ಅಪಘಾತದಿಂದ ಅಂಗವಿಕಲರಾಗಿರುವ ಮುಂಡಗೋಡಿನ ಲಕ್ಷ್ಮಣ ನಾಯ್ಕ ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳ ಧ್ವಜಾರೋಹಣಕ್ಕೆ ಹೋಗಲು ಆಗುತ್ತಿಲ್ಲ. ಅದಕ್ಕಾಗಿ ಅವರು ಕಳೆದ 21 ವರ್ಷಗಳಿಂದ ತಮ್ಮ ಮನೆ ಅಂಗಳದಲ್ಲಿಯೇ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡುತ್ತಿದ್ದಾರೆ!
ಮುಂಡಗೋಡು ಬೆಡಸಗಾಂವಿನ ಕೃಷಿಕ ಲಕ್ಷ್ಮಣ ನಾಯ್ಕ ಅವರು ಪ್ರತಿ ವರ್ಷವೂ ತಮ್ಮ ಮನೆ ಮುಂದೆ ಧ್ವಜಾರೋಹಣ ಮಾಡುತ್ತಾರೆ. ಎಲ್ಲಾ ರಾಷ್ಟ್ರೀಯ ಹಬ್ಬದ ದಿನ ಅವರು ಮನೆ ಅಂಗಳದಲ್ಲಿ ಧ್ವಜಾರೋಹಣ ನೆರವೇರಿಸುತ್ತಿದ್ದು, ಅಗಸ್ಟ 15ರ ಈ ದಿನವೂ ಅವರು ಉತ್ಸಾಹದಿಂದ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ದಿನ ಬೆಳಿಗ್ಗೆ ಸರಿಯಾಗಿ 7 ಗಂಟೆಗೆ ಅವರು ತಮ್ಮ ಮನೆ ಮುಂದೆ ರಾಷ್ಟ್ರಧ್ವಜ ಹಾರಿಸುತ್ತಾರೆ. ಕುಟುಂಬದವರು ಸಹ ಈ ಸಡಗರದಲ್ಲಿ ಭಾಗವಹಿಸುತ್ತಾರೆ. ಲಕ್ಷö್ಮಣ ನಾಯ್ಕ ಅವರು ಮನೆಯ ಆವರಣದಲ್ಲಿ ಧ್ವಜಸ್ತಂಭ ಸ್ಥಾಪಿಸಿದ್ದು, ಅಲ್ಲಿಯೇ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಷ್ಟ್ರಗೀತೆಯನ್ನು ಹಾಡುತ್ತಾರೆ. ರಾಷ್ಟ್ರೀಯ ಹಬ್ಬಗಳ ದಿನ ಅವರ ಮನೆ-ಅಂಗಳಗಳೆಲ್ಲವೂ ಅಲಂಕಾರದಿoದ ಕಂಗೊಳಿಸುತ್ತದೆ.
ಎರಡು ದಶಕದ ಹಿಂದೆ ಸಂಭವಿಸಿದ ಅಪಘಾತದಲ್ಲಿ ಲಕ್ಷö್ಮಣ ನಾಯ್ಕ ಅವರ ಕಾಲಿಗೆ ತೀವ್ರವಾಗಿ ಗಾಯವಾಗಿತ್ತು. ಇದರಿಂದಾಗಿ ಹೊರಗಡೆ ತೆರಳಿ ಶಾಲೆಗಳು, ಸಂಘ-ಸoಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಹಬ್ಬಗಳ ಧ್ವಜಾರೋಹಣ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರಿಗೆ ಅಂದಿನ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ್ದ ಕರೆಯೊಂದು ಪ್ರೇರಣೆಯಾಯಿತು. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಯ ಆವರಣದಲ್ಲಿಯೇ ರಾಷ್ಟ್ರಧ್ವಜ ಹಾರಿಸುವಂತೆ ನೀಡಲಾಗಿದ್ದ ಕರೆಯನ್ನು ಅವರು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದರು. ಈ ವಿಚಾರವನ್ನು ಮನದಲ್ಲಿಟ್ಟುಕೊಂಡು, ತಾವು ಹೊರಗೆ ಹೋಗಲು ಸಾಧ್ಯವಾಗದಿದ್ದರೂ ಮನೆಯಂಗಳದಲ್ಲೇ ರಾಷ್ಟ್ರಧ್ವಜಾರೋಹಣ ಮಾಡಬೇಕೆಂದು ನಿರ್ಧರಿಸಿದರು.
ಅದರಂತೆ 2005ರಲ್ಲಿ ಮೊದಲ ಬಾರಿಗೆ ತಮ್ಮ ಮಾವರಾದ ಬೆಡಸಗಾಂವ್ ಸಹಕಾರಿ ಸಂಘದ ಮಾಜಿ ಕಾರ್ಯದರ್ಶಿ ಈಶ್ವರ ಹುಳ್ಳಪ್ಪ ನಾಯ್ಕ ಅವರಿಂದ ಮನೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸತತ ಸುಮಾರು 10 ವರ್ಷಗಳ ಕಾಲ ಈಶ್ವರ ನಾಯ್ಕ ಅವರೇ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಮನೆಯ ಧ್ವಜಾರೋಹಣವನ್ನು ನೆರವೇರಿಸುತ್ತಿದ್ದರು. ಈಶ್ವರ ನಾಯ್ಕ ಅವರು ನಿಧನರಾದ ಬಳಿಕ ಅವರ ಅಳಿಯರಾಗಿರುವ ಲಕ್ಷ್ಮಣ ಕೆರಿಯ ನಾಯ್ಕ ಅವರು ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅಂದಿನಿoದ ಇಂದಿನವರೆಗೂ ಯಾವುದೇ ಅಡೆತಡೆಯಾಗದೇ ಅವರು ಧ್ವಜಾರೋಹಣ ಮಾಡುತ್ತಿದ್ದಾರೆ.
ಅವರ ಮನೆಯಂಗಳ ಧ್ವಜಾರೋಹಣಕ್ಕೆ ಬರುವ ಪ್ರತಿಯೊಬ್ಬರಿಗೂ ಲಕ್ಷ್ಮಣ ನಾಯ್ಕ ಅವರು ಉಡುಗರೆ ನೀಡುತ್ತಾರೆ. ವಿದ್ಯಾರ್ಥಿಗಳಿಗೆ ಪೆನ್ನು, ಪಠ್ಯೋಪಯೋಗಿ ಸಾಮಗ್ರಿ ಹಾಗೂ ಸಿಹಿತಿಂಡಿಗಳನ್ನು ವಿತರಿಸುವ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹಬ್ಬಗಳ ಮಹತ್ವದ ಕುರಿತು ಅರಿವು ಮೂಡಿಸುತ್ತಿದ್ದಾರೆ.ಲಕ್ಷ್ಮಣ ನಾಯ್ಕ ಅವರ ಈ ರಾಷ್ಟ್ರಪ್ರೇಮಕ್ಕೆ ಇದೀಗ ಅವರ ಪುತ್ರ ಕೂಡ ಕೈಜೋಡಿಸಿದ್ದಾರೆ.