2006ರಲ್ಲಿ ಸಿದ್ದಾಪುರದ ಹೊಸೂರಿನಲ್ಲಿ ಶಿಲಾನ್ಯಾಸಗೊಂಡಿದ್ದ ನಾಮದಾರಿ ಸಮಾಜದ ಸಮುದಾಯ ಭವನ ಇನ್ನಷ್ಟು ವಿಸ್ತಾರವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಶಿಲಾನ್ಯಾಸ ಮಾಡಿದ್ದ ಈ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು `ನನ್ನ ರಾಜಕೀಯ ಗುರುಗಳಾದ ಬಂಗಾರಪ್ಪ ಅವರಿಂದ ರೂಪಿತವಾಗಿದ್ದ ಸಮುದಾಯ ಭವನವನ್ನು ಪೂರ್ಣಗೊಳಿಸುವ ಯೋಗ ನನಗೆ ಬಂದಿದ್ದು ಸೌಭಾಗ್ಯ’ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರ ತಾಲೂಕು ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಭಾನುವಾರ ಭೀಮಣ್ಣ ನಾಯ್ಕ ಅವರು ಚಾಲನೆ ನೀಡಿದ್ದಾರೆ. `ಕ್ಷೇತ್ರದ ಪ್ರತಿಯೊಂದು ಸಮಾಜದ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಬಲವರ್ಧನೆಗೆ ಶ್ರಮಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹಲವು ವರ್ಷಗಳಿಂದ ಕುಂಠಿತಗೊAಡಿದ್ದ ಸಮುದಾಯ ಭವನದ ನಿರ್ಮಾಣ ಕಾಮಗಾರಿ ಇದೀಗ ಕೊನೆಯ ಹಂತ ತಲುಪಿದೆ. ಸಮಾಜದ ಮುಖಂಡರು ಕೋರಿದಂತೆ 1.50 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದು, ಈಗಾಗಲೇ 1 ಕೋಟಿ ರೂ ಬಿಡುಗಡೆಯಾಗಿದೆ. ಬಾಕಿ ಉಳಿದ 50 ಲಕ್ಷ ರೂಪಾಯಿಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ’ ಎಂದವರು ಭರವಸೆ ನೀಡಿದ್ದಾರೆ. `ಕ್ಷೇತ್ರದ ಶಾಸಕನಾದ ನಂತರ ಸರ್ವ ಸಮುದಾಯಗಳ ಹಿತ ಬಯಸಿ ಅನುದಾನ ಒದಗಿಸುತ್ತಿದ್ದು, ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ’ ಎಂದು ಸಹ ಅವರು ಈ ವೇಳೆ ಹೇಳಿದ್ದಾರೆ.
`ಈ ಸಮುದಾಯ ಭವನವು ಶೀಘ್ರವೇ ಲೋಕಾರ್ಪಣೆಗೊಂಡು ಸಮಾಜದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಒಗ್ಗೂಡಿಸಿ ನಡೆಸಲು ಉತ್ತಮ ವೇದಿಕೆಯಾಗಲಿ’ ಎಂದವರು ಶುಭ ಹಾರೈಸಿದ್ದು, ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಅಭಿವೃದ್ಧಿ ಯೋಜನೆಗಳಿಗೆ ಮುಂದಿನ ದಿನಗಳಲ್ಲೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಮಾಜದ ಪ್ರತಿಯೊಂದು ಸಮುದಾಯದ ಏಳ್ಗೆಗೆ ಕೇವಲ ಮುಖಂಡರಷ್ಟೇ ಅಲ್ಲದೆ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ಸರ್ವತೋಮುಖ ಬೆಳವಣಿಗೆ ಸಾಧ್ಯ’ ಎಂದು ಕರೆ ನೀಡಿದ್ದಾರೆ. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ ಜಿ ನಾಯ್ಕ ಹಣಜಿಬೈಲ್ ಅವರು `ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಹಾಗೂ ಶಾಸಕ, ಸಂಸದರ ನಿಧಿಯಿಂದ 2.38 ಕೋಟಿ ರೂ ಮತ್ತು ನಾಮಧಾರಿ ಸಮಾಜದ ಜೊತೆಗೆ ವಿವಿಧ ಸಮುದಾಯಗಳಿಂದ 80 ಲಕ್ಷ ರೂ ಸೇರಿ ಇದುವರೆಗೆ ಒಟ್ಟು 3.18 ಕೋಟಿ ರೂ ವೆಚ್ಚವಾಗಿದೆ. ಕಟ್ಟಡದ ಸಂಪೂರ್ಣ ಸಿದ್ಧತೆಗೆ ಅಂದಾಜು 5 ಕೋಟಿ ರೂ ವೆಚ್ಚವಾಗಲಿದ್ದು, ಬರುವ ಮಾರ್ಚ್-ಏಪ್ರಿಲ್ ಒಳಗಾಗಿ ಭವನವನ್ನು ಲೋಕಾರ್ಪಣೆಗೊಳಿಸಲಾಗುತ್ತದೆ’ ಎಂಬ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಆನಂದ ನಾಯ್ಕ, ಉಪಾಧ್ಯಕ್ಷರಾದ ಕೆ ಜಿ. ನಾಗರಾಜ, ವಿ ಎನ್ ನಾಯ್ಕ, ಕಾರ್ಯದರ್ಶಿ ಎಸ್ ಎಂ ನಾಯ್ಕ ಹಾಗೂ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕುಮಾರ ಶೆಟ್ಟಿ ಉಪಸ್ಥಿತರಿದ್ದರು. ಶೈಲಾ ನಾಯ್ಕ ಹಾಗೂ ಸುಧೀರ್ ಬೆಂಗ್ರೆ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೆ ಜಿ ನಾಗರಾಜ ಸ್ವಾಗತಿಸಿದರು. ನಾಗರಾಜ ನಾಯ್ಕ ಬೇಡ್ಕಣಿ ಕಾರ್ಯಕ್ರಮ ನಿರೂಪಿಸಿದ್ದು, ಸಂಘದ ಉಪಾಧ್ಯಕ್ಷ ವಿ ಎನ್ ನಾಯ್ಕ ಬೇಡ್ಕಣಿ ವಂದಿಸಿದರು.