ಜಾತ್ರೆಗೆ ಬರುವ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅವರ ಕತ್ತಿನಲ್ಲಿದ್ದ ಸರ ಕದಿಯುತ್ತಿದ್ದ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುರ್ಕವಾಡಾದ ಶ್ರೀ ಗ್ರಾಮದೇವಿ ಜಾತ್ರೆಯಲ್ಲಿ ಸರ ಕಳೆದುಕೊಂಡಿದ್ದ ಮಹಿಳೆಗೆ ಪೊಲೀಸರು ನ್ಯಾಯ ಒದಗಿಸಿದ್ದಾರೆ.
ಹಳಿಯಾಳದ ಅಮ್ಮನಕೊಪ್ಪ ಗ್ರಾಮದ ಅಕ್ಷತಾ ಮಂಜುನಾಥ ಕುಂಬಾರ (30) ಅವರು ಫೆಬ್ರವರಿ 9ರಂದು ಮುರ್ಕವಾಡಾದ ಜಾತ್ರೆಗೆ ಬಂದಿದ್ದರು. ಪತಿ ಹಾಗೂ ಮಗಳ ಜೊತೆಗಿದ್ದ ಅವರನ್ನು ಹಿಂಬಾಲಿಸಿದ ಮೂವರು ಕಳ್ಳರು 30 ಗ್ರಾಂ ತೂಕದ ಮಂಗಳಸೂತ್ರ ಕಿತ್ತು ಪರಾರಿಯಾಗಿದ್ದರು. ಮನೆಗೆ ಮರಳುತ್ತಿದ್ದವರ ಮೇಲೆ ಕಳ್ಳರು ದಾಳಿ ನಡೆಸಿದ್ದು, ಅದರಿಂದ ಆತಂಕಕ್ಕೆ ಒಳಗಾದ ಅಕ್ಷತಾ ಕುಂಬಾರ ಅವರು ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದರು. ಆರು ತಿಂಗಳ ಕಾಲ ಹುಡುಕಾಟ ನಡೆಸಿದ ಪೊಲೀಸರಿಗೆ ಸದ್ಯ ಮೂವರು ಸಿಕ್ಕಿ ಬಿದ್ದಿದ್ದಾರೆ.
ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಯಿತು. ಮುಖ್ಯವಾಗಿ ತಾಂತ್ರಿಕ ಮಾಹಿತಿ ಹಾಗೂ ಖಚಿತ ಸುಳಿವಿನ ಆಧಾರದ ಮೇಲೆ ಕಳ್ಳರನ್ನು ಹುಡುಕಲಾಯಿತು. ಹೊಸ ಹಡಗಲಿಯ ಶಶಿಧರ ಉಳವಪ್ಪ ಬಾರ್ಕಿ, ಕೆ ಕೆ ಹಳ್ಳಿಯ ಕಿರಣ ಧರ್ಮರಾಜ್ ಗೋಡಿಮನಿ ಹಾಗೂ ಹಳಿಯಾಳ ಮಡ್ಡಿಯ ವಾಸಿಮ್ ಶಿರಾಜುದ್ದೀನ್ ಚವಾಣ್ ಕಳ್ಳತನ ಮಾಡಿರುವುದು ಗೊತ್ತಾಗಿದ್ದು, ಅವರು ಮಾಡಿದ ತಪ್ಪು ಒಪ್ಪಿಕೊಂಡರು.
ಈ ಮೂವರಿಂದ ಪೊಲೀಸರು 4.50 ಲಕ್ಷ ರೂ ಮೌಲ್ಯದ 30 ಗ್ರಾಂ ಚಿನ್ನದ ಮಂಗಳಸೂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ 50 ಸಾವಿರ ಮೌಲ್ಯದ ಪ್ಯಾಶನ್ ಪ್ರೊ ಬೈಕ್ ಸೇರಿ ಒಟ್ಟು 5 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತು ಮಾಡಿದ್ದಾರೆ. ಆ ಮೂವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವೂ ನ್ಯಾಯಾಂಗ ಬಂಧನ ವಿಧಿಸಿದೆ.