್ದು, ಶಿಕ್ಷಣ ತಜ್ಞ ಎ ಆರ್ ಶಿವಕುಮಾರ, ಹಿರಿಯ ವಿದ್ವಾಂಸರಾದ ಸಿ ಯು ಮಂಜುನಾಥ ಅವರು ಈ ವೇದಿಕೆಯಲ್ಲಿದ್ದರು.
ಪ್ರಗತಿಪರ ಕೃಷಿಕರಾದ ವಿ ಕೆ ರಾಜೇಂದ್ರ ದಾವಣಗೇರೆ ಅವರು ವಿಶೇಷ ಆಮಂತ್ರಿತರಾಗಿ ವೇದಿಕೆಗೆ ಆಗಮಿಸಿದ್ದರು. ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಎಸ್ ಆರ್ ವಿಜಯ ಸಮರ್ಥ ಕಾರ್ಯಕ್ರಮ ನೆರವೇರಿಸಿದ್ದು, ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ವಿಜಯವಾಣಿ ಕನ್ನಡ ದಿನ ಪತ್ರಿಕೆ ಮಾಹಿತಿ ಮತ್ತು ಸಹಕಾರದ ಸಹಯೋಗ ನೀಡಿದೆ.