ಕಾರವಾರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ರಾಮಾ ನಾಯ್ಕ ಅವರು ಪಹರೆ ವೇದಿಕೆಯ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿರಂತರ ಸ್ವಚ್ಛತಾ ಆಂದೋಲನ ನಡೆಸುತ್ತಿರುವ ಪಹರೆ ವೇದಿಕೆಯೂ ರಾಮಾ ನಾಯ್ಕ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದೆ.
ರಾಮಾ ನಾಯ್ಕ ಅವರು ಕಳೆದ 10 ವರ್ಷದಿಂದ ಪಹರೆ ವೇದಿಕೆಯಲ್ಲಿದ್ದಾರೆ. ಪ್ರತಿ ಶನಿವಾರ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಅವರು ತಪ್ಪದೇ ಭಾಗವಹಿಸುತ್ತಿದ್ದಾರೆ. ತಮ್ಮ ಜೊತೆ ಇನ್ನಿತರರ ಸ್ವಯಂ ಸೇವಕರನ್ನು ಸ್ವಚ್ಛತಾ ಕೆಲಸಕ್ಕಾಗಿ ಸೇರಿಸುತ್ತಿದ್ದಾರೆ. ಪರಿಸರ, ಸಾಹಿತ್ಯ ಸೇರಿ ವಿವಿಧ ವಿಷಯಗಳಲ್ಲಿ ರಾಮಾ ನಾಯ್ಕ ಅವರು ಆಸಕ್ತರಾಗಿದ್ದಾರೆ. ಅವರ ಈ ಎಲ್ಲಾ ಸ್ವಭಾವ ಮನಗಂಡು ಪಹರೆ ವೇದಿಕೆಯ ರೂವಾರಿ, ನ್ಯಾಯವಾದಿ ನಾಗರಾಜ ನಾಯಕ ಅವರು ಹೊಸ ಜವಾಬ್ದಾರಿ ನೀಡಿದ್ದಾರೆ.
ಪಹರೆ ವೇದಿಕೆಯೂ ಪ್ರತಿ ವರ್ಷ ಗೌರವಾಧ್ಯಕ್ಷರನ್ನಾಗಿ ಹಿರಿಯ ಸದಸ್ಯರನ್ನ ನೇಮಕ ಮಾಡುತ್ತಾ ಬಂದಿದೆ. ಕಳೆದ ಅವಧಿಯಲ್ಲಿ ಉದ್ಯಮಿ ಜಾರ್ಜ್ ಫರ್ನಾಂಡಿಸ್ ಗೌರವಾಧ್ಯಕ್ಷರಾಗುವ ಮೂಲಕ ಸಂಘಟನೆಯಲ್ಲಿ ಉತ್ತಮ ಕೆಲಸವನ್ನ ಮಾಡಿದ್ದರು. ಈವರೆಗೆ 8 ಜನ ಪಹರೆ ವೇದಿಕೆಯ ಗೌರವಧ್ಯಕ್ಷರಾಗಿದ್ದು, 9ನೇ ಗೌರವಾಧ್ಯಕ್ಷರಾಗಿ ರಾಮ ನಾಯ್ಕ ಅವರು ಆಯ್ಕೆ ಆಗಿದ್ದಾರೆ. ಪಹರೆ ಕಾರ್ಯಕಾರಿಣಿ ಸದಸ್ಯರು ಸರ್ವಾನುಮತದಿಂದ ಈ ಆಯ್ಕೆ ಮಾಡಿದ್ದಾರೆ.
ಈ ದಿನ ನಡೆದ ಸಭೆಯಲ್ಲಿ ಮುಂದಿನ ಒಂದು ವರ್ಷ ಸಂಘಟನೆಯ ಕಾರ್ಯಚಟುವಟಿಕೆ ಹಾಗೂ ಕಾರವಾರ ಸೇರಿದಂತೆ ಜಿಲ್ಲೆಯಲ್ಲಿ ಸ್ವಚ್ಚತೆ ಜಾಗೃತಿ ಮೂಡಿಸಲು ಮಾಡಬೇಕಾದ ಕೆಲಸದ ಬಗ್ಗೆ ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಟಿ ಬಿ ಹರಿಕಾಂತ್, ಖಜಾಂಚಿ ಎಲ್ ಎಸ್ ಫರ್ನಾಂಡಿಸ್, ಸದಸ್ಯರಾದ ಜಿ ಡಿ ಮನೋಜೆ, ಅಜಯ್ ಸಾಹುಕಾರ್, ಸದಾನಂದ ಮಾಂಜ್ರೇಕರ್, ಶಿವಾನಂದ ಶ್ಯಾನಭಾಗ, ಸಂತೋಷ್ ವೆರ್ಣೇಕರ್, ಖೈರುನ್ನೀಸಾ, ಸುಜಾತಾ ಥಾಮ್ಸೆ, ಸಂದೀಪ್ ಸಾಗರ್ ಸಮ್ಮುಖದಲ್ಲಿ ರಾಮಾ ನಾಯ್ಕ ಅವರಿಗೆ ಜವಾಬ್ದಾರಿ ನೀಡಲಾಗಿದೆ.