ಗುಡ್ಡದ ಮೇಲೆ ಮನೆ ಮಾಡಿಕೊಂಡಿದ್ದ 26 ಜನರಿಗೆ ಆತಂಕ ಶುರುವಾಗಿದೆ. ಬೆಟ್ಟದಲ್ಲಿನ ಮನೆಗಳನ್ನು ತೆರವು ಮಾಡುವಂತೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಹೊನ್ನಾವರ ಹಡಿನಬಾಳ ಅರಣ್ಯ ವ್ಯಾಪ್ತಿಯ ಮೇಲಿನ ಮೂಡ್ಕಣಿಯಲ್ಲಿ ಕೇಶವ ನಾಯ್ಕ ಕೆರವಳ್ಳಿ ಅವರು ವಾಸವಾಗಿದ್ದಾರೆ. ಅಲ್ಲಿನ 15 ಗುಂಟೆ ಪ್ರದೇಶದಲ್ಲಿ ಕೇಶವ ನಾಯ್ಕ ಅವರ ಜೊತೆ 25 ಜನ ಮನೆ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಅರಣ್ಯ ಅತಿಕ್ರಮಣದಾರರಾಗಿದ್ದು, ಅನಾಧಿಕಾಲದಿಂದಲೂ ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ತಗ್ಗು ಪ್ರದೇಶದಲ್ಲಿ ಸಮಸ್ಯೆಯಿರುವ ಕಾರಣ ಕೊಂಚ ಎತ್ತರ ಜಾಗದಲ್ಲಿ ಅವರು ಮನೆ ಮಾಡಿಕೊಂಡಿದ್ದಾರೆ. ಬೆಟ್ಟ ಪ್ರದೇಶದಲ್ಲಿ ಮನೆ ಮಾಡಿಕೊಂಡಿರುವ ಕಾರಣ ಆ ಮನೆಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ಆಸಕ್ತಿವಹಿಸಿದೆ. `ಎಲ್ಲರೂ ಸ್ವಂತ ಖರ್ಚಿನಲ್ಲಿ ಕಟ್ಟಡ ಹಾಗೂ ಬೆಳೆಗಳನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ಅದನ್ನು ಮುಟ್ಟುಗೋಲು ಹಾಕಿ ತೆರವು ನಡೆಸಲಾಗುತ್ತದೆ’ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಹೀಗಾಗಿ ಅಲ್ಲಿನ ಜಾಕಿ ಬಾಂವ ಅಡಾ, ಧರ್ಮ ಮಂಜುನಾಥ ನಾಯ್ಕ ಮರಬಳ್ಳಿ, ಕೆರವಳ್ಳಿಯ ಶಾಂತಾನAದ ಅನಂತ ಶಾನಭಾಗ,. ಸಂತೋಷ ನರಸಿಂಹ ಶಾನಭಾಗ, ಬೇತಾಳ ನರಸಿಂಹ ಶಾನಭಾಗ, ರಾಮಚಂದ್ರ ಗಣಪ ನಾಯ್ಕ, ನಾರಾಯಣ ಅಮಕೂಸ ಗೌಡ, ಪ್ರಶಾಂತ ಶೇಷಗಿರಿ ನಾಯ್ಕ, ಕೇಶವ ಗಣಪಯ್ಯ ನಾಯ್ಕ, ರಾಘು ನಾರಾಯಣ ಶೆಟ್ಟಿ, ಐವಾನ ಆಶಿಸಿ ಮೆಂಡಿಸ್, ವಿನಾಯಕ ಸುಬ್ರಮಣ್ಯ ವೈದ್ಯ, ವಿಘ್ನಶ್ವರ ಸುಬ್ರಮಣ್ಯ ವೈದ್ಯ, ಪಾರ್ವತಿ ಗಜಾನನ ನಾಯ್ಕ, ವಿಲಿಯಂ ಸಂತಾನ ಮಿರಾಂಡ, ಆಶಿಸ್ ಬಾಂವ್, ದಯಾನಂದ ಈಶ್ವರ ನಾಯ್ಕ, ಶ್ರೀಧರ ಮಂಜಪ್ಪ ಮಹಾಲೆ, ಕೃಷ್ಣಪ್ಪ ಗಣಪತಿ ನಾಯ್ಕ, ಸಂತಾ ಡಿಯೋಗ ಡಯಾಸ, ದಯಾನಂದ ಧರ್ಮ ನಾಯ್ಕ, ಹನುಮಂತ ಸುಬ್ರಾಯ ನಾಯ್ಕ, ಮಹಾದೇವ ಮಂಜಪ್ಪ ಮಹಾಲೆ, ನಿತ್ಯಾನಂದ ವೆಂಕಟೇಶ ಶ್ಯಾನಭಾಗ ಹಾಗೂ ಮಾಲ್ಲೇಶ್ವರ ಸಣ್ಣ ತಮ್ಮ ನಾಯ್ಕ ಅವರು ಆತಂಕದಲ್ಲಿದ್ದಾರೆ.
ಜುಲೈ 15ರಂದು ಹೊರಡಿಸಲಾದ ಈ ಆದೇಶ ಮೂರು ದಿನದ ಹಿಂದೆ ಅವರ ಕೈಗೆ ಸಿಕ್ಕಿದೆ. 30 ದಿನಗಳ ಒಳಗೆ ಮನೆ ತೆರವು ಮಾಡುವಂತೆ ಅದರಲ್ಲಿ ಸೂಚಿಸಲಾಗಿದೆ. `ಹೊನ್ನಾವರ ತಾಲೂಕಿನ ಕೆರವಳ್ಳಿ ಗ್ರಾಮದಲ್ಲಿ 26 ಅರಣ್ಯವಾಸಿಗಳು ಜೀವನಕ್ಕಾಗಿ ಮತ್ತು ವಾಸ್ತವ್ಯಕ್ಕಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಒಟ್ಟು 15 ಗುಂಟೆ ಕ್ಷೇತ್ರವನ್ನು ಅತಿಕ್ರಮಿಸಿ, ಕಾನೂನುಬಾಹಿರವಾಗಿ ಸಾಗುವಳಿ ಮಾಡುತ್ತಿದ್ದಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
`ಜುಲೈ 15ರಂದು ಆದೇಶ ಮಾಡಿದ ಆದೇಶದ ಪ್ರತಿಯನ್ನು ಅರಣ್ಯವಾಸಿಗಳಿಗೆ ತಲುಪಿಸಲು 25 ದಿನ ವಿಳಂಬ ಮಾಡಿರುವುದು ವಿಷಾಧಕರ. ಅಗಸ್ಟ 14ರ ಒಳಗೆ ಒಕ್ಕಲೆಬ್ಬಿಸುವಂತೆ ಸೂಚಿಸಲಾಗಿದೆ’ ಎಂದು ಅರಣ್ಯ ಭೂಮಿ ಹಕ್ಕಿನ ಹೋರಾಟಗಾರ ಮಹೇಶ ನಾಯ್ಕ ಅವರು ಹೇಳಿದ್ದಾರೆ.