ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಕ್ಕೆ ಖಾಯಂ ವೈದ್ಯರಿಲ್ಲದ ಕಾರಣ ಇಲ್ಲಿ ಏನೇ ಆದರೂ ಅಂಕೋಲಾ ವೈದ್ಯರೇ ಗತಿ ಎನ್ನುವ ಹಾಗಾಗಿದೆ. ತುರ್ತು ಆರೋಗ್ಯ ಸನ್ನಿವೇಶಗಳನ್ನು ಎದುರಿಸಲು ಇಲ್ಲಿ ವೈದ್ಯರು ಸಿಗದ ಕಾರಣ ಅನೇಕರಿಗೆ ಸಮಸ್ಯೆಯಾಗಿದೆ.
ಸೋಮವಾರ ಗೋಕರ್ಣದಲ್ಲಿ ಅಪಘಾತವೊಂದು ನಡೆದಿದ್ದು, ತುರ್ತು ಚಿಕಿತ್ಸೆಗೆ ಸಹ ವೈದ್ಯರು ಸಿಗಲಿಲ್ಲ. ಅದರಿಂದಾಗಿ ಅಲ್ಲಿನ ದಾದಿಯರೇ ಜೀವ ಉಳಿಸಲು ಪರದಾಟ ನಡೆಸಿದರು. ಎರಡು ದಿನದ ಹಿಂದೆ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, ಅವರ ಮರಣೋತ್ತರ ಪರೀಕ್ಷೆಗೆ ಸಹ ವೈದ್ಯರು ಸಿಗಲಿಲ್ಲ. ಕೊನೆಗೆ ಅಂಕೋಲಾದ ವೈದ್ಯರು ಇಲ್ಲಿ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು.
ಪ್ರವಾಸಿ ತಾಣವಾದ ಗೋಕರ್ಣದಲ್ಲಿ ನಿತ್ಯ ಒಂದಿಲ್ಲೊoದು ಅಪಘಾತ, ಅಪರಾಧ, ಅವಘಡಗಳು ನಡೆಯುತ್ತಿವೆ. ಗಾಯಾಳು ಅಥವಾ ಆರೋಪಿಯ ವೈದ್ಯಕೀಯ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆ ಅವಲಂಭಿಸುವುದು ಎಲ್ಲರಿಗೂ ಅನಿವಾರ್ಯವಾಗಿದೆ. ಆದರೆ, ಅನೇಕ ವರ್ಷಗಳಿಂದ ಇಲ್ಲಿ ಖಾಯಂ ವೈದ್ಯರಿಲ್ಲ. ಬೇರೆ ಬೇರೆ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳನ್ನು ಪಾಳಿ ಪ್ರಕಾರ ಇಲ್ಲಿ ಕರ್ತವ್ಯ ನಿಭಾಯಿಸಲು ಸೂಚಿಸಲಾಗಿದ್ದು, ಅನೇಕ ಒತ್ತಡಗಳ ಕಾರಣ ಅವರಿಗೂ ಸರಿಯಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಖಾಯಂ ವೈದ್ಯರ ಬೇಡಿಕೆಯಿದ್ದರೂ ಅದನ್ನು ಸರ್ಕಾರ ಈಡೇರಿಸುತ್ತಿಲ್ಲ.
ಸೋಮವಾರ ಅಪರಾಧ ಪ್ರಕರಣದ ಆರೋಪಿಗೆಯ ವೈದ್ಯಕೀಯ ತಪಾಸಣೆ ನಡೆಸಲು ಇಲ್ಲಿ ಸಮಸ್ಯೆಯಾಗಿದೆ. ಅಪಘಾತದಲ್ಲಿ ತೀವ್ರಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುವವರಿಲ್ಲದೇ ಅವರು ನೋವು ಅನುಭವಿಸಿದ್ದಾರೆ. ಈ ದಿನ ಕೋಡ್ಕಣಿ ಆರೋಗ್ಯ ಕೇಂದ್ರದ ವೈದ್ಯರು ಪಾಳಿ ಪ್ರಕಾರ ಗೋಕರ್ಣದಲ್ಲಿ ಕೆಲಸ ನಿರ್ವಹಿಸಬೇಕಿದ್ದು, ಅವರ ಅನುಪಸ್ಥಿತಿ ಸಮಸ್ಯೆಯನ್ನು ಇನ್ನಷ್ಟು ದೊಡ್ಡದಾಗಿಸಿದೆ. ಈ ವೇಳೆ ಹಾಜರಿದ್ದ ಶುಶ್ರೂಷಕಿಯೊಬ್ಬರು ಬೈಕಿನಿಂದ ಬಿದ್ದು ಗಾಯಗೊಂಡಿದ್ದ ರೋಗಿಗೆ ತುರ್ತು ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕಳುಹಿಸಿದ್ದಾರೆ.