ಮುರುಡೇಶ್ವರ ಬಳಿ ಎರಡು ದೇವಾಲಯದಲ್ಲಿ ಕಳ್ಳತನ ನಡೆದಿದೆ. ಬೈಲೂರು ಗ್ರಾಮದ ತೆಂಗಾರ ಊರಿನಲ್ಲಿರುವ ಲಕ್ಷ್ಮೀನಾರಾಯಣ ದೇವಾಲಯ ಹಾಗೂ ಸಮೀಪದಲ್ಲಿರುವ ಉಡುಪಿ ಗೋಪಾಲಕೃಷ್ಣ ದೇಗುಲಕ್ಕೆ ಕಳ್ಳರು ನುಗ್ಗಿದ್ದಾರೆ.
ನವೆಂಬರ್ 9ರ ರಾತ್ರಿ ಈ ಕಳ್ಳತನ ನಡೆದಿದ್ದು, ಮರುದಿನ ಬೆಳಗ್ಗೆ ಗೊತ್ತಾಗಿದೆ. ದೇವಾಲಯದಲ್ಲಿದ್ದ ಒಡವೆ, ಪಾತ್ರೆ, ಕಾಣಿಕೆ ಡಬ್ಬಿಯ ಹಣವನ್ನು ಕಳ್ಳರು ದೋಚಿದ್ದಾರೆ. ದೇವಾಲಯದ ಗೋಡೆ ಹಾರಿ ಆವಾರ ಪ್ರವೇಶಿಸಿದ ಕಳ್ಳರು ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಲಕ್ಷ್ಮೀನಾರಾಯಣ ದೇವಾಲಯದ ಪಂಚಲೋಹ ಮೂರ್ತಿಯನ್ನು ಅಪಹರಿಸಿದ್ದಾರೆ.
ಅದಾದ ನಂತರ ಅಲ್ಲಿದ್ದ ಬೆಳ್ಳಿ-ಬಂಗಾರ ದೋಚಿದ ಕಳ್ಳರು ಕಾಣಿಕೆ ಡಬ್ಬಿ ಒಡೆದಿದ್ದಾರೆ. ಡಬ್ಬಿಯಲ್ಲಿದ್ದ ಅಂದಾಜು 27 ಸಾವಿರ ರೂ ಹಣವನ್ನು ಎಗರಿಸಿದ್ದಾರೆ. ಅದಾದ ನಂತರ ಸಮೀಪದ ಉಡುಪಿ ಗೋಪಾಲಕೃಷ್ಣ ದೇಗುಲವನ್ನು ಪ್ರವೇಶಿಸಿ ಅಲ್ಲಿನ ದೇವರಿಗೆ ಇದ್ದ ಬೆಳ್ಳಿಯ ಕಣ್ಣುಗಳು ತೆಗೆದಿದ್ದಾರೆ. ಅಲ್ಲಿಯೂ ಪೂಜಾ ಸಾಮಗ್ರಿ ಹಾಗೂ ಬಂಗಾರದ ಆಭರಣವನ್ನು ಅಪಹರಿಸಿದ್ದಾರೆ. ಅದಾದ ನಂತರ ಅಲ್ಲಿನ ಕಾಣಿಕೆ ಡಬ್ಬಿಯ ಹಣವನ್ನು ಬಿಡದೇ ಒಯ್ದಿದ್ದಾರೆ. ಕಳ್ಳತನದ ದೂರು ದಾಖಲಿಸಿಕೊಂಡ ಮುರುಡೇಶ್ವರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ.